ರಾಜೀನಾಮೆಗೆ ಕಾರಣ ಬಿಚ್ಚಿಟ್ಟ KR ಪೇಟೆ ಅನರ್ಹ ಶಾಸಕ
ರಾಜ್ಯ ರಾಜಕೀಯದಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಮಂಡ್ಯದ ಅನರ್ಹ ಶಾಸಕರೋರ್ವರು ತಮ್ಮ ರಾಜೀನಾಮೆಗೆ ಕಾರಣ ಏನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಮಂಡ್ಯ (ಆ.12): ನಾನು ದೇವೇಗೌಡರ ಕುಟುಂಬದ ಹೆಣ್ಣು ಮಕ್ಕಳ ಕಿರುಕುಳದಿಂದಲೇ ಬೇಸತ್ತು ರಾಜೀನಾಮೆ ನೀಡಿದೆ ಎಂದು ಕೆ.ಆರ್ ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಾರಾಯಣ ಗೌಡ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದೇವೇಗೌಡರ ಹೆಣ್ಣು ಮಕ್ಕಳು ಮೂಗು ತೂರಿಸುತ್ತಿದ್ದರು. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ ಬಳಿ ಹೋಗುತ್ತಿದ್ದ ಫೈಲ್ ಹಾಗೆಯೇ ಕಾಣೆಯಾಗುತ್ತಿತ್ತು. ಇದರಿಂದಲೇ ಬೇಸತ್ತು ದೂರವಾದೆ ಎಂದರು.
ನಾರಾಯಣ ಗೌಡ ಒಬ್ಬ ಕ್ರಿಮಿನಲ್: ಎಚ್ಡಿಕೆ
ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿ ಕಾರಿದ ನಾರಾಯಣ ಗೌಡ ರಮೇಶ್ ಕುಮಾರ್ರನ್ನು ಗುರುಗಳಂತೆ ಕಾಣುತ್ತಿದ್ದೆ, ಅವರ ನಡವಳಿಕೆಯಿಂದ ನಾನು ಮನನೊಂದಿದ್ದೇನೆ. ಅನರ್ಹತೆಗೊಳಿಸಿ ತೀರ್ಪು ನೀಡುತ್ತಾರೆ ಎಂದು ನಿರೀಕ್ಷೆಯನ್ನೂ ಮಾಡಿರಲಿಲ್ಲ ಎಂದರು.
ಕುಮಾರಸ್ವಾಮಿ ಸರ್ಕಾರ ಪತನಕ್ಕೆ ನಾನೊಬ್ಬನೆ ಕಾರಣನಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬೆಂಬಲಿಗರು ರಾಜಿನಾಮೆ ನೀಡಿದ್ದಾರೆ. ನಾವ್ಯಾರು ಹಣದಾಸೆಗೆ ರಾಜಿನಾಮೆ ನೀಡಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಅಸಮಾಧಾನ ಹೊರಹಾಕಿದರು.