ರಾಜೀನಾಮೆ ನೀಡಿದ ಮತ್ತೋರ್ವ ಜೆಡಿಎಸ್ ನಾಯಕ
ಎಚ್. ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಇನ್ನೋರ್ವ ಮುಖಂಡ ಕೂಡ ತಮ್ಮ ಹುದ್ದೆಗೆ ಗುಡ್ ಬೈ ಹೇಳಿದ್ದಾರೆ.
ಮಂಡ್ಯ : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ನೀಡುತ್ತಿದ್ದಂತೆ ಜೆಡಿಎಸ್ ನ ಮತ್ತೋರ್ವ ನಾಯಕ ಹುದ್ದೆ ತೊರೆದಿದ್ದಾರೆ.
ಕೆ.ಆರ್.ನಗರದ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕಿದೆ. ಯುವಕರಿಗೆ ಆದ್ಯತೆ ನೀಡಲು ರಾಜೀನಾಮೆ ನೀಡಿದ್ದೇನೆ. ತಮ್ಮ ರಾಜೀನಾಮೆ ಹಿಂದೆ ಪುರಸಭಾ ಚುನಾವಣೆಯ ಸೋಲಿನ ಹೊರತಾದ ಮತ್ತಾವುದೇ ಕಾರಣವಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಹದಿನೇಳು ವರ್ಷಗಳ ಕಾಲ ತಾಲೂಕು ಜೆಡಿಎಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರವಾಸೋದ್ಯಮ ಸಾ.ರಾ. ಮಹೇಶ್, ಪಕ್ಷದ ತಾಲೂಕು ಮುಖಂಡರು, ಕಾರ್ಯಕರ್ತರು ಮತ್ತು ತಮ್ಮ ಹಿತೈಷಿಗಳಿಗೆ ಕೃತಜ್ಞತೆ ಎಂದು ಚಂದ್ರಶೇಖರ್ ಹೇಳಿದರು.