ಜಾರಕಿಹೊಳಿ ಸೀಡಿ ಕೇಸ್ : ಭಾರಿ ಸಂಶಯಕ್ಕೆ ಎಡೆ ಮಾಡಿದ ನಡೆ
ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದ್ದು ಇದರಿಂದ ರಾಜಕೀಯ ಚರ್ಚೆಗಳು ಜೋರಾಗಿದೆ. ಇದೇ ಈ ಬಗ್ಗೆ ಭಾರೀ ಸಂಶಯವೊಂದು ಮೂಡಿದೆ.
ಮೈಸೂರು (ಮಾ.24): ಮಾರ್ಚ್ 2013ರಲ್ಲಿ ಜಾರಿಗೆ ಬಂದಿರುವ ನಿರ್ಭಯ ಕಾಯಿದೆ ಪ್ರಕಾರ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ವಿವಿಧ ಸೆಕ್ಷನ್ಗಳಡಿಯಲ್ಲಿ ಕೇಸ್ ದಾಖಲಿಸಬೇಕಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ. ಆದರೆ, ಪ್ರಭಾವಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿಯವರ ವಿಚಾರದಲ್ಲಿ ಎಫ್ಐಆರ್ ದಾಖಲಾಗದಿರುವುದು ರಾಜ್ಯದ ಜನರಲ್ಲಿ ಸಂಶಯಕ್ಕೆಡೆ ಮಾಡಿಕೊಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದರು.
ಸಂತ್ರಸ್ಥ ಯುವತಿಯ ವಿಡಿಯೋ ಆಡಿಯೋಗಳು ಪೊಲೀಸರಿಗೆ ಸಿಕ್ಕಿದ್ದರೂ ಅಪರಾಧಿ ಸ್ಥಾನದಲ್ಲಿರುವ ರಮೇಶ್ ಜಾರಿಕಿಹೊಳಿಯವರನ್ನೇ ಸಂತ್ರಸ್ಥರೆಂಬಂತೆ ಬಿಂಬಿಸಲಾಗುತ್ತಿದೆ. ಸಂತ್ರಸ್ಥ ಯುವತಿಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದರೂ ಆಕೆಯನ್ನು ಹುಡುಕಿ ರಕ್ಷಣೆ ನೀಡಲಾಗಿಲ್ಲ. ತನಿಖೆಯ ದಿಕ್ಕನ್ನು ತಪ್ಪಿಸುತ್ತಿರುವ ರಮೇಶ್ ಜಾರಕಿಹೊಳಿಯವರನ್ನು ಕಾಪಾಡಬೇಕೆಂಬ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ನ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ..
ಮುಂದಿನ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ವರುಣದಿಂದ ಕಣಕ್ಕಿಳಿಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಬೇಕಾದರೆ ಯಡಿಯೂರಪ್ಪ ಅವರೇ ವರುಣಕ್ಕೆ ಬಂದು ಸ್ಪರ್ಧಿಸಲಿ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಈಶ್ವರ್ ಚಕ್ಕಡಿ, ಮಹೇಶ್ ಇದ್ದರು.