*  ಲಿಬೇರಿಯಾ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗಂಗಾವತಿ ಯುವಕ*  ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವ ಸಂಸದರು*  ಕೂಡಲೇ ಆತನಿಗೆ ಸಹಾಯ ಹಸ್ತ ಚಾಚುವಂತೆ ಮನವಿ 

ಕೊಪ್ಪಳ(ಆ.11): ಆಫ್ರಿಕಾ ಖಂಡದ ಲಿಬೇರಿಯಾ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗಂಗಾವತಿಯ ಯುವಕ ಮೆಹಬೂಬಸಾಬ ನೆರವಿಗೆ ಸಂಸದ ಸಂಗಣ್ಣ ಕರಡಿ ಅವರು ಮುಂದಾಗಿದ್ದಾರೆ.

Add Asianetnews Kannada as a Preferred SourcegooglePreferred

‘ಕನ್ನಡಪ್ರಭ’ ಹಾಗೂ 'ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಾಟ್‌ ಕಾಂ'ನಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಅವರು, ತಕ್ಷಣ ಸ್ಪಂದಿಸಿದ್ದಾರೆ. ಅವರ ಕುಟುಂಬದವರೊಂದಿಗೆ ಮಾತನಾಡಿ, ಅವರ ನೆರವಿಗೆ ಧಾವಿಸುತ್ತಿದ್ದಾರೆ. ಪ್ರಕರಣದ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ ಸಂಸದರು, ತಕ್ಷಣ ವಿದೇಶಾಂಗ ಸಚಿವ ಜಯಶಂಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಗಂಗಾವತಿಯ ಮೆಹಬೂಬಸಾಬ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಆಫ್ರಿಕಾದ ಲಿಬೇರಿಯಾ ದೇಶದ ಕಂಪನಿಯೊಂದರಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹೆಡ್ರಾಲಿಕ್‌ ಮೆಕ್ಯಾನಿಕ್‌ ಪದವೀಧರನಾಗಿರುವ ಈತನಿಗೆ ಅಲ್ಲಿ ಕೆಲಸ ಸಿಕ್ಕಿದೆ.
ಆದರೆ, ಕಂಪನಿ ನೇಮಕಾತಿ ಮಾಡಿಕೊಳ್ಳುವ ನಿಯಮಾವಳಿಗಳನ್ನು ಸರಿಯಾಗಿ ಅನುಸರಿಸದೆ ಗುಡ್ಡಗಾಡಿನಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ. ಅಷ್ಟೇ ಅಲ್ಲ, ಆತನಿಗೆ ಸಕಾಲಕ್ಕೆ ಊಟ, ತಿಂಡಿಯನ್ನು ನೀಡುತ್ತಿಲ್ಲ. ನಾಲ್ಕು ತಿಂಗಳಿಂದ ವೇತನ ಸಹ ಕೊಟ್ಟಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗನ ರಕ್ಷಣೆಗೆ ಯತ್ನ..!

ಇದಕ್ಕಿಂತ ಮಿಗಿಲಾಗಿ ಆತನಿಗೆ ಕಿರುಕುಳ ನೀಡುತ್ತಿದ್ದಾರೆ. ಮರಳಿ ಊರಿಗೆ ಬರಲು ಸಹ ಅನುವು ಮಾಡಿಕೊಡುತ್ತಿಲ್ಲವಂತೆ. ಆದ್ದರಿಂದ ತಕ್ಷಣ ಈ ದಿಸೆಯಲ್ಲಿ ಸಂಬಂಧಪಟ್ಟವರಿಗೆ ಸೂಚನೆ ನೀಡಿ, ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗಂಗಾವತಿಯ ಮೆಹಬೂಬಸಾಬನನ್ನು ಪಾರು ಮಾಡಿ, ಮರಳಿ ಬರುವುದಕ್ಕೆ ಕ್ರಮವಹಿಸಲು ಸೂಚಿಸಬೇಕು. ಈ ಮೂಲಕ ಆತನ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಯಾಕೆ ಹೀಗಾಯಿತು?

ಗಂಗಾವತಿಯ ಮೆಹಬೂಬಸಾಬನಿಗೆ ಯಾಕೆ ಹೀಗಾಯಿತು ಎನ್ನುವುದೇ ಈಗ ದೊಡ್ಡ ಸವಾಲು ಆಗಿದೆ. ಈತನ ಜೊತೆಗೆ ಇನ್ನು ಅನೇಕರು ಇದೇ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದಾರೆ. ಹೀಗಿರುವಾಗ ಈತನ ರಕ್ಷಣೆಯ ಜೊತೆಗೆ ಇತರರ ಪರಿಸ್ಥಿತಿಯನ್ನು ಕೇಂದ್ರ ಸರ್ಕರ ಗಮನಿಸಬೇಕಾಗುತ್ತದೆ.

ಅದರಲ್ಲೂ ಆಫ್ರಿಕಾ ಮೂಲದವರು ಬೆಂಗಳೂರಿನಲ್ಲಿ ರಂಪಾಟ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿರುವುದರಿಂದ ಈ ಬಗ್ಗೆ ಪರಾಮರ್ಶೆ ಮಾಡುವುದು ಉತ್ತಮ ಎನ್ನಲಾಗುತ್ತದೆ.
ಗಂಗಾವತಿಯ ಮೆಹಬೂಬಸಾಬ ರಕ್ಷಣೆಗಾಗಿ ವಿದೇಶಾಂಗ ಸಚಿವರಿಗೆ ಪತ್ರ ಬರೆದು ವಿವರಣೆ ನೀಡಲಾಗಿದೆ. ಆತನ ರಕ್ಷಣೆ ಮಾಡುವ ದಿಸೆಯಲ್ಲಿ ಕ್ರಮ ವಹಿಸಲು ಕೋರಲಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.