ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್ , ಗಡೀಪಾರು
ರಾಜ್ಯದಲ್ಲಿ 5 ದಿನದಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು ಇದರ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಗಡಿ ಪಾರು ಮಾಡಲಾಗಿದೆ.
ಬೆಳಗಾವಿ (ಏ.11): ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಹೊರವಲಯದ ಹಲಗಾ ಗ್ರಾಮದಲ್ಲಿರುವ ಸುವರ್ಣ ಗಾರ್ಡನ್ನಲ್ಲಿ ನೌಕರರು ಶನಿವಾರ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ನಗರದಲ್ಲಿ ವಶಕ್ಕೆ ಪಡೆದು ಬೆಳಗಾವಿ ಜಿಲ್ಲೆಯಿಂದ ಗಡೀಪಾರು ಮಾಡಿದರು. ನಂತರ ಸಭೆಗೆ ಆಗಮಿಸಿದ್ದ 23ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಯನ್ನು ಹಿರೇಬಾಗೆವಾಡಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ನೌಕಕರ ಸಭೆಗೆ ಆಗಮಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಬೆಳಗಾವಿ ನಗರದ ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಹೊಟೇಲ್ಗೆ ತೆರಳಿ ವಶಕ್ಕೆ ಪಡೆದರು. ನಂತರ ಬೆಳಗಾವಿ ಜಿಲ್ಲೆಯಿಂದ ಗಡಿ ದಾಟಿಸಿದರು. ಸಭೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೂ, ಸಭೆ ನಡೆಸಲು ನಿರ್ಧರಿಸಿದ್ದ ಪೊಲೀಸರು ವಶಕ್ಕೆ ಪಡೆದರು.
ತಟ್ಟೆ, ಲೋಟ ಬಡಿದು ಧರಣಿ: ಕೋಡಿಹಳ್ಳಿ ಚಂದ್ರಶೇಖರ್
ಪೊಲೀಸರು ಕರೆದೊಯ್ಯುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಿದು ಎನ್ನುತ್ತಿದ್ದಾರೆ. ಸಕಾರಣ ಗೊತ್ತಿಲ್ಲ. ಇದು ತಪ್ಪು. ಚಳವಳಿ ದಮನ ನೀತಿ ಇದಾಗಿದೆ. ಈ ಬಂಧನ ಅಕ್ರವಾಗುತ್ತದೆ. ದಮನವಾಗುತ್ತದೆ ಎಂದು ಆರೋಪಿಸಿದರು. ಯಾವಾಗಲೂ ವಾಕ್ ಸ್ವಾತಂತ್ರ್ಯ ಮತ್ತು ಚಳವಳಿ ನಡೆಸುವ ಸ್ವಾತಂತ್ರ್ಯ ಇರಬೇಕು. ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಆಗಲಿ, ಇದನ್ನು ನಾವು ಸ್ವಾಗತ ಮಾಡುತ್ತೇವೆ’ ಎಂದು ಹೇಳಿದರು.