ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಭೂಕುಸಿತವಾಗುವುದಕ್ಕೆ ಹಾರಂಗಿ ಜಲಾಶಯದಲ್ಲಿ ತುಂಬಿರುವ ಹೂಳೇ ಕಾರಣ ಎನ್ನುವುದು ಸಾಬೀತಾಗಿತ್ತು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಜು.13): ಜಿಲ್ಲೆಯಲ್ಲಿ 2018 ರಿಂದಲೂ ನಾಲ್ಕು ವರ್ಷಗಳ ಕಾಲ ಭೂಕುಸಿತ, ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಅದರಲ್ಲೂ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು, ಹಮ್ಮಿಯಾಲ, ಮಕ್ಕಂದೂರು ಹಾಗೂ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಭೂಕುಸಿತವಾಗುವುದಕ್ಕೆ ಹಾರಂಗಿ ಜಲಾಶಯದಲ್ಲಿ ತುಂಬಿರುವ ಹೂಳೇ ಕಾರಣ ಎನ್ನುವುದು ಸಾಬೀತಾಗಿತ್ತು. ಹೀಗಾಗಿಯೇ ಆ ಹೂಳನ್ನು ತೆಗೆಯುವುದಕ್ಕಾಗಿ 2019 ರಲ್ಲಿ ಅಂದಿನ ಬಿಜೆಪಿ ಸರ್ಕಾರ 131 ಕೋಟಿ ಹಣವನ್ನು ಬಜೆಟ್ನಲ್ಲಿಯೇ ಘೋಷಿಸಿತ್ತು. ಆದರೆ ಇಂದಿಗೂ ಹೂಳು ತೆಗೆಯಲು ಸಾಧ್ಯವೇ ಆಗಿಲ್ಲ. 

ಆದರೀಗ ಅದೇ ಹೂಳು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಬರುವ ಗ್ರಾಮಗಳಲ್ಲಿ ಭೂಕುಸಿತವಾಗುವುದಕ್ಕೆ ಕಾರಣವಾಗುತ್ತಾ ಎನ್ನುವ ಆತಂಕ ಶುರುವಾಗಿದೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ಮೂರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರಿದು ಬರುತ್ತಿದ್ದು ಬಹುತೇಕ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಆದರೆ ನಿಜವಾಗಿಯೂ ಹೇಳಬೇಕೆಂದರೆ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಬರೋಬ್ಬರಿ 1.5 ಟಿಎಂಸಿ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಅಂದರೆ ಜಲಾಶಯದಲ್ಲಿ ಇನ್ನು ಕೇವಲ 7 ಟಿಎಂಸಿ ನೀರು ಮಾತ್ರವೇ ಭರ್ತಿಯಾಗಲು ಅವಕಾಶವಿದೆ. 

ಮುಳ್ಳಯ್ಯನಗಿರಿಗೆ ಪ್ರವಾಸಿಗರ ಲಗ್ಗೆ: ಕಾರ್ಯಾಚರಣೆಗಿಳಿದ ಎಸ್ಪಿ, ಕೇಸ್‌ಗಟ್ಟಲೆ ಮದ್ಯದ ಬಾಟಲಿಗಳು ವಶಕ್ಕೆ!

ಅಂದರೆ ಸಾಕಷ್ಟು ಮಳೆ ಬಂದಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬಂದರೆ ಆ ನೀರನ್ನು ಜಲಾಶಯದಲ್ಲಿ ನಿಲ್ಲಿಸುವ ಬದಲು ಹಾಗೆಯೇ ನದಿಗೆ ಹರಿಸಬೇಕು. ಇಲ್ಲದಿದ್ದರೆ ಹಾರಂಗಿ ಜಲಾನಯನ ಪ್ರದೇಶದ ಗ್ರಾಮಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಭೂಕುಸಿತವಾಗುವ ಆತಂಕವಿದೆ. ಆ ಹೂಳನ್ನು ತೆಗೆಯುವುದಕ್ಕಾಗಿ 2019 ರಲ್ಲಿ ಅಂದಿನ ಬಿಜೆಪಿ ಸರ್ಕಾರ 131 ಕೋಟಿ ರೂಪಾಯಿಯನ್ನು ಬಜೆಟ್ನಲ್ಲಿಯೇ ಘೋಷಿಸಿತ್ತು. ವಿಪರ್ಯಾಸವೆಂದರೆ ಇಂದಿಗೂ ಹಾರಂಗಿ ಇಲಾಖೆ ಆ ಹೂಳು ತೆಗೆದಿಲ್ಲ. ಕೇಳಿದರೆ ಹೂಳು ತೆಗೆಯುವುದಕ್ಕೆ ಈಗಾಗಲೇ ಸರ್ವೇ ಮಾಡಿದ್ದೇವೆ. 

ಅಲ್ಲದೆ ಹಾರಂಗಿ ಜಲಾಶಯಕ್ಕೆ ಹರಿದು ಬರುವ ಕಕ್ಕೆಹೊಳೆ, ಹಮ್ಮಿಯಾಲ ಹೊಳೆ, ಮಾದಾಪುರ ಹೊಳೆಗಳ ಕೆಲವು ಕಡೆಗಳಲ್ಲಿ ಗೇಬಿಯನ್ ವಾಲ್ಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ಒಂದು ವೇಳೆ ಜಲಾಶಯಕ್ಕೆ ಮತ್ತೆ ಹೂಳು ಹರಿದು ಬರುವ ಸಾಧ್ಯತೆ ಇದ್ದರೆ ಈ ಗೇಬಿಯನ್ ವಾಲ್ ತಡೆಯಲಿವೆ. ಇನ್ನು ತುಂಬಿರುವ ಹೂಳು ತೆಗೆಯಬೇಕಾದರೆ ಮಳೆ ಸ್ವಲ್ಪ ಕಡಿಮೆಯಾಗಬೇಕು ಎನ್ನುತ್ತಿದ್ದಾರೆ ಹಾರಂಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ. ಆದರೆ ಇನ್ನು ಎರಡು ತಿಂಗಳು ಕಾಲ ಜಿಲ್ಲೆಯಲ್ಲಿ ಮಳೆ ನಿಲ್ಲುವ ಸಾಧ್ಯತೆ ತೀರ ವಿರಳ. 

ಶೀಘ್ರದಲ್ಲಿ ಬೀದಿ ಸಮಿತಿ ಸಭೆ ಜರುಗಿಸಲು ಕ್ರಮ: ಸಿಎಂ ಆದೇಶಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ತಕ್ಷಣದ ಸ್ಪಂದನೆ

ಅಂದರೆ ಈ ಮಳೆಗಾಲಕ್ಕೆ ಹಾರಂಗಿ ಜಲಾಶಯದ ಹೂಳು ತೆಗೆಯುವುದು ಬಹುತೇಕ ಆಗುವುದಿಲ್ಲ. ಆದರೆ ಇದೇ ಹೂಳು ಹಲವು ಗ್ರಾಮಗಳಲ್ಲಿ ಮತ್ತೆ ಭೂಕುಸಿತವಾಗುವುದಕ್ಕೆ ಕಾರಣವಾಗಬಹುದು ಎಂಬ ಆತಂಕಕ್ಕೆ ತಂದೊಡ್ಡಿದೆ. ಹೀಗಾಗಿಯೇ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ನಮ್ಮ ಸರ್ಕಾರ ಇರುವಾಗಲೇ ಹೂಳು ತೆಗೆಯುವುದಕ್ಕೆ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಯಾವ ಕಾರಣಕ್ಕಾಗಿ ಹೂಳು ತೆಗೆಯದೇ ಬಿಟ್ಟಿದ್ದಾರೋ ಗೊತ್ತಿಲ್ಲ. ಹೂಳು ತೆಗೆದಿದ್ದರೆ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಒಂದಷ್ಟು ಆತಂಕ ಕಡಿಮೆಯಾಗುತಿತ್ತು ಎಂದು ಇಲಾಖೆ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.