ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಡಿಕೇರಿ (ಮಾ.19): ಕೊಡಗು ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂತರ್ ಗೌಡ ಮತ್ತು ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

Add Asianetnews Kannada as a Preferred SourcegooglePreferred

ಕೊಡಗಿನಲ್ಲಿ ವನ್ಯಜೀವಿಗಳಿಂದ ಅಮೂಲ್ಯ ಜೀವ ಹಾನಿ ಆಗುತ್ತಿರುವುದು ಆತಂಕದ ವಿಷಯವಾಗಿದ್ದು, ಹಾಲಿ ಇರುವ 422 ಕಿ.ಮೀ. ಆನೆ ಕಂದಕ ಮತ್ತು 544 ಕಿ.ಮೀ. ತೂಗು ಸೌರಬೇಲಿಯ ಸಮರ್ಪಕ ದುರಸ್ತಿ ಕಾರ್ಯವನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಸಂಭವಿಸುವ ಸಾವುಗಳ ಪೈಕಿ ಶೇ.38ರಷ್ಟು ಕೊಡಗು ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ನಿಯಂತ್ರಿಸಲು ಗಸ್ತು ಹೆಚ್ಚಳ ಮಾಡಬೇಕು. ಆನೆ ಕಾರ್ಯಪಡೆ, ತ್ವರಿತ ಸ್ಪಂದನಾ ಪಡೆ ಸೇರಿದಂತೆ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣ ಘಟಕಗಳನ್ನು ಬಲಪಡಿಸುವಂತೆ ಸೂಚಿಸಿದರು.

4 ವಾಹನ ಖರೀದಿಗೆ ಸಮ್ಮತಿ: ಆನೆ ಸೇರಿದಂತೆ ವನ್ಯಜೀವಿಗಳು ತೋಟಗಳಿಗೆ ಬಂದಾಗ ಅವುಗಳನ್ನು ಕಾಡಿಗೆ ಮರಳಿಸಲು ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಲು ಹಾಲಿ ಇರುವ 6 ವಾಹನಗಳ ಜೊತೆಗೆ ಈಗಾಗಲೇ 4 ವಾಹನ ಖರೀದಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ 4 ವಾಹನ ಖರೀದಿಸಿ, ಸ್ಥಳೀಯ ಉತ್ಸಾಹಿ ಯುವಕರನ್ನು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯಪಡೆಗೆ ಸೇರ್ಪಡೆ ಮಾಡಿಕೊಂಡು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಖಂಡ್ರೆ ಸೂಚಿಸಿದರು. ವನ್ಯಜೀವಿಗಳ ಸಂಚಾರ ಮಾಹಿತಿ ರವಾನಿಸಲು, ಅಕ್ರಮ ಮರ ಕಡಿತಲೆ ಮತ್ತು ವನ್ಯಜೀವಿ ಕಳ್ಳಬೇಟೆ ನಿಗ್ರಹಿಸಲು ಬಲಿಷ್ಠ ನಿಸ್ತುಂತು ಜಾಲ (ವೈರ್ ಲೆಸ್ ನೆಟ್ ವರ್ಕ್) ಕಾರ್ಯಾರಂಭಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸಚಿವರು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.

ಮಾಹಿತಿ ನೀಡಲು ಆದೇಶ: ಕೊಡಗು ಜಿಲ್ಲೆಯಲ್ಲಿನ ಪ್ರತಿ ವಲಯದಲ್ಲಿರುವ ತೋಟಗಳಲ್ಲಿ ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ದತ್ತಾಂಶ ಕಲೆ ಹಾಕಿ, ಆಯಾ ವಲಯದಲ್ಲಿ ವನ್ಯಜೀವಿಗಳು ಅದರಲ್ಲೂ ಆನೆಗಳು ಜನ ವಸತಿ, ತೋಟಗಳ ಬಳಿ ಬಂದಾಗ ಆ ಕಾರ್ಮಿಕರಿಗೆ ತಕ್ಷಣವೇ ವಾಟ್ಸ್ ಅಪ್ ಮೂಲಕ ಮತ್ತು ಮೈಕ್ ಅಳವಡಿಸಿದ ವಾಹನಗಳ ಮೂಲಕ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆಯೂ ಸೂಚಿಸಿದರು.

ನೀರಿನ ಕೊರತೆ ನೀಗಿಸಲು ಸೂಚನೆ

ಮಾರ್ಚ್ ಕೊನೆಯ ವಾರದಿಂದ ಮೇ ತಿಂಗಳವರೆಗೆ ಬಿರು ಬಿಸಿಲು ಇರುವ ಕಾರಣ ಕಾಡಿನಲ್ಲಿ ವನ್ಯಜೀವಿಗಳಿಗೆ ನೀರಿನ ಮತ್ತು ಮೇವಿನ ಕೊರತೆ ಬಾರದಂತೆ ಕ್ರಮ ವಹಿಸಲು ಮತ್ತು ಕಾಡಿನೊಳಗಿರುವ ಜಲಗುಂಡಿಗಳಲ್ಲಿ ಇರುವ ನೀರಿನ ಪ್ರಮಾಣದ ಬಗ್ಗೆ ಸಾರ್ವಜನಿಕರಿಗೆ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಈಶ್ವರ ಖಂಡ್ರೆ ತಿಳಿಸಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಹಿರಿಯ ಅರಣ್ಯಾಧಿಕಾರಿಗಳಾದ ಮನೋಜ್ ರಾಜನ್, ಮನೋಜ್ ಕುಮಾರ್, ಸೋನಾಲ್ ವ್ರಿಸ್ನಿ ಮತ್ತಿತರರು ಪಾಲ್ಗೊಂಡಿದ್ದರು.