ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಬೇಡ/ 32 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಡಿಸಿಎಂ/ ಕೊರೋನಾ ವಾರಿಯರ್ಸ ಗೆಳಿಗೆ ಕೆಂಪೇಗೌಡ ಪ್ರಶಸ್ತಿ/ ಸಾಧಕರಿಗೆ ಸನ್ಮಾನ

ಬೆಂಗಳೂರು(ಸೆ.10) ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, 32 ಮಂದಿ ಕೊರೋನ ವಾರಿಯರುಗಳಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಸರಿಯಲ್ಲ. ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

Add Asianetnews Kannada as a Preferred SourcegooglePreferred

ಬಿಬಿಎಂಪಿ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ವಾರಿಯರುಗಳಿಗೇ ಕೇಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಲಾಗಿತ್ತು. ಆದರಂತೆ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಅವರನ್ನು ಗುರುತಿಸಿ ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ ಎಂದರು.

ಕಳೆದ ವರ್ಷ ಯಾರಿಗೆಲ್ಲ ಸಿಕ್ಕಿತ್ತು ಕೆಂಪೇಗೌಡ ಪ್ರಶಸ್ತಿ

ಕೇವಲ ಕೊರೋನಾ ವಾರಿಯರ್ಸ್‌ ಜತೆಗೆ ಬೇರೆಯವರಿಗೂ ಪ್ರಶಸ್ತಿ ನೀಡಲಾಗಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ಈ ಬಾರಿ ಆಯ್ಕೆ ಸಮಿತಿಯು ಉತ್ತಮ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಪೈಕಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್‌ ವಿರುದ್ಧ ಹೋರಾಟ ನಡೆಸಿದವರನ್ನೇ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಂದಿನಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಈ ವರ್ಷ ಕೋವಿಡ್‌ ದುಡಿದವರನ್ನು ಗೌರವಿಸಲಾಗಿದೆ. ಮೊತ್ತ ಮೊದಲು ಕೋವಿಡ್‌ ಆಸ್ಪತ್ರೆ ಆರಂಭಿಸಿ ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಡಾ. ಆಸೀಮಾ ಭಾನು, ಹೋಮ್‌ ಕ್ವಾರಂಟೈನ್‌ ಹಾಗೂ ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ಉತ್ತೇಜನ ನೀಡಿದ ಡಾ. ಮೀನಾ ಗಣೇಶ್‌, ಡಾ, ನವೀನ್‌ ಬೆನಕಪ್ಪ, ಡಾ. ವೆಂಕಟೇಶ ಮೂರ್ತಿ, ಜೈವಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡಿರುವ ತಸ್ಲೀಮ್‌ ಆರೀಫ್‌ ಸೈಯ್ಯದ್‌, ಯುವಕರಿಗೆ ಸ್ಫೂರ್ತಿ ಆಗಿರುವ ನಿತಿನ್‌ ಕಾಮತ್‌ ಮುಂತಾದವರನ್ನು ಗುರುತಿಸಲಾಗಿದೆ ಎಂದ ಅವರು, ಪ್ರಶಸ್ತಿಗಳ ಬಗ್ಗೆ ಅಪಸ್ವರ ಸರಿಯಲ್ಲ ಎಂದರು. ಮೇಯರ್‌ ಗೌತಮ್‌ ಕುಮಾರ್‌, ಆಯುಕ್ತ ಮಂಜುನಾಥ್‌ ಪ್ರಸಾದ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂಪೇಗೌಡರಿಗೆ ನಮನ:
ಇದೇ ವೇಳೆ ಉಪ ಮುಖ್ಯಮಂತ್ರಿಗಳು, ನಾಡಪ್ರಭು ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಮೇಖ್ರಿ ಸರ್ಕಲ್ʼನಲ್ಲಿರುವ ಕೆಂಪೇಗೌಡ ಗಡಿಗೋಪುರದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 

ನಾಡಪ್ರಭು ಕೆಂಪೇಗೌಡರ ಗಡಿಗೋಪುರಗಳಲ್ಲಿ ಒಂದಾದ ಇದು ನಮ್ಮ ಕ್ಷೇತ್ರದ ಪ್ರಮುಖ ಆಕರ್ಷಣೆ. ಈ ಜಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಲಾಗುವುದು. ತಮ್ಮ ಪ್ರಖರ ದೂರದೃಷ್ಟಿತ್ವ, ಮಾದರಿ ಆಡಳಿತದ ಮೂಲಕ ನೀರಾವರಿ ಯೋಜನೆ, ಪರಿಸರ ಸಂರಕ್ಷಣೆ, ನಗರೀಕರಣ, ಧಾರ್ಮಿಕತೆ, ಆಡಳಿತ ಸುಧಾರಣೆ ಮುಂತಾದ ಅಭಿವೃದ್ಧಿ ಯೋಜನೆಗಳೊಂದಿಗೆ ಕೆಂಪೇಗೌಡರು ನಮ್ಮ ಬೆಂಗಳೂರು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು. ಅವರ ಹಾದಿಯಲ್ಲಿ ನಡೆದು ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ಸರಕಾರ ಸಾಗುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. ಚಿತ್ರನಟ ಪುನೀತ್‌ ರಾಜಕುಮಾರ್‌, ಮಲ್ಲೇಶ್ವರ ವಿಭಾಗದ ಪಾಲಿಕೆ ಸದಸ್ಯರು, ಅಧಿಕಾರಿಗಳು ಮುಂತಾದವರು ಭಾಗಿಯಾಗಿದ್ದರು.