ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಇದುವರೆಗೂ ಒಂದು ಪೈಸೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ನಾನು ಸಿಎಂ ಮನೆ ಕಾಯುವ ಅಧ್ಯಕ್ಷ ಅಲ್ಲ, ಸ್ವಾಭಿಮಾನ ಬಿಟ್ಟು ಸಿಎಂ ಮನೆ ಬಾಗಿಲಿಗೆ ಹೋಗಲ್ಲ ಎಂದು ತಿಳಿಸಿದರು.

ಹಾವೇರಿ (ಅ.3) : ಕನ್ನಡ ಸಾಹಿತ್ಯ ಸಮ್ಮೇಳನದ ನಡೆಸುವ ಬಗ್ಗೆ ಮೊದಲಿದ್ದ ಉತ್ಸಾಹ ಈಗ ಕಡಿಮೆಯಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 11,12,13ಕ್ಕೆ ಸಾಹಿತ್ಯ ಸಮ್ಮೇಳನ ನಡೆಯಲು ಸಾಧ್ಯವಿಲ್ಲ. ಪ್ರತಿ ಹೆಜ್ಜೆಗೂ ನಮಗೆ ಸಹಕಾರ ಸಿಗುತ್ತಿಲ್ಲ ಎಂದು ಸಾಹಿತ್ಯ ಸಮ್ಮೇಳನ ಅನಿಶ್ಚಿತತೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ

ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ನಡೆಯುತ್ತಿದೆ. ಮೊನ್ನೆ ಉಸ್ತುವಾರಿ ಸಚಿವರು ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಇದುವರೆಗೆ ಯಾವುದೇ ಪೂರ್ವ ಸಿದ್ಧತೆ ಆಗಿಲ್ಲ ಸಮ್ಮೇಳನ ಮುಂದಕ್ಕೆ ಹೋಗಬಹುದು ಎಂದು ಹೇಳಿದರು. ಆದರೆ ಎರಡು ದಿನ ಆದ ಮೇಲೆ ಮುಖ್ಯಮಂತ್ರಿಗಳು ಅದೇ ದಿನಾಂಕಕ್ಕೆ ಸಮ್ಮೇಳನ ಮಾಡ್ತೀವಿ ಎಂದಿದ್ದಾರೆ. ಇದು ನಮಗೆಲ್ಲ ಬೇಸರ ತರಿಸಿದೆ ಎಂದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳದ ದಿನಾಂಕ ಘೋಷಣೆ ಮಾಡುವಂಥದ್ದು ಸಾಹಿತ್ಯ ಪರಿಷತ್ ಅಧ್ಯಕ್ಷರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಇಲ್ಲೆಯವರು, ನಾನೂ ಇದೇ ಜಿಲ್ಲೆಯವನು. ಈ ಕಾರಣಕ್ಕಾಗಿ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಅಷ್ಟು ಸಾಲದಕ್ಕೆ ನಾಲ್ಕು ಬಾರಿ ಸಭೆ ನಡೆಸುವಂತೆ ಮನವಿ ಮಾಡಿಕೊಂಡೆ. ಪ್ರತಿಸಲ ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿನಾಂಕ ಘೋಷಣೆ ಮಾಡಿದ ಮೇಲೆ ಲಾಂಛನ ಬಿಡುಗಡೆ ಆಗಬೇಕಿತ್ತು. ಹಲವು ಸಮಿತಿಗಳ ರಚನೆ ಆಗಬೇಕಿತ್ತು. ಆದರೆ ಇದುವರೆಗೆ ಯಾವುದೇ ಸಮಿತಿಗಳು ರಚನೆಯಾಗಿಲ್ಲ. ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ನಮಗೆ ಅನಿಶ್ಚಿತತೆ ಕಾಡುತ್ತಿದೆ. ಏಕೆಂದರೆ ಇನ್ನೂ ಪ್ರತಿನಿಧಿಗಳ ನೋಂದಣಿಯಾಗಿಲ್ಲ. ಪ್ರತಿನಿಧಿಗಳ ನೋಂದಣಿಯಾಗಬೇಕಂದರೆ ಕನಿಷ್ಟ ಒಂದು ತಿಂಗಳಾದರೂ ಬೇಕು. ಸರ್ಕಾರಕ್ಕೆ ಸಮ್ಮೇಳನ ನಡೆಸುವ ಉತ್ಸಾಹವಿದ್ದಂತಿಲ್ಲ. ಈ ಬೆಳವಣಿಗೆಯಿಂದ ನಮಗೆ ತುಂಬಾ ಬೇಸರ ಮತ್ತು ದುಃಖವಾಗಿದೆ ಎಂದರು.

ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಪತ್ರ ಬರೆದರೆ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡ್ತಾರೆ. ಮೈಸೂರು ದಸರಾ ಆಚರಣೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನೇ ಪಕ್ಕಕ್ಕೆ ತಳ್ಳಿದ್ರು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲೂ ಕಸಪಾ ಅಧ್ಯಕ್ಷರಿಲ್ಲ. ಹೀಗಾಗಿ ಎಲ್ಲವನ್ನೂ ಮೂಕವಾಗಿ ನೋಡುವ ಪರಿಸ್ಥಿತಿ ಬಂದಿದೆ ಎಂದರು. 

ಸಿಎಂ ತವರು ಜಿಲ್ಲೆಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಫಿಕ್ಸ್‌

ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಇದುವರೆಗೂ ಒಂದು ಪೈಸೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೆ ಏನೇ ಆದರೂ ನಾನು ಸಿಎಂ ಮನೆ ಕಾಯುವ ಅಧ್ಯಕ್ಷ ಅಲ್ಲ, ಸ್ವಾಭಿಮಾನ ಬಿಟ್ಟು ಸಿಎಂ ಮನೆ ಬಾಗಿಲಿಗೆ ಹೋಗಲ್ಲ ಎಂದಿದ್ದಾರೆ.