ಮತ್ತೆ ವಿವಾದಿತ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ ಕೊರೋನಾದಿಂದ ನೀವ್ ಉಳಿತೀರೋ ಇಲ್ವೊ-ನಾನಂತು ಉಳಿಬೇಕೆಂದ ಮಿನಿಸ್ಟರ್ ಸಚಿವರ ಅಸಂಬದ್ಧ ಮಾತಿಗೆ ತಲೆಚಚ್ಚಿಕೊಂಡ ಪಕ್ಕದಲ್ಲಿದ್ದ ಸಂಸದ

ಬಾಗಲಕೋಟೆ (ಮೇ.09): ಕೊರೋನಾ ಮೂರನೇ ಅಲೆ ಬರುತ್ತೆ, ನಾವು, ನೀವು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಜಿಲ್ಲೆಯ ಬನಹಟ್ಟಿನಗರದಲ್ಲಿ ಶನಿವಾರ ಕೋವಿಡ್‌ ಕೇರ್‌ ಸೆಂಟರ್‌ಗಳ ಪರಿಶೀಲನೆ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಕತ್ತಿ, ಆರಂಭದಲ್ಲಿ ನಾವು-ನೀವು ಉಳಿಯಬೇಕು, ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ ಎಂದು ನಗುತ್ತಲೇ ಮಾತನಾಡಿದ್ದಾರೆ. 

ವಿರೋಧ ಪಕ್ಷದವರ ಟೀಕೆಗಳಿಗೆ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲ ಎಂದ ಕತ್ತಿ .

ಇವರ ಮಾತಿನ ವರಸೆಗೆ ಪಕ್ಕದಲ್ಲಿದ್ದ ಸಂಸದ ಪಿ.ಸಿ.ಗದ್ದಿಗೌಡರ ಹಣೆ ಚಚ್ಚಿಕೊಂಡ 14 ಸೆಕೆಂಡ್‌ಗಳ ವಿಡಿಯೋ ವೈರಲ್‌ ಆಗಿದೆ. ಸಭೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಸಹ ಉಪಸ್ಥಿತರಿದ್ದರು.

ಕೆಲ ದಿನಗಳ ಹಿಂದಷ್ಟೇ ರೇಷನ್ ಕೇಳಿದ ವ್ಯಕ್ತಿಗೆ ಸಾಯುವುದು ಒಳ್ಳೆಯದು ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು. ಅದಕ್ಕೂ ಮುನ್ನ ಟೀವಿ ಇದ್ದವರ ಮನೆ ಬಿಪಿಎಲ್ ಬಂದ್ ಎಂದೂ ವಿವಾದ ಸೃಷ್ಟಿಸಿದ್ದ ಸಚಿವ ಈಗ ಮತ್ತೆ ಅಸಂಬದ್ಧ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿ ಜನರ ಅಸಮಾಧಾನಕ್ಕೆ ತುತ್ತಾಗಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona