Asianet Suvarna News Asianet Suvarna News

Legislative Council : ಕಾಂಗ್ರೆಸ್‌ ಪಟ್ಟಿ ಪ್ರಕಟ, ಎಸ್‌.ಆರ್‌. ಪಾಟೀಲ್‌ಗಿಲ್ಲ ಟಿಕೆಟ್!

*ಬಿಜೆಪಿ ಬಳಿಕ ಕಾಂಗ್ರೆಸ್‌ನಿಂದ ಅಭ್ಯರ್ಥಿ ಪಟ್ಟಿಬಿಡುಗಡೆ
*20 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ
*ಜೆಡಿಎಸ್‌ನಿಂದಲೂ ಸ್ಪರ್ಧಿಗಳು ಫೈನಲ್‌
*ನಿಕಟಪೂರ್ವ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ಗಿಲ್ಲ ಟಿಕೆಟ್!
 

Karnataka Legislative council election congress finalizes candidates list mnj
Author
Bengaluru, First Published Nov 23, 2021, 6:43 AM IST

ಬೆಂಗಳೂರು(ನ.23): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ (Legislative Council Election) ನಡೆಯುವ ಚುನಾವಣೆಗೆ ಕಡೆಗೂ ಕಾಂಗ್ರೆಸ್‌ (Congress) ತನ್ನ ಪಟ್ಟಿ ಪ್ರಕಟಿಸಿದ್ದು, ವಿಧಾನಪರಿಷತ್ತಿನ ನಿಕಟಪೂರ್ವ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ( S R Patil) ಹಾಗೂ ಮೈಸೂರಿನ ಧರ್ಮಸೇನ ಸೇರಿದಂತೆ ಹಲವು ಪ್ರಮುಖ ಆಕಾಂಕ್ಷಿಗಳಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇದೇ ವೇಳೆ ದಿನೇಶ್‌ ಗೂಳಿಗೌಡ (ಮಂಡ್ಯ), ಮಂಥರ್‌ಗೌಡ (ಕೊಡಗು) ಹಾಗೂ ಯೂಸುಫ್‌ ಶರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು (ಬೆಂಗಳೂರು ನಗರ) ಅವರಂತಹ ಹೊಸ ಮತ್ತು ಅಚ್ಚರಿಯ ಮುಖಗಳಿಗೆ ಅವಕಾಶ ನೀಡಲಾಗಿದೆ.

ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ರಾಜ್ಯದ ಪ್ರಮುಖ ನಾಯಕರು ನಡೆಸಿದ ಮೇಲಾಟದಿಂದಾಗಿ ಅಭ್ಯರ್ಥಿ ಅಖೈರುಗೊಳಿಸುವುದು ನಾಮಪತ್ರ ಸಲ್ಲಿಸುವ ಕೊನೆಯ ಹಂತದವರೆಗೂ ಜಗ್ಗಿದೆ. 25 ಕ್ಷೇತ್ರಗಳ ಪೈಕಿ 20ರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದ್ದು, ಸೋಮವಾರ ಸಂಜೆ ಪಟ್ಟಿಬಿಡುಗಡೆ ಮಾಡಲಾಗಿದೆ.

ಬಳ್ಳಾರಿ, ವಿಜಯಪುರ ಗದ್ದಲ:

ಶನಿವಾರವೇ ಪ್ರಕಟವಾಗಬೇಕಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿಸೋಮವಾರ ರಾತ್ರಿಯವರೆಗೂ ವಿಳಂಬವಾಗಲು ಮುಖ್ಯ ಕಾರಣ ಬಳ್ಳಾರಿ (Ballari), ಮೈಸೂರು (Mysuru) ಹಾಗೂ ವಿಜಯಪುರ (Vijayapura) ಕ್ಷೇತ್ರಗಳ ಕಗ್ಗಂಟು. ಇಡೀ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಹಾಗೂ ನಾಯಕರು ಕೆ.ಸಿ. ಕೊಂಡಯ್ಯ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ರಾಜ್ಯ ನಾಯಕತ್ವವನ್ನು ಒತ್ತಾಯಿಸಿದ್ದರು. ರಾಜ್ಯ ನಾಯಕರು ಸಹ ವಯಸ್ಸಾಗಿದೆ ಎಂಬ ಕಾರಣ ಮುಂದು ಮಾಡಿ ಕೊಂಡಯ್ಯ ಅವರಿಗೆ ಟಿಕೆಟ್‌ ಬೇಡ ಎಂದೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.

Legislative Council; 'ಕೈ' ಪಟ್ಟಿ ಫೈನಲ್‌ಗೂ ಮುನ್ನಸಿದ್ದುಗೆ ಕರೆ ಮಾಡಿದ ಸುರ್ಜೆವಾಲಾ!

ಆದರೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಟ್ಟು ಹಿಡಿದು ಕೆ.ಸಿ. ಕೊಂಡಯ್ಯ ಅವರಿಗೆ ಟಿಕೆಟ್‌ ದೊರೆಯುವಂತೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ವಿಜಯಪುರದಲ್ಲಿ ಎಸ್‌.ಆರ್‌. ಪಾಟೀಲ್‌ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದು, ಅಲ್ಲಿ ಎಂ.ಬಿ.ಪಾಟೀಲ್‌ ಸಹೋದರ ಸುನೀಲ್‌ಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಮೈಸೂರು ಕ್ಷೇತ್ರಕ್ಕೆ ಧರ್ಮಸೇನ ಅವರಿಗೆ ವಯಸ್ಸಿನ ಕಾರಣಕ್ಕೆ ಹಾಗೂ ಎರಡು ಬಾರಿ ಪರಿಷತ್ತಿಗೆ ಸ್ಪರ್ಧಿಸಿದ್ದರು ಎಂಬ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒತ್ತಾಸೆ ಮೇರೆಗೆ ಡಾ. ಡಿ. ತಿಮ್ಮಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ.ಇನ್ನು ರಾತ್ರಿವರೆಗಿನ ಹಗ್ಗ-ಜಗ್ಗಾಟದ ನಂತರ ಬೀದರ್‌ (ಭೀಮರಾವ್‌ ಪಾಟೀಲ್‌), ಕೋಲಾರ (ಎಂ.ಎಲ್‌. ಅನಿಲ್‌ಕುಮಾರ್‌) ಮತ್ತು ಬೆಂಗಳೂರು ನಗರಕ್ಕೆ (ಕೆ.ಜಿ.ಎಫ್‌ ಬಾಬು) ಅವರಿಗೆ ಟಿಕೆಟ್‌ ಕೊಡಲಾಗಿದೆ.

‘ಶಕ್ತಿಮಾನ್‌ ಸೂತ್ರ!’​:

20 ಜಿಲ್ಲೆಗಳ 25 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕಳೆದ ಬಾರಿ 14 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ 14 ಮಂದಿಯ ಪೈಕಿ ಕೇವಲ ಐದು ಮಂದಿ ಮಾತ್ರ ಈ ಬಾರಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಕೆ.ಸಿ. ಕೊಂಡಯ್ಯ (ಬಳ್ಳಾರಿ), ಗಾಯಿತ್ರಿ ಶಾಂತೇಗೌಡ (ಚಿಕ್ಕಮಗಳೂರು) ಪ್ರಸನ್ನಕುಮಾರ್‌ (ಶಿವಮೊಗ್ಗ) , ಸುನೀಲ್‌ಗೌಡ ಪಾಟೀಲ್‌ (ವಿಜಯಪುರ) ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಸ್‌. ರವಿ.

Vidhan Parishat Election| ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಗ್ಯತೆ ಇಲ್ಲ: BSY

ಉಳಿದ ಒಂಭತ್ತು ಮಂದಿ ಹಾಲಿಗಳಿಗೆ ಟಿಕೆಟ್‌ ಕೈ ತಪ್ಪಿದೆ. ಈ ಪೈಕಿ ಹಲವರು ತಾವಾಗಿಯೇ ಟಿಕೆಟ್‌ ಬೇಡ ಎಂದಿದ್ದರೆ, ಆಕಾಂಕ್ಷಿಯಾಗಿದ್ದವರಿಗೂ ಟಿಕೆಟ್‌ ಕೈ ತಪ್ಪಿದೆ. ಇದಕ್ಕೆ ಕಾರಣ ಶಕ್ತಿಮಾನ್‌ ಸೂತ್ರ. ಪರಿಷತ್‌ ಚುನಾವಣೆಯಲ್ಲಿ ಗೆಲುವು ನಿರ್ಧಾರವಾಗುವುದು ಹಣಬಲದ ಮೇಲೆಯೇ ಎಂಬುದು ರಾಜ್ಯ ನಾಯಕತ್ವದ ನಂಬಿಕೆ. ಹೀಗಾಗಿ ಈ ಶಕ್ತಿ ಇದ್ದವರಿಗೆ (ಅರ್ಥಾತ್‌ ಶಕ್ತಿಮಾನ್‌ಗಳಿಗೆ) ಮಾತ್ರ ಟಿಕೆಟ್‌ ನೀಡಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳು

*ಕಲಬುರಗಿ- ಶಿವಾನಂದ ಮರ್ತೂರ್‌

*ಬೆಳಗಾವಿ- ಚನ್ನರಾಜ್‌ ಹಟ್ಟಿಹೊಳಿ

*ಉತ್ತರ ಕನ್ನಡ- ಭೀಮಣ್ಣ ನಾಯ್‌್ಕ

*ಧಾರವಾಡ ಸಲೀಂ- ಅಹ್ಮದ್‌

*ರಾಯಚೂರು- ಶರಣಗೌಡ ಪಾಟೀಲ್‌

*ಚಿತ್ರದುರ್ಗ- ಸೋಮಶೇಖರ್‌

*ಶಿವಮೊಗ್ಗ- ಪ್ರಸನ್ನಕುಮಾರ್‌

*ದಕ್ಷಿಣ ಕನ್ನಡ- ಮಂಜುನಾಥ ಭಂಡಾರಿ

*ಚಿಕ್ಕಮಗಳೂರು- ಗಾಯಿತ್ರಿ ಶಾಂತಗೌಡ

*ಹಾಸನ- ಶಂಕರಪ್ಪ

*ತುಮಕೂರು- ರಾಜೇಂದ್ರ

*ಮಂಡ್ಯ- ದಿನೇಶ್‌ ಗೂಳಿಗೌಡ

*ಬೆಂಗಳೂರು ಗ್ರಾ.- ಎಸ್‌.ರವಿ

*ಕೊಡಗು- ಮಂಥರ್‌ಗೌಡ

*ವಿಜಯಪುರ- ಸುನೀಲ್‌ಗೌಡ ಪಾಟೀಲ್‌

*ಮೈಸೂರು- ಡಾ. ಡಿ. ತಿಮ್ಮಯ್ಯ

*ಬಳ್ಳಾರಿ- ಕೆ.ಸಿ. ಕೊಂಡಯ್ಯ

*ಕೋಲಾರ- ಎಂ.ಎಲ್‌. ಅನಿಲ್‌ಕುಮಾರ್‌

*ಬೆಂಗಳೂರು ನಗರ- ಕೆಜಿಎಫ್‌ ಬಾಬು

*ಬೀದರ್‌- ಭೀಮರಾವ್‌ ಪಾಟೀಲ್‌
 

Follow Us:
Download App:
  • android
  • ios