Asianet Suvarna News Asianet Suvarna News

ಕಾವೇರಿ ನೀರಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು

ಕೆಆರ್‌ಎಸ್‌ ಜಲಾಶಯದಲ್ಲಿ ಕುಡಿಯಲು ಮಾತ್ರ ನೀರು ಲಭ್ಯವಿದ್ದು, CWRC ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಮಂಡ್ಯ ಜಿಲ್ಲಯ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 

Karnataka Kaveri river Mandya farmers started hunger strike for Cauvery water sat
Author
First Published Nov 25, 2023, 1:22 PM IST

ಮಂಡ್ಯ (ನ.25): ಸಕ್ಕರೆನಾಡು ಮಂಡ್ಯದಲ್ಲಿ ಕಾವೇರಿ ಕಿಚ್ಚು ಪುನಃ ತಾರಕಕ್ಕೇರಿದೆ. ಕಾವೇರಿಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ  ರೈತರು ಮುಂದಾಗಿದ್ದಾರೆ. ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಆಮರಣಾಂತ ಧರಣಿ ಜೊತೆಗೆ ಉಪವಾಸ ಸತ್ಯಾಗ್ರಹ ಮಾಡಲು ರೈತರು ಮುಂದಾಗಿದ್ದಾರೆ.

ಇಂದಿನಿಂದ ಕಾವೇರಿಗಾಗಿ ರೈತರ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ತಮಿಳುನಾಡಿಗೆ ಮತ್ತೆ ಕಾವೇರಿ ನೀರು CWRC ಶಿಫಾರಸ್ಸು ಹಿನ್ನಲೆಯಲ್ಲಿ ರೈತರು ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ಕಳೆದ 82 ದಿನಗಳಿಂದ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿಯಿಂದ ನಿರಂತರವಾಗಿ ಧರಣಿ ಮಾಡಲಾಗುತ್ತಿದೆ. ಇಂದಿನಿಂದ ಧರಣಿ ಜೊತೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರತಿನಿತ್ಯ 6 ರೈತರಂತೆ ಉಪವಾಸ ಕೂರಲು ನಿರ್ಧಾರ ಮಾಡಿದ್ದಾರೆ.ಆದ್ದರಿಂದ ಕಾವೇರಿ ನದಿ ನೀರಿಗಾಗಿ ಶನಿವಾರ (ನ.25) 6 ಮಂದಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಕರ್ನಾಟಕಕ್ಕೆ ಮತ್ತೆ ಅನ್ಯಾಯ, ತಮಿಳುನಾಡಿಗೆ 2700 ಕ್ಯೂಸೆಕ್ ನೀರು ಬಿಡಲು ಆದೇಶ

ಮಳೆಯ ಕೊರತೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ, ಪ್ರತಿಭಟನೆ ಮಾಡಿದರೂ ನೀರು ಬಿಡುವುದನ್ನು ಮುಂದುವರೆಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪ್ರತಿನಿತ್ಯ ವಿಭಿನ್ನ ಚಳುವಳಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಇಂದು ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡುತ್ತಿರುವ ರೈತ ಹಿತರಕ್ಷಣಾ ಸಮಿತಿಯಿಂದ ಈಗ ಉಪವಾಸ ಸತ್ಯಾಗ್ರಹ ಆರಂಭಿಸಲಾಗುದೆ. ಇಂದಿನಿಂದ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ ರಾಜ್ಯದ ಕಾವೇರಿ ಕೊಳ್ಳದ ರೈತರ ಪರವಾಗಿ ಗಟ್ಟಿ ನಿಲುವು ತೆಗೆದುಕೊಳ್ಳುವವರೆಗೂ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರೈತರು ಹೇಳಿದ್ದಾರೆ.

ಈಗಾಗಲೇ ಕಾವೇರಿ ನೀರು ಹರಿಸುವ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದು, ಇಡೀ ರಾಜ್ಯವನ್ನು ಬಂದ್‌ ಮಾಡಲಾಗಿತ್ತು. ಆದರೂ, ಪುನಃ ತಮಿಳುನಾಡಿಗೆ ನೀರು ಬಿಡಲು ಸಿಡಬ್ಲ್ಯೂಆರ್‌ಸಿ ಆದೇಶವನ್ನು ಹೊರಡಿಸಲಾಗಿದೆ. ಇದರಿಂದ ಪುನಃ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತೊಡಿಸಿದ್ದಾರೆ. ಕಾವೇರಿ ನೀರು ಹರಿಸುವ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕೇಂದ್ರ ಹಾಗೂ ರಾಜ್ಯ ರಾಜಕೀಯ ಕಿತ್ತಾಟದ ನಡುವೇ ರೈತರು ಬಲಿಯಾಗ್ತಿದ್ದಾರೆ. ಸರ್ಕಾರ ಕೂಡಲೇ ವಿಶೇಷ ಜಂಟಿ ಅಧಿವೇಶನ ಕರೆದು ಕಾವೇರಿ ವಿಷಯ ಚರ್ಚೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬರಗಾಲ, ಕಾವೇರಿ ಸಮಸ್ಯೆಯ ಬಗ್ಗೆ ಗಮನ ಹರಿಸುವುದು ಸೂಕ್ತ: ಸಚಿವ ಚಲುವರಾಯಸ್ವಾಮಿ

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಚಿವರು ಕಿತ್ತಾಡುವುದನ್ನು ಬಿಟ್ಟು ಪರಸ್ಪರ ಚರ್ಚೆ ಮಾಡಿ ಕಾವೇರಿ ನೀರನ್ನು ಉಳಿಸುವ ಬಗ್ಗೆ ಮುಂದಾಗಬೇಕು. ಈಗ ರಾಜ್ಯಕ್ಕೆ ಕುಡಿಯಲು ಇರುವ ನೀರನ್ನ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಈಗಲಾದ್ರು ಸರ್ಕಾರ ಕೂಡಲೇ ಎಚ್ಚೆತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಅಲ್ಲಿಯವರೆಗೂ ನಾವು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಿರಂತರವಾಗಿ ಧರಣಿ ಮಾಡುತ್ತೇವೆ ಎಂದು ರೈತರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios