ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಒಂದು ಸಿಗುವ ಸಾಧ್ಯತೆ ಇದೆ. ಬಸ್ ಟಿಕೆಟ್ ದರ ಇಳಿಕೆಯ ಬಗ್ಗೆ ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಅವರೇ ಪ್ರಸ್ತಾಪ ಮುಂದಿಟ್ಟಿದ್ದಾರೆ. 

ಬೆಂಗಳೂರು [ಡಿ.17]: ವಿಧಾನಸಭೆ ಉಪ ಚುನಾವಣೆಗೂ ಮುನ್ನ ಚರ್ಚೆಗೆ ಬಂದಿದ್ದ ಬಿಎಂಟಿಸಿ ಬಸ್‌ ಪ್ರಯಾಣ ದರ ಇಳಿಕೆ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Add Asianetnews Kannada as a Preferred SourcegooglePreferred

ಸರ್ಕಾರದ ಸೂಚನೆ ಮೇರೆಗೆ ಬಿಎಂಟಿಸಿಯು ಎಲ್ಲ ಮಾರ್ಗಗಳ ಪ್ರಯಾಣ ದರಗಳ ಬಗ್ಗೆ ಮಾಹಿತಿ ಸಂಗ್ರಹಣೆಗೆ ಮುಂದಾಗಿರುವುದು ದರ ಇಳಿಕೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬರಲು ಕಾರಣವಾಗಿದೆ. ಇತ್ತೀಚಿನ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಬಸ್‌ ದರ ಇಳಿಕೆ ವಿಚಾರ ಚರ್ಚೆಗೆ ಬಂದಿತ್ತು. ಇದೀಗ ನಗರದ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣದ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಬಸ್‌ ಪ್ರಯಾಣ ದರ ಇಳಿಕೆಗೆ ಆಸಕ್ತಿ ವಹಿಸಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಬಿಎಂಟಿಸಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಎಲ್ಲ ಮಾರ್ಗಗಳು, ಹಂತಗಳ ದರ ಮಾಹಿತಿ, ದರ ಇಳಿಕೆಯಿಂದ ನಿಗಮಕ್ಕಾಗುವ ಆರ್ಥಿಕ ಹೊರೆ ಎಲ್ಲದರ ಬಗ್ಗೆ ಪರಿಶೀಲಿಸಿ, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿ ಆಧರಿಸಿ ಸರ್ಕಾರ ಪ್ರಯಾಣ ದರ ಇಳಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಬಸ್‌ ಸೇವೆ...

ಬಸ್‌ ಪ್ರಯಾಣ ದರ ಇಳಿಕೆ ಮಾಡುವುದರ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಒಂದು ವೇಳೆ ದರ ಇಳಿಕೆ ಮಾಡಿದರೆ ನಿಗಮಕ್ಕಾಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ದರ ಇಳಿಕೆ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು.

-ಸಿ.ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ.