* ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಜಿಲ್ಲಾಧಿಕಾರಿಯ ನೇಮಕ* ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಸಹ ನೇಮಕಗೊಳಿಸಿ ಸರ್ಕಾರ ಆದೇಶ* ಇದೇ ಅಕ್ಟೋಬರ್‌ 2, 3 ರಂದು ಉದ್ಘಾಟನೆಯಾಗಲಿರುವ ನೂತನ ವಿಜಯನಗರ ಜಿಲ್ಲೆ

ವಿಜಯನಗರ, (ಸೆ.30): ಕರ್ನಾಟಕದ 31ನೇ ಜಿಲ್ಲೆಯಾಗಿ ರೂಪುಗೊಂಡಿರುವ ವಿಜಯನಗರ (Vijayangara) ಜಿಲ್ಲೆ ಉದ್ಘಾಟನೆ ಮತ್ತು ಜಿಲ್ಲಾ ಉತ್ಸವವನ್ನು ಅ. 2, 3 ರಂದು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ, ವಿಜಯನಗರಕ್ಕೆ ಹೊಸ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಾಗಿ ಅನಿರುದ್ಧ್ ಶ್ರವಣ್ ನೇಮಕವಾಗಿದ್ರೆ, ಡಾ. ಅರುಣ್ ಕೆ ವಿಜಯನಗರದ ಎಸ್ಪಿಯಾಗಿದ್ದಾರೆ.

ಹೊಸಪೇಟೆ: ವಿಜಯನಗರ ಉದಯಕ್ಕೆ ಭವ್ಯ ವೇದಿಕೆ..!

ಅನಿರುದ್ಧ್ ಶ್ರವಣ್​ ಹೊಸ ಜಿಲ್ಲೆಯಾದ ವಿಜಯನಗರಕ್ಕೆ ಪ್ರಪ್ರಥಮ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಹಿಂದೆ ವಿಜಯನಗರ ಜಿಲ್ಲೆ ರಚನೆಯ ವಿಶೇಷಾಧಿಕಾರಿಗಳಾಗಿದ್ದ ಅನಿರುದ್ಧ್ ಶ್ರವಣ್, ಇದೀಗ ವಿಜಯನಗರದ ಪ್ರಪ್ರಥಮ ಜಿಲ್ಲಾಧಿಕಾರಿ ಎನಿಸಿಕೊಂಡಿದ್ದಾರೆ.

ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಆಯುಕ್ತರಾಗಿದ್ದರು. ಈಗ ಅವರನ್ನು ವಿಜಯನಗರ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಇಂದು (ಸೆ.30) ಆದೇಶ ಹೊರಡಿಸಿದ್ದಾರೆ.

ಡಾ. ಅರುಣ್ ಕೆ ವಿಜಯನಗರ ಎಸ್ಪಿ
 ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಜಿಲ್ಲಾಧಿಕಾರಿಯ ನೇಮಕ ಮಾಡಿದ ಬೆನ್ನಲ್ಲೇ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಹ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ. ಅರುಣ್ ಕೆ ಅವರನ್ನ ವಿಜಯನಗರ ಜಿಲ್ಲೆ ಎಸ್ಪಿಯಾಗಿ ನೇಮಕ ಮಾಡಲಾಗಿದೆ.

ಡಾ. ಅರುಣ್ ಕೆ ತಮಿಳುನಾಡು ಮೂಲದ 2014ನೇ ಬ್ಯಾಚ್‌ ಐಪಿಎಸ್‌ ಅಧಿಕಾರಿಯಾಗಿದ್ದು, ಇವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bangalore Metropolitan Transport Corporation) ಭದ್ರತಾ ಎಸ್ಪಿಯಾಗಿದ್ದರು. ಇದೀಗ ಹೊಸ ಜಿಲ್ಲೆ ವಿಜಯನಗರದ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.