ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವ ಭಾಗದಲ್ಲಿ ಡ್ರಗ್ಸ್‌ ಪತ್ತೆಯಾಗುತ್ತದೆಯೋ ಅಲ್ಲಿನ ಇನ್ಸ್‌ಪೆಕ್ಟರ್‌, ಡಿಸಿಪಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ವಿಧಾನಸಭೆ (ಮಾ.25): ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವ ಭಾಗದಲ್ಲಿ ಡ್ರಗ್ಸ್‌ ಪತ್ತೆಯಾಗುತ್ತದೆಯೋ ಅಲ್ಲಿನ ಇನ್ಸ್‌ಪೆಕ್ಟರ್‌, ಡಿಸಿಪಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸುರೇಶ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಡಾ.ಪರಮೇಶ್ವರ್‌, ಕಳೆದ ಮೂರು ವರ್ಷಗಳಲ್ಲಿ 653 ಕೋಟಿ ರು. ಮೊತ್ತದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಅದರಲ್ಲಿ 250 ಕೋಟಿ ರು. ಮೊತ್ತದ ಡ್ರಗ್ಸ್‌ ಅನ್ನು ಈಗಾಗಲೇ ಸುಟ್ಟು ಹಾಕಲಾಗಿದ್ದು, ಉಳಿದ ಡ್ರಗ್ಸ್‌ ಅನ್ನು ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರ ಸುಡಲಾಗುವುದು. ಸರ್ಕಾರ ಡ್ರಗ್ಸ್‌ ವಿರುದ್ಧ ಯುದ್ಧ ಸಾರಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಸದನದಲ್ಲೇ ಈ ಬಗ್ಗೆ ಘೋಷಿಸಿದ್ದಾರೆ. ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಪ್ರತಿದಿನ ಹೊರರಾಜ್ಯಗಳಿಂದ ಡ್ರಗ್ಸ್‌ ಸೇರಿ ಇನ್ನಿತರ ಮಾದಕ ವಸ್ತುಗಳು ಬರುತ್ತಿವೆ. ಸೋಮವಾರವಷ್ಟೇ ತಿರುಪತಿಯಿಂದ ಮಳವಳ್ಳಿಗೆ 350 ಕೆ.ಜಿ. ಗಾಂಜಾ ಪಾರ್ಸೆಲ್‌ ಬಂದಿದೆ. ಹೀಗೆ ಪ್ರತಿನಿತ್ಯ ಮಾದಕ ವಸ್ತುಗಳು ಪಾರ್ಸೆಲ್‌ ಮೂಲಕ ಬರುತ್ತಿದ್ದು, ಅದನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗುತ್ತಿದೆ. ಜತೆಗೆ ಪೆಡ್ಲರ್‌ ಸೇರಿ ದಂಧೆಯಲ್ಲಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮ ಹೆಚ್ಚಳ

ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಜಾಗೃತಿ ಕಾರ್ಯಕ್ರಮ ಹೆಚ್ಚಿಸಲಾಗಿದೆ. 2023ರಿಂದ 2025ರವರೆಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮದ ಮೂಲಕ 45 ಲಕ್ಷ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಇನ್ನು, ರಾಜ್ಯದ ಪ್ರತಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಸೇರಿ ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.