ಎಂಇಎಸ್‌ ಯುವಕನೋರ್ವನ ವಿಡಿಯೋ ವೈರಲ್  ಆಗಿದ್ದು ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ಸಂಬಂಧ ದೂರು ನೀಡಲಾಗಿದೆ. 

 ಬೆಳಗಾವಿ (ಮಾ.17): ಕೆಂಪು, ಹಳದಿ ಬಣ್ಣದ ಶಾಲು ಹಾಕಿಕೊಂಡು ಬೆಳಗಾವಿಯಲ್ಲಿ ಓಡಾಡುವವರನ್ನು ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಎಂಇಎಸ್‌ ಮುಖಂಡ ಶುಭಂ ಸಳಕೆ ಉದ್ಧಟತನದ ಮಾತುಗಳನ್ನಾಡಿರುವ ವೀಡಿಯೋ ಇದೀಗ ವೈರಲ್‌ ಆಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಡಿಸಿಪಿ ಡಾ.ವಿಕ್ರಮ್‌ ಅಮ್ಟೆಅವರಿಗೆ ಪ್ರಚೋದನಾಕಾರಿ ಭಾಷಣದ ವಿಡಿಯೋದ ಸಿಡಿ ಸಮೇತ ದೂರು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ನೆಲದಲ್ಲೇ ಆಶ್ರಯ ಪಡೆದು ಕನ್ನಡಿಗರ ವಿರುದ್ಧವೇ ಕತ್ತಿ ಮಸೆಯುತ್ತಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಕನ್ನಡ ವಿರೊಧಿ ಶುಭಂ ಸಳಕೆಯನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಶುಭಂ ನಮ್ಮನ್ನು ಬಡಿಯಲಿ ನೋಡೋಣ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್‌ ಗುಡನಗಟ್ಟಿಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಮತ್ತೆ MES, ಶಿವಸೇನೆ ಪುಂಡಾಟ: ಮಹಿಳಾ ಕಾರ್ಯಕರ್ತೆಯರ ಬಂಧನ ... 

ಏತನ್ಮಧ್ಯೆ ಕೊಲ್ಲಾಪುರ ಶಿವಸೇನೆ ಮುಖಂಡ ವಿಜಯ ದೇವನೆ, ಬೆಳಗಾವಿ ಮಹಾನಗರ ಪಾಲಿಕೆ ಎದುರು ಇರುವ ಕನ್ನಡ ಧ್ವಜವನ್ನು ಮಾ.20ರೊಳಗೆ ತೆಗೆಯದಿದ್ದರೆ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಕೊಲ್ಲಾಪುರ, ಸಾಂಗ್ಲಿ, ಸಾತಾರಾ ಮುಂತಾದ ಪ್ರದೇಶಗಳಲ್ಲಿ ಇರುವ ಕನ್ನಡಿಗರ ಅಂಗಡಿ , ಹೊಟೇಲ್, ಬಸ್‌ ಮುಂತಾದ ಕನ್ನಡಿಗರ ವ್ಯವಹಾರಗಳ ಮೇಲೆ ಶಿವಸೇನೆ ಸ್ಟೈಲ್ನಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಬಸ್‌ಸಂಚಾರ ಪುನಾರಂಭ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರ ಪುಂಡಾಟಿಕೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ- ಮಹಾರಾಷ್ಟ್ರಗಳ ನಡುವಿನ ಬಸ್‌ ಸಂಚಾರ ಮಂಗಳವಾರ ಪುನಾರಂಭಗೊಂಡಿದೆ. ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕನ್ನಡ ನಾಮಫಲಕ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕಪ್ಪು ಮಸಿ ಬಳಿದು ಪುಂಡಾಟಿಕೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಭಯರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿದ್ದವು. ಕರ್ನಾಟಕದಿಂದ ಸುಮಾರು 400 ಬಸ್‌ಗಳು ಮಹಾರಾಷ್ಟ್ರಕ್ಕೆ ನಿತ್ಯ ತೆರಳುತ್ತಿದ್ದರೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 58 ಬಸ್‌ಗಳು ಆಗಮಿಸುತ್ತಿದ್ದವು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗಕ್ಕೆ ಸುಮಾರು .50 ಲಕ್ಷ ನಷ್ಟವಾಗಿತ್ತು.