*  'ಮುಖ್ಯಮಂತ್ರಿ' ನಾಟಕವು 750 ನೇ ಪ್ರದರ್ಶನ, ಅದೂ ’ಹೌಸ್‌ ಫುಲ್* ರಾಜಕೀಯದ ವಿಡಂಬನೆಯೇ ನಾಟಕದ ಜೀವಾಳ* ಚಂದ್ರುಗೆ ಮುಖ್ಯಮಂತ್ರಿ ಚಂದ್ರು ಹೆಸರು ತಂದುಕೊಟ್ಟ ನಾಟಕ

ಮೈಸೂರು(ಡಿ. 08) ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಏರ್ಪಡಿಸಿದ್ದ 'ನಟನ' ರಂಗೋತ್ಸವ ದ ಸಮಾರೋಪ ಸಮಾರಂಭದ ಭಾಗವಾಗಿ ಬೆಂಗಳೂರಿನ 'ಕಲಾಗಂಗೋತ್ರಿ' ತಂಡದವರು ಪ್ರಸ್ತುತಪಡಿಸಿದ 'ಮುಖ್ಯಮಂತ್ರಿ' (Mukhyamantri Drama) ನಾಟಕವು 750 ನೇ ಪ್ರದರ್ಶನ, ಅದೂ ಹೌಸ್ ಫುಲ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1980ನೇ ಇಸವಿಯಿಂದಲೂ ಬಹು ಯಶಸ್ವಿಯಾಗಿ ಹೌಸ್‌ ಫುಲ್ ಪ್ರದರ್ಶನಗಳನ್ನು ಕಾಣುವ ಈ ನಾಟಕದ ಹೆಚ್ಚಿನೆಲ್ಲಾ ಪಾತ್ರಧಾರಿಗಳು, ಈ 42 ವರ್ಷಗಳಲ್ಲಿ, ಬದಲಾವಣೆಗಳೊಂಡರೂ, ನಾಟಕದ ಕೇಂದ್ರಬಿಂದು, 'ಮುಖ್ಯಮಂತ್ರಿ' (Mukhyamantri Chandru)ಪಾತ್ರಧಾರಿ ಮಾತ್ರ ಬದಲಾಗದೇ, ಈವರೆಗಿನ ಎಲ್ಲ ಪ್ರದರ್ಶನಗಳಲ್ಲೂ ಅವಿರತವಾಗಿ ನಟಿಸಿದ ಕೀರ್ತಿ ’ಖಾಯಂ’ ಮುಖ್ಯಮಂತ್ರಿ ಚಂದ್ರು ಅವರಿಗೆ ಸಲ್ಲುತ್ತದೆ.

ರಾಜಕೀಯದ ವಿಡಂಬನೆಯೇ(iconic Kannada play) ನಾಟಕದ ಜೀವಾಳ. ಹಾಗಾಗಿ, ಪ್ರೇಕ್ಷಕರು 'ಹೆಚ್ಚಿನ ನಿರೀಕ್ಷೆ' ಯಿಂದ ವೀಕ್ಷಿಸಲು ಕಾತರರಾಗಿರುತ್ತಾರೆ. ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಅವರೇ ತಿಳಿಸಿದಂತೆ, ಪ್ರಸ್ತುತ ಸನ್ನಿವೇಶದಲ್ಲಿ, ದಪ್ಪ ಚರ್ಮದ ರಾಜಕಾರಣಿಗಳ ’ಆಟಾಟೋಪ’ ಗಳ ಮುಂದೆ, ಈ ನಾಟಕವು ವಿಡಂಬನಾ ರೂಪಕವಾಗಿ ಭಾಸವಾಗದೇ, ಕೇವಲ 'ಮಾಮೂಲಿ' ನಾಟಕದ ಸ್ವರೂಪವನ್ನು ತಲುಪುವ ಸ್ಥಿತಿಯಲ್ಲಿದೆ !

ನಾಯಕ ನಟರಷ್ಟು ನಾವು ಕೆಟ್ಟವರಲ್ಲ ಎಂದ ಚಂದ್ರು

ನಾಟಕವು ಎರಡು ಪ್ರಮುಖ ಪಾತ್ರಧಾರಿಗಳನ್ನೇ ಅವಲಂಬಿಸಿರುವುದರಿಂದ, ಆ ಪಾತ್ರಧಾರಿಗಳ ನಟನಾ ಸಾಮರ್ಥ್ಯವೇ ಇಡೀ ನಾಟಕದ ಜೀವಾಳ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಚಂದ್ರು ಹಾಗೂ ಮಂಜುನಾಥ ಹೆಗಡೆ ಅವರ ಅಭಿನಯ ಇಡೀ ಸಭಿಕರನ್ನು ಹಿಡಿದಿಟ್ಟಿತ್ತು. ಅದರಲ್ಲಿಯೂ ಮುಖ್ಯವಾಗಿ, ವಯಸ್ಸಿನಲ್ಲೂ ಸಮಕಾಲೀನರಾದ ಈರ್ವರೂ, ದಣಿವರಿಯದೇ ಸಂಭಾಷಣೆಗಳನ್ನು ಹೇಳುವ ಪರಿ ನೋಡುಗರನ್ನು ಸೆಳೆದುಕೊಂಡಿತು. 

ಅನುವಾದದ ಕೃತಿಯಾದದ್ದರಿಂದ, ನಾಟಕದ ಪಾತ್ರಧಾರಿಗಳ ಹೆಸರುಗಳು, ಸಾಮಾನ್ಯ ವೀಕ್ಷಕರಿಗೆ, ಸ್ವಲ್ಪ ’ಗಲಿಬಿಲಿ’ ಯನ್ನುಂಟುಮಾಡುತ್ತದೆ. ನಾಟಕವು ’ಗಂಭೀರ’ ಸ್ವರೂಪದಲ್ಲೇ ಸಾಗುವುದರಿಂದ, ’ಹಾಸ್ಯರೂಪ’ದ ಮನರಂಜನೆಯನ್ನು ನಿರೀಕ್ಷಿಸುವಂತಿಲ್ಲ. ರಾಜಕಾರಣಿಗಳ ’ಅಂದಿನ’ ಹಾಗೂ ’ಇಂದಿನ’ ಮನಸ್ಥಿತಿ ಒಂದೇ ಆದರೂ, ಕಾಲಕ್ಕೆ ತಕ್ಕಂತೆ, ಅವಕಾಶವಾದಿ ರಾಜಕಾರಣದ, ಇಂದಿನ, ವಿವಿಧ ಮಜಲುಗಳು ನಾಟಕದಲ್ಲಿ ಗೋಚರಿಸುವುದಿಲ್ಲ.

ಇಂದಿನ ಎಲ್ಲ ವರ್ಗಗಳ ಪ್ರೇಕ್ಷಕರನ್ನು ತಲುಪಲು, ನಾಟಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇದೆ ಎಂಬುದು ನನ್ನ ಅನಿಸಿಕೆ. ಮುಖ್ಯಮಂತ್ರಿ ಪಾತ್ರವನ್ನು ’ಚಂದ್ರು’ ರವರಲ್ಲದೇ, ಇತರೆ ಯಾರೇ ನಟಿಸಿದರೂ ಕೂಡ, ನಾಟಕವು ಪ್ರೇಕ್ಷಕರನ್ನು ಸೆಳೆಯಬಲ್ಲದು ಎಂಬುದನ್ನುಕಲಾಗಂಗೋತ್ರಿ ನಿರೂಪಿಸಬಲ್ಲದು.

ಕಲಾಗಂಗೋತ್ರಿ ಯಂತಹ ಹವ್ಯಾಸಿ ರಂಗತಂಡ ವೊಂದು,ಅರ್ಧ ಶತಮಾನಗಳಿಗೂ ಮಿಗಿಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು, ಯಶಸ್ವಿಯಾಗಿ ಬೆಳೆಯುತ್ತಿರುವುದು ’ರಂಗಭೂಮಿ’ ಯ ಮುನ್ನಡೆಯ ಬಗ್ಗೆ ಭರವಸೆಯನ್ನು ಮೂಡಿಸುತ್ತದೆ. ಅಂತೆಯೇ, ಈ ನಾಟಕವನ್ನು ಆಯೋಜಿಸುವುದರಲ್ಲಿ ನಮ್ಮ ಮೈಸೂರಿನ ’ನಟನ’ ತಂಡದ ಪರಿಶ್ರಮವೂ ಕಡಿಮೆಯೇನಲ್ಲ. ಈ ವೇಳೆ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅವರನ್ನು ಮಂಡ್ಯ ರಮೇಶ್‌ (Mandya Ramesh)ಅಭಿನಂದಿಸಿದರು.