‘ರಾಜ್ಯದ ಎಲ್ಲ ಬಿಜೆಪಿ ಸಂಸದರು ನರಸತ್ತವರು, ಶಿಖಂಡಿಗಳು’
60 ವರ್ಷಗಳಿಂದ ಮಹದಾಯಿ ವಿಚಾರದಲ್ಲಿ ಅನ್ಯಾಯ ಆಗಿದೆ| ಸ್ವಾರ್ಥಕ್ಕಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ರೈತರನ್ನು ಬಲಿ ಕೊಟ್ಟಿದ್ದಾರೆ| ಕಳಸಾ ಬಂಡೂರಿ ನಾಲಾದ ಮೂರು ಬೊಗಸೆ ನೀರು ಕುಡಿದು ಸಾಯಬೇಕು ಎಂದುಕೊಂಡಿದ್ದೆ ಈಗ ಈ ಎಲ್ಲ ಸಂಸದರ ಬಾಯಿಗೆ ಮೂರು ಹಿಡಿ ಮಣ್ಣು ಹಾಕಿ ಸಾಯುತ್ತೇನೆ ಎಂದ ವಿಜಯ್ ಕುಲಕರ್ಣಿ|
ಬೆಳಗಾವಿ[ಡಿ.20): ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿದೆ. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಏನೋ ಆಶಾಭಾವನೆ ಇಟ್ಟುಕೊಂಡಿದ್ದೆವು. ಮಹದಾಯಿ ವಿವಾದ ಬಗೆಹರಿಯುತ್ತೆ ಅಂತ ತಿಳಿದುಕೊಂಡಿದ್ದೆವು, ಪ್ರಹ್ಲಾದ ಜೋಶಿ ಸಂಸದೀಯ ಸಚಿವರಿದ್ದರೂ ಏನೂ ಪ್ರಯೋಜನವಿಲ್ಲ. ರಾಜ್ಯದ ಎಲ್ಲ ಬಿಜೆಪಿ ಸಂಸದರು ನರಸತ್ತವರು, ಇವರೆಲ್ಲಾ ಶಿಖಂಡಿಗಳು ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 60 ವರ್ಷಗಳಿಂದ ಮಹದಾಯಿ ವಿಚಾರದಲ್ಲಿ ಅನ್ಯಾಯ ಆಗಿದೆ. ಸ್ವಾರ್ಥಕ್ಕಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ರೈತರನ್ನು ಬಲಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ. ಇನ್ನು ಮುಂದೆ ಉಗ್ರ ಹೋರಾಟಕ್ಕೆ ಸಿದ್ದತೆ ನಡೆಸಿದ್ದೇವೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಲಪ್ರಭಾ ನೀರನ್ನೇ ಕುಡಿಯುತ್ತಾರೆ. ಕಾಮಗಾರಿ ಆಗಲೇಬಾರದು ಎಂಬ ಉದ್ದೇಶ ಪ್ರಹ್ಲಾದ್ ಜೋಶಿಗೆ ಇದೆ. ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರೋಧ ಹೋರಾಡಿದ ರೀತಿ ಹೋರಾಟ ಮಾಡ್ತೇವೆ ಎಂದಿದ್ದಾರೆ.
ರೈತರು ತಾವು ಪಡೆದ ಯಾವುದೇ ಸಾಲ ತುಂಬಬಾರದು. ನೀರು ಕೊಡೋವರಗೆ ಸಾಲ ತುಂಬಲ್ಲ ಎಂದು ಸ್ಪಷ್ಟವಾಗಿ ಹೇಳಿ, ಕಳಸಾ ಬಂಡೂರಿ ನಾಲಾದ ಮೂರು ಬೊಗಸೆ ನೀರು ಕುಡಿದು ಸಾಯಬೇಕು ಎಂದುಕೊಂಡಿದ್ದೆ ಈಗ ಈ ಎಲ್ಲ ಸಂಸದರ ಬಾಯಿಗೆ ಮೂರು ಹಿಡಿ ಮಣ್ಣು ಹಾಕಿ ಸಾಯಿತ್ತೇನೆ. ನರಗುಂದ ಬಂಡಾಯ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.