ಕಾಜೂರು ಕರ್ಣ ಎಂದೇ ಖ್ಯಾತಿ ಹೊಂದಿ ಇತ್ತೀಚೆಗೆ ಸೆರೆಯಾಗಿದ್ದ 50ಕ್ಕೂ ಹೆಚ್ಚು ವಯಸ್ಸಿನ ಕಾಡಾನೆ ಕರ್ಣ, ಸೆರೆಯಾಗುವುದಕ್ಕೂ ಮುಂಚೆ ಜನರಿಂದ ತಿಂದಿದ್ದ ಗುಂಡೇಟಿನಿಂದ ಈಗ ನರಕಯಾತನೆ ಅನುಭವಿಸುತ್ತಿದ್ದಾನೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಕೊಡಗು (ಮಾ.06): ಕಾಜೂರು ಕರ್ಣ ಎಂದೇ ಖ್ಯಾತಿ ಹೊಂದಿ ಇತ್ತೀಚೆಗೆ ಸೆರೆಯಾಗಿದ್ದ 50ಕ್ಕೂ ಹೆಚ್ಚು ವಯಸ್ಸಿನ ಕಾಡಾನೆ ಕರ್ಣ, ಸೆರೆಯಾಗುವುದಕ್ಕೂ ಮುಂಚೆ ಜನರಿಂದ ತಿಂದಿದ್ದ ಗುಂಡೇಟಿನಿಂದ ಈಗ ನರಕಯಾತನೆ ಅನುಭವಿಸುತ್ತಿದ್ದಾನೆ. ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಕ್ರಾಲ್ ನಲ್ಲಿ ಪಳಗುತ್ತಿರುವ ಕರ್ಣ ಕಾಡಾನೆಗೆ ದಾಂಧಲೆ ನಡೆಸುತ್ತಿದೆ ಎಂದು ಹಲವು ಜನರು ತಮ್ಮ ಕೋವಿಗಳಿಂದ ಶೂಟ್ ಮಾಡಿದ್ದಾರೆ. ಸೆರೆಯಾಗಿ ಕ್ರಾಲ್ ನಲ್ಲಿ ಇರುವ ಆನೆಗೆ ಈಗ ಅವುಗಳು ಸಂಪೂರ್ಣ ಗಾಯಗಳಾಗಿದ್ದು ಮಲಗುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಮೂಕ ವೇದನೆ ಅನುಭವಿಸುತ್ತಿದೆ. 

ಆನೆಯ ಹಿಂದಿನ ಎರಡು ಕಾಲುಗಳಿಗೂ ಕಿಡಿಗೇಡಿಗಳು ಗುಂಡು ಹೊಡೆದಿದ್ದು, ಎರಡು ಕಾಲುಗಳು ಬಹುತೇಕ ಕೊಳೆತು ಹೋದ ಸ್ಥಿತಿ ತಲುಪಿವೆ. ಕಳೆದ ಹತ್ತು ದಿನಗಳಿಂದಲೂ ಮಲಗದೆ ನರಕಯಾತನೆ ಅನುಭವಿಸುತ್ತಿದೆ. ಕಾಡಾನೆಗೆ ಸದ್ಯ ದುಬಾರೆ ಸಾಕಾನೆ ಶಿಬಿರದ ಪಶುವೈದ್ಯ ಡಾ. ಚಿಟ್ಟಿಯಪ್ಪ ಮತ್ತು ದುಬಾರೆ ಸಾಕಾನೆ ಶಿಬಿರದ ಉಪ ವಲಯ ಅರಣ್ಯ ಅಧಿಕಾರಿ ಕೆ.ಪಿ. ರಂಜನ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ವೈದ್ಯ ಚಿಟ್ಟಿಯಪ್ಪ ಅವರು ಆನೆ ಎರಡು ಕಾಲುಗಳಿಂದ ಎರಡು ಗುಂಡುಗಳನ್ನು ಹೊರತೆಗೆದಿದ್ದಾರೆ. 

ಕೊಡಗು ವಿಶ್ವವಿದ್ಯಾಲಯ ಉಳಿಸಿ: ಸಿ ಅಂಡ್ ಡಿ ಲ್ಯಾಂಡ್ ಭೂಮಿಯನ್ನು ರೈತರಿಗೆ ದಾಖಲೆ ಮಾಡಿಕೊಡಿ

ಹಿಂದಿನ ಬಲಗಾಲಿನಲ್ಲಿ ಇನ್ನೂ ಒಂದು ಗುಂಡು ಇರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಕರ್ಣ ಆನೆಯನ್ನು ಪಳಗಿಸುತ್ತಿರೋ ದುಬಾರೆಯ ಮಾವುತರು ಮತ್ತು ಕವಾಡಿಗರು ಆನೆಯ ಬಗ್ಗೆಯ ಎಚ್ಚರಿಕೆ ವಹಿಸುತ್ತಿದ್ದಾರೆ. ಅಲ್ಲದೆ ಕರ್ಣ ಆನೆಯನ್ನು ಉಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಡಾ. ಚಿಟ್ಟಿಯಪ್ಪ ಗ್ರಾಮದಲ್ಲಿ ದಾಂಧಲೆ ಮಾಡುತಿತ್ತು ಎಂತಲೋ, ಇಲ್ಲ ಬೆಳೆ ಹಾಳು ಮಾಡುತ್ತಿದೆ ಎನ್ನುವ ಕಾರಣಕ್ಕೋ ಆನೆಗೆ ಹಲವರು ಶೂಟ್ ಮಾಡಿದ್ದಾರೆ. 

ಈಗ ಅವುಗಳು ಸಂಪೂರ್ಣ ಕೀವು ತುಂಬಿ ಕಾಲೇ ಕೊಳೆಯುತ್ತಿವೆ. ಕಳೆದ ಹತ್ತು ದಿನಗಳಿಂದ ಅದು ನಿದ್ರೆ ಮಾಡುವುದಕ್ಕೆ ಆಗುತ್ತಿಲ್ಲ. ಗುಂಡೇಟಿನಿಂದ ಆನೆ ಕಾಲಿನ ಸಾಕಷ್ಟು ಮಾಂಸಖಂಡವೇ ಕೊಳೆತು ಹೋಗಿದೆ. ಇಂತಹ ಕೆಲಸವನ್ನು ಯಾರೂ ಮಾಡಬಾರದು. ಕಳೆದ ಹತ್ತು ದಿನಗಳ ಅಂತರದಲ್ಲಿ ಒಂದಾದ ಮೇಲೆ ಒಂದರಂತೆ ಎರಡು ಕಾಲುಗಳಿಂದ ಎರಡು ಗುಂಡುಗಳನ್ನು ಹೊರ ತೆಗೆಯಲಾಗಿದೆ. ಅದರ ಹಿಂಭಾಗದ ಬಲಗಾಲಿನಲ್ಲಿ ಇನ್ನೂ ಒಂದು ಗುಂಡು ಇರುವ ಸಾಧ್ಯತೆ ಇದೆ. ಸದ್ಯ ಆನೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆ ಮುಂದುವರಿದಿದೆ. 

ಶ್ವಾನಗಳ ಜೀವ ಹಿಂಡುತ್ತಿದೆ ಪಾರೋ ವೈರಲ್ ಡಯೇರಿಯಾ ಸೋಂಕು: ಕೊಡಗಿನಲ್ಲಿ 50ಕ್ಕೂ ಹೆಚ್ಚು ನಾಯಿಗಳ ಸಾವು

ನೀರು ಆಹಾರವನ್ನು ಸೇವಿಸುತ್ತಿದೆ. ಶೇಕಡ 90 ಭಾಗ ಆನೆ ಮೊದಲಿನಂತೆ ಆರೋಗ್ಯವಾಗಬಹುದು ಎಂಬ ನಿರೀಕ್ಷೆ ಇದೆ ಎಂದಿದ್ದಾರೆ. ಈ ಆನೆಯನ್ನು ಫೆ. 3 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದ ಬಳಿ ಸೆರೆ ಹಿಡಿಯಲಾಗಿತ್ತು. ಗ್ರಾಮದಲ್ಲಿ ಸಾಕಷ್ಟು ಓಡಾಡಿಕೊಂಡಿದ್ದ ಈ ಕಾಡಾನೆಗೆ ಜನರು ಮತ್ತು ಆರ್ಆರ್ಟಿ ಸಿಬ್ಬಂದಿ ಕರ್ಣ ಎಂದೇ ಹೆಸರಿಟ್ಟಿದ್ದರು. ಅದನ್ನು ಸೆರೆ ಹಿಡಿದ ಬಳಿಕ ದುಬಾರೆ ಸಾಕಾನೆ ಶಿಬಿರದಲ್ಲಿ ಇರುವ ಕ್ರಾಲ್ ನಲ್ಲಿ ಪಳಗಿಸಲಾಗುತ್ತಿತ್ತು.