ಶ್ವಾನ ಎಂದರೆ ಎಲ್ಲರಿಗೂ ಇನ್ನಿಲ್ಲದ ಮುದ್ದು ಅಲ್ವವೆ. ಆ ಪ್ರೀತಿಯ ಶ್ವಾನಕ್ಕೆ ಈಗ ಎಲ್ಲೆಡೆ ಪಾರೋ ವೈರಲ್ ಸೋಂಕು ತಗುಲುತ್ತಿದ್ದು ಹಲವು ನಾಯಿಗಳು ಈ ಸೋಂಕಿಗೆ ಬಲಿಯಾಗುತ್ತಿವೆ. ಹೀಗಾಗಿ ಶ್ವಾನ ಪ್ರಿಯರು, ಅವುಗಳ ಮಾಲೀಕರು ಕಟ್ಟೆಚ್ಚರ ವಹಿಸಬೇಕಾಗಿದೆ.  

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.05): ಶ್ವಾನ ಎಂದರೆ ಎಲ್ಲರಿಗೂ ಇನ್ನಿಲ್ಲದ ಮುದ್ದು ಅಲ್ವವೆ. ಆ ಪ್ರೀತಿಯ ಶ್ವಾನಕ್ಕೆ ಈಗ ಎಲ್ಲೆಡೆ ಪಾರೋ ವೈರಲ್ ಸೋಂಕು ತಗುಲುತ್ತಿದ್ದು ಹಲವು ನಾಯಿಗಳು ಈ ಸೋಂಕಿಗೆ ಬಲಿಯಾಗುತ್ತಿವೆ. ಹೀಗಾಗಿ ಶ್ವಾನ ಪ್ರಿಯರು, ಅವುಗಳ ಮಾಲೀಕರು ಕಟ್ಟೆಚ್ಚರ ವಹಿಸಬೇಕಾಗಿದೆ. ಹೌದು ಎಲ್ಲೆಡೆ ಹಕ್ಕಿ ಜ್ವರದ ಕಾಟ ಎದುರಾಗಿದ್ದರೆ ಅದರ ನಡುವೆ ಕೊಡಗು ಜಿಲ್ಲೆಯಲ್ಲಿ ನೂರಾರು ಶ್ವಾನಗಳಿಗೆ ಪಾರೋ ವೈರಲ್ ಸೋಂಕು ವಿಪರೀತವಾಗಿ ಹರಡುತ್ತಿದೆ. ಈ ಸೋಂಕಿಗೆ ಒಳಗಾದ ಶ್ವಾನಗಳು ಆಹಾರಬಿಟ್ಟು ರಕ್ತಬೇಧಿ ಮತ್ತು ರಕ್ತವಾಂತಿಯಿಂದ ನರಳಿ ಬಳಿಕ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ. 

ಕಳೆದ ಹದಿನೈದು ದಿನಗಳಲ್ಲಿಯೇ ಈ ಸೋಂಕಿಗೆ ತುತ್ತಾಗಿ 50 ಕ್ಕೂ ಹೆಚ್ಚು ಸಾಕುಶ್ವಾನಗಳು ಸಾವನ್ನಪ್ಪಿವೆ. ಇನ್ನು ಬೀದಿ ನಾಯಿಗಳು ಕೂಡ ಸೋಂಕಿನಿಂದ ಬಳಸಿ ಸಾವನ್ನಪ್ಪುತ್ತಿದ್ದು, ಅದರ ಲೆಕ್ಕ ದೊರೆತ್ತಿಲ್ಲ. ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಿಗೆ ನಿತ್ಯ 20 ರಿಂದ 25 ನಾಯಿಗಳು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಬರುತ್ತಿವೆ. ವಿಪರ್ಯಾಸವೆಂದರೆ ಪಶು ವೈದ್ಯ ಆಸ್ಪತ್ರೆಯಲ್ಲಿ ಅಗತ್ಯದಷ್ಟು ವೈದ್ಯರೇ ಇಲ್ಲದೆ ಶ್ವಾನ ಪ್ರಿಯರು ಚಿಕಿತ್ಸೆಗೆ ಪರದಾಡಬೇಕಾಗಿದೆ. ಇರುವ ವೈದ್ಯರೇ ದಿನವಿಡೀ ಬಿಡುವಿಲ್ಲದೆ ಶ್ವಾನಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಒಂದು ಶ್ವಾನಕ್ಕೆ ಈ ಸೋಂಕು ಬಂತೆಂದರೆ ಅದರ ಸಂಪರ್ಕಕ್ಕೆ ಬಂದ ಶ್ವಾನ ಅಥವಾ ಸೋಂಕಿತ ಶ್ವಾನ ಓಡಾಡಿದ ಜಾಗಗಳಲ್ಲಿ ಆರೋಗ್ಯಯುತ ಶ್ವಾನ ಓಡಾಡಿದರೆ ಅವುಗಳಿಗೂ ಸೋಂಕು ಹರಡುತ್ತದೆ. 

ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್‌

ಸೋಂಕು ಬಂದ ಎರಡನೇ ದಿನದಿಂದಲೇ ಶ್ವಾನ ಆಹಾರ ತ್ಯಜಿಸುತ್ತದೆ. ಬಳಿಕ ನಾಲ್ಕನೇ ದಿನದಿಂದ ರಕ್ತಮಿಶ್ರಿತ ಬೇಧಿ ಮತ್ತು ವಾಂತಿ ಮಾಡಿಕೊಳ್ಳಲಾರಂಭಿಸುತ್ತದೆ. ಒಮ್ಮೆ ರಕ್ತಬೇಧಿ ಮತ್ತು ವಾಂತಿ ಮಾಡಿಕೊಳ್ಳಲು ಆರಂಭಿಸಿದವೆಂದರೆ ಅವುಗಳನ್ನು ಬದುಕಿಸುವುದು ಕಷ್ಟ. ಆದರೆ ನಿರಂತರ ಐದರಿಂದ ಆರು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಶೇ 80 ರಷ್ಟು ಇರುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಒಂದೋ ಎರಡು ದಿನಗಳು ಮಾತ್ರವೇ ಚಿಕಿತ್ಸೆ ಕೊಡಿಸಿ ಸುಮ್ಮನಾದರೆ ಸಂಪೂರ್ಣ ಗುಣಮುಖವಾಗುವುದಿಲ್ಲ. ತಾತ್ಕಾಲಿಕವಾಗಿ ಸ್ವಲ್ಪ ಚೇತರಿಸಿಕೊಂಡಂತೆ ಕಂಡು ಮತ್ತೆ ರೋಗ ಉಲ್ಭಣಗೊಂಡು ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಇಂತಹ ಕಾಯಿಲೆ ಕೊಡಗು ಜಿಲ್ಲೆಯಲ್ಲಿ ತೀವ್ರವಾಗಿ ಹರಡುತ್ತಿದ್ದು ಶ್ವಾನ ಪ್ರಿಯರು ಕಂಗಾಲಾಗುವಂತೆ ಮಾಡಿದೆ. ಮುದ್ದಿನಿಂದ ಸಾಕಿದ ನಾಯಿಗಳು ಇದ್ದಕ್ಕಿದ್ದಂತೆ ರೋಗಕ್ಕೆ ತುತ್ತಾಗಿ ನರಳಿ ಸಾಯುವುದನ್ನು ನೋಡುವುದಕ್ಕೂ ಮೊದಲೇ ಅವುಗಳ ಮಾಲೀಕರು ಲಸಿಕೆ ಹಾಕಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹವಾಮಾನದಲ್ಲಿ ಅತಿಯಾದ ಬಿಸಿಲಿನ ತಾಪಮಾನದಿಂದಾಗಿ ಈ ರೋಗ ಹರುಡುವುದಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. 

ಅಲ್ಯೂಮಿನಿಯಂ ಏಣಿಗೆ ಮೂರು ವರ್ಷಗಳಲ್ಲಿ 17 ಕಾರ್ಮಿಕರು ಸಾವು: ಕೊಡಗು ಚೆಸ್ಕಾಂ ಕಾರ್ಯಪಾಲಕ ಹೇಳಿದ್ದೇನು?

ಪರಿಸರ ರಕ್ಷಣೆಯಾದರೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎನ್ನುತ್ತಾರೆ ವೈದ್ಯ ಕ್ಯಾಪ್ಟನ್ ತಿಮ್ಮಯ್ಯ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಸದ್ಯಕ್ಕೆ ಇಲ್ಲದಿದ್ದರೂ ಪಾರೋ ವೈರಲ್ ಡಯೇರಿಯಾ ಸೋಂಕು ಶ್ವಾನಗಳನ್ನು ತೀವ್ರವಾಗಿ ಬಾಧಿಸುತ್ತಿದೆ. ಶ್ವಾನಪ್ರಿಯರು ಮೈಮರೆಯದೆ ಅವುಗಳಿಗೆ ಲಸಿಕೆ ಹಾಕಿಸಿ ತಮ್ಮ ಮುದ್ದಿನ ಶ್ವಾನಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಈ ಕುರಿತು ಮಾತನಾಡಿರುವ ಶ್ವಾನದ ಮಾಲೀಕರೊಬ್ಬರು ನಾವು ಅಷ್ಟೊಂದು ಮುದ್ದಿನಿಂದ ಅವುಗಳನ್ನು ಸಾಕಿರುತ್ತೇವೆ. ಆದರೆ ಇದ್ದಕ್ಕಿದ್ದಂತೆ ಅವುಗಳು ಈ ಕಾಯಿಲೆಗೆ ತುತ್ತಾಗಿ ನರಳಾಡುವುದನ್ನು ನೋಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.