ಕಲ್ಪತರು ನಾಡಿಗೆ ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಗಳು ಉತ್ತಮವಾಗಿ ಬಂದ ಪರಿಣಾಮ ಅಂರ್ತಜಲಕ್ಕೆ ಜೀವಕಳೆ ಬಂದಿದ್ದರಿಂದ ಕಳೆದ ಬೇಸಿಗೆಯಲ್ಲಿ ತೆಂಗಿಗೆ ಹೆಚ್ಚಿನ ತೊಂದರೆ ಆಗಲಿಲ್ಲ. ಆದರೆ ಈ ವರ್ಷ ಮುಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿರುವುದರಿಂದ ತೆಂಗು ಬೆಳೆಗಾರರು ನಿತ್ಯ ಮೋಡ ಮುಸುಕಿದ ವಾತಾವರಣದತ್ತ ಹತಾಶಾ ಭಾವನೆಯಿಂದ ನೋಡುತ್ತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಬಿ. ರಂಗಸ್ವಾಮಿ

 ತಿಪಟೂರು : ಕಲ್ಪತರು ನಾಡಿಗೆ ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಗಳು ಉತ್ತಮವಾಗಿ ಬಂದ ಪರಿಣಾಮ ಅಂರ್ತಜಲಕ್ಕೆ ಜೀವಕಳೆ ಬಂದಿದ್ದರಿಂದ ಕಳೆದ ಬೇಸಿಗೆಯಲ್ಲಿ ತೆಂಗಿಗೆ ಹೆಚ್ಚಿನ ತೊಂದರೆ ಆಗಲಿಲ್ಲ. ಆದರೆ ಈ ವರ್ಷ ಮುಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿರುವುದರಿಂದ ತೆಂಗು ಬೆಳೆಗಾರರು ನಿತ್ಯ ಮೋಡ ಮುಸುಕಿದ ವಾತಾವರಣದತ್ತ ಹತಾಶಾ ಭಾವನೆಯಿಂದ ನೋಡುತ್ತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ವಿನಾಶದತ್ತ ತೆಂಗು: ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಕಲ್ಪತರು ನಾಡು ಭೀಕರ ಬರದ ಸುಳಿಗೆ ಸಿಲುಕಿದ್ದರಿಂದÜ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ವಿನಾಶದಂಚಿಗೆ ತಲುಪಿತ್ತು. ಆದರೆ ಕಳೆದ ವರ್ಷ ಉತ್ತಮ ಮಳೆ ಬಂದ ಪರಿಣಾಮ ಈವರೆಗೂ ತುಸು ಹಸಿರಾಗಿದ್ದ ತೆಂಗು, ಮಳೆ ಇಲ್ಲದ್ದರಿಂದ ಮತ್ತೆ ಸೊರಗುತ್ತಿದೆ. ಇತ್ತೀಚೆಗೆ ತೆಂಗಿಗೆ ನುಸಿಪೀಡೆ, ಗರಿರೋಗ, ರಸ ಸೋರುವ ರೋಗ, ಬೆಂಕಿ ರೋಗ, ಬೇರು ಸೊರಗು ರೋಗ, ಹರಳು ಉದುರುವುದು, ಹೊಂಬಾಳೆ ಸೊರಗುವುದು ಸೇರಿದಂತೆ ಸುಳಿ ಕೊರಕ ರೋಗಬಾಧೆಗಳು ಹತ್ತು ಹಲವಾರು ವರ್ಷಗಳ ಕಾಲದಿಂದ ಕಷ್ಟಪಟ್ಟು ಬೆಳೆಸಿರುವ ತೆಂಗಿನ ಮರಗಳಿಗೆ ಕಂಟಕಗವಾಗಿ ಪರಿಣಮಿಸಿರುವುದರಿಂದ ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ.

ಬೆಳೆಯೂ ಇಲ್ಲ, ಬೆಲೆಯೂ ಇಲ್ಲ: ಕಳೆದ ವರ್ಷ ಹೆಚ್ಚು ಮಳೆ ಸುರಿದ ಪರಿಣಾಮ ತೋಟಗಳಲ್ಲಿ ಹಲವಾರು ತಿಂಗಳುಗಳ ಕಾಲ ನೀರು ನಿಂತಿದ್ದರಿಂದ ಬೇರು ಸೊರಗು ರೋಗ ವಿಪರೀತವಾದ ಕಾರಣ ಸಾಕಷ್ಟುಮರಗಳು ಒಣಗಿ ಹೋಗುತ್ತಿದ್ದರೆ, ಉಳಿದ ಮರಗಳಲ್ಲಿ ತೆಂಗಿನ ಹರಳುಗಳು ಉದುರಿ ಇಳುವರಿ ಮೇಲೆ ತೀವ್ರ ಹೊಡೆತ ಬೀಳುತ್ತಿದೆ.

ನಿರಂತರ ಕುಸಿತ ಕಾಣುತ್ತಿರುವ ಕೊಬ್ಬರಿ ಬೆಲೆ: ನಾನಾ ರೋಗಬಾಧೆಗಳ ಕಾರಣಗಳಿಂದ ತೆಂಗಿನ ಕಾಯಿಗಳ ಇಳುವರಿ ಒಂದು ಕಡೆ ಕುಸಿತ ಕಂಡರೆ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ವರ್ಷದಿಂದಲೂ ನಿರಂತರವಾಗಿ ಕುಸಿಯುತ್ತಿರುವುದರಿಂದ ಕಲ್ಪತರು ನಾಡಿನ ತೆಂಗು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಹೀಗೆ ಇಳುವರಿ ಹಾಗೂ ಬೆಲೆಯಲ್ಲಿ ತೀವ್ರ ನಷ್ಟಕಾಣುತ್ತಿದ್ದರೂ ಬೆಳೆಗಾರರು ಭವಿಷ್ಯದಲ್ಲಾದರೂ ತೆಂಗು ಲಾಭ ನೀಡಬಹುದೆಂಬ ಆಸೆಯಿಂದ ತೆಂಗು ಉಳಿಸಿಕೊಳ್ಳಲು ನಿತ್ಯ ಹರಸಾಹಸಕ್ಕಿಳಿಯುವಂತಾಗಿದೆ. ಮಳೆ ಇಲ್ಲದ್ದರಿಂದ ಸಾವಿರಾರು ಅಡಿ ಆಳದ ಕೊಳವೆ ಬಾವಿಗಳಿಂದ ನೀರುಣಿಸಲು ಲಕ್ಷಾಂತರ ರುಪಾಯಿ ಸಾಲ ಮಾಡಿ ಪಂಪು-ಮೋಟಾರ್‌ ಅಳವಡಿಸುತ್ತಿದ್ದಾರೆ. ಸಾಕಷ್ಟುಬೆಳೆಗಾರರು ಡ್ರಿಪ್‌ ಮೂಲಕ ನೀರು ನೀಡಲು ಬಂಡವಾಳ ಹಾಕುವಂತಾಗಿದೆ. ಆದರೆ ತೆಂಗು ಬೆಳೆಗಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೆಂಗು ಉಳಿಸಿಕೊಳ್ಳಲು ಯಾವುದೇ ನೆರವಿಗೂ ಬಾರದಿರುವುದು ಇಲ್ಲಿನ ತೆಂಗು ಬೆಳೆಗಾರರ ದುರಂತಕ್ಕೆ ಸಾಕ್ಷಿಯಾಗಿದೆ.

ಪಶುಸಂಗೋಪನೆಗೂ ಕಂಟಕ: ಕೊಬ್ಬರಿ ಬೆಲೆ ಹಾಗೂ ಇಳುವರಿಯ ಕುಸಿತದಿಂದ ನಷ್ಟಅನುಭವಿಸುತ್ತಿರುವ ರೈತರು ಇತ್ತೀಚೆಗೆ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪಶುಸಂಗೋಪನೆಯನ್ನೇ ಪೂರ್ಣಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಆದರೆ ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು ರಾಗಿ ಬೆಳೆಯೂ ಕೈಕೊಟ್ಟಿರುವುದರಿಂದ ರಾಸುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದ್ದು ಕೂಡಲೆ ಸರ್ಕಾರ ಗೋಶಾಲೆ ಹಾಗೂ ಮೇವು ಬ್ಯಾಂಕ್‌ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ: ತಾಲೂಕಿನ ಕೆಲವೇ ಕೆಲ ದೊಡ್ಡ ಕೆರೆಕಟ್ಟೆಗಳಲ್ಲಿ ನೀರಿರುವುದು ಬಿಟ್ಟರೆ, ಬಹುತೇಕ ಕೆರೆಗಳು ಮಳೆ ಬಾರದ್ದರಿಂದ ಖಾಲಿಖಾಲಿಯಾಗಿವೆ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮಗಳಲ್ಲಿನ ಕಿರುನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿದ್ದು, ತಾಲೂಕಿನಲ್ಲಿಯೇ ಹೇಮಾವತಿ ನಾಲೆ ಹಾಯ್ದು ಹೋಗಿದ್ದರೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಆಗುತ್ತಿಲ್ಲ.

ವಿಶೇಷ ಪ್ಯಾಕೇಜ್‌ ನೀಡಲಿ: ಮುಂಗಾರು ಸಂಪೂರ್ಣ ಕೈಕೊಟ್ಟಿರುವುದರಿಂದ ತಾಲೂಕಿನಾದ್ಯಂತ ಬರಗಾಲದ ಛಾಯೆ ತೀವ್ರವಾಗಿದ್ದು ಸರ್ಕಾರ ಕೂಡಲೆ ಕಲ್ಪತರು ನಾಡನ್ನು ಬರಗಾಲ ಪ್ರದೇಶವೆಂದು ಘೋಷಿಸಿ, ತೆಂಗು ಬೆಳೆಗಾರರ ನೆರವಿಗೆ ಧಾವಿಸಿ ಶೀಘ್ರ ವಿಶೇಷ ಪ್ಯಾಕೇಜ್‌ ಮೂಲಕ ಪರಿಹಾರ ನೀಡಿ ವಿನಾಶದತ್ತ ಸಾಗಿರುವ ತೆಂಗು ಬೆಳೆ ಹಾಗೂ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲಿ ಎಂಬುದು ಬೆಳೆಗಾರರು ಒತ್ತಾಯವಾಗಿದೆ.

ಈ ಭಾಗದಲ್ಲಿ ಸತತವಾಗಿ ಕಾಡುತ್ತಿರುವ ಬರಗಾಲ, ಬಿಟ್ಟೂಬಿಡದೆ ಕಾಡುತ್ತಿರುವ ರೋಗರುಜಿನೆಗಳ ಕಾಟದಿಂದ ಸಾಕಷ್ಟುತೆಂಗಿನ ಮರಗಳು ಹಾಳಾಗಿ ಒಣಗುತ್ತಿರುವುದು ಕಂಡು ಬಂದಿದೆ. ಬೆಳೆ ಹಾಗೂ ಬೆಲೆ ಕುಸಿತ ರೈತರನ್ನು ಕಂಗೆಡಿಸಿದೆ. ಈಗಲೂ ಮಳೆ ಬಂದರೆ ಸಹಾಯವಾಗಲಿದೆ. ಸರ್ಕಾರದ ಕಡೆಯಿಂದ ಇನ್ನೂ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಇಲಾಖೆಯಿಂದ ಯಾವುದಾದರೂ ಪರಿಹಾರ ಬಂದಲ್ಲಿ ಬೆಳೆಗಾರರಿಗೆ ತಿಳಿಸಲಾಗುವುದು.

ಚಂದ್ರಶೇಖರ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪಟೂರು.

ಕಲ್ಪತರು ನಾಡಿನÜ ರೈತರ ಬದುಕಿನ ಆರ್ಥಿಕ ಶಕ್ತಿಯೇ ತೆಂಗು ಬೆಳೆಯಾಗಿದ್ದು, ಲಕ್ಷಾಂತರ ತೆಂಗಿನ ಮರಗಳು ಬರಗಾಲ ಮತ್ತು ರೋಗರುಜಿನೆಗಳಿಂದ ಒಣಗಿ ಹೋಗಿವೆ. ಕೂಡಲೆ ಸರ್ಕಾರ ತಾಲೂಕನ್ನು ಬರಗಾಲವೆಂದು ಘೋಷಿಸಿ ತೆಂಗು, ಅಡಿಕೆ ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ಹಾಗೂ ಬೆಂಬಲ ಬೆಲೆ ಘೋಷಿಸಬೇಕು. ಮುಂದಿನ ದಿನಗಳಲ್ಲಿ ಹೇಮಾವತಿ, ಎತ್ತಿನಹೊಳೆಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸಿದರೆ ತೋಟಗಾರಿಕೆಗೆæ ಅನುಕೂಲವಾಗುವುದು.

-ಬಿ.ಎನ್‌.ವಿಜಯಕುಮಾರ್‌ ತೆಂಗು ಬೆಳೆಗಾರರು ಹಾಗೂ ಕೊಬ್ಬರಿ ವರ್ತಕರು. ಬೆಳಗರಹಳ್ಳಿ.