Asianet Suvarna News Asianet Suvarna News

ಶಿವರಾಮ ಕಾರಂತ ಲೇಔಟ್‌ ಭೂ ಪರಿಹಾರಕ್ಕೆ ಮನವಿ ಸಲ್ಲಿಕೆಗೆ ಜೂ.30ರ ಗಡುವು: ಬಿಡಿಎ

ಡಾ.ಶಿವರಾಮ ಕಾರಂತ ಬಡಾವಣೆಗೆಂದು ಭೂಮಿ ನೀಡಿದ ಭೂಮಾಲಿಕರು ಅಭಿವೃದ್ಧಿ ಪಡಿಸಿದ ನಿವೇಶನಗಳ ಭೂ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಗದಿಪಡಿಸಿದ್ದ ಕಾಲಾವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಿದೆ. 

June 30 is the deadline for submission of appeal for Shivaram Karanth Layout land compensation gvd
Author
First Published May 28, 2023, 7:23 AM IST

ಬೆಂಗಳೂರು (ಮೇ.28): ಡಾ.ಶಿವರಾಮ ಕಾರಂತ ಬಡಾವಣೆಗೆಂದು ಭೂಮಿ ನೀಡಿದ ಭೂಮಾಲಿಕರು ಅಭಿವೃದ್ಧಿ ಪಡಿಸಿದ ನಿವೇಶನಗಳ ಭೂ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಗದಿಪಡಿಸಿದ್ದ ಕಾಲಾವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಿದೆ. ನಿಗದಿಪಡಿಸಿದ ದಿನಾಂಕದೊಳಗೆ ಭೂ ಮಾಲಿಕರು ನಿವೇಶನಕ್ಕಾಗಿ ಮನವಿ ಸಲ್ಲಿಸದಿದ್ದರೆ ಐತೀರ್ಪಿನಲ್ಲಿ ನಿಗದಿಪಡಿಸಿರುವ ನಗದು ಭೂ ಪರಿಹಾರವನ್ನು ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ನಿಯಮಾನುಸಾರ ಜಮಾ ಮಾಡುವುದಾಗಿ ಪ್ರಾಧಿಕಾರ ಪ್ರಕಟಣೆಯಲ್ಲಿ ಎಚ್ಚರಿಸಿದೆ.

ಡಾ.ಕೆ.ಶಿವರಾಮ ಕಾರಂತ ಬಡಾವಣೆಯನ್ನು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ರಚಿಸಲಾಗುತ್ತಿದ್ದು, ಭೂಮಾಲಿಕರಿಗೆ ನಗದು ಪರಿಹಾರ ಅಥವಾ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳ ರೂಪದಲ್ಲಿ ಎಕರೆ ಒಂದಕ್ಕೆ 9583 ಚದರ ಅಡಿಗಳಂತೆ ಭೂ ಪರಿಹಾರ ಲೆಕ್ಕಚಾರ ಮಾಡಿ ಪರಿಹಾರ ನೀಡಲು ಆದೇಶಿಸಲಾಗಿದೆ. ಭೂ ಮಾಲಿಕರು ಆಯ್ಕೆಗಳ ಪೈಕಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರವಾಗಿ ಪಡೆಯಲು ಇಚ್ಛೆ ವ್ಯಕ್ತಪಡಿಸಿ, ಸಂಬಂಧಪಟ್ಟವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ, ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ಅಂತಹ ಭೂಮಾಲಿಕರಿಗೆ ಭೂಸ್ವಾಧೀನವಾದ ಜಮೀನಿನ ವಿಸ್ತೀರ್ಣಕ್ಕೆ ನೀಡಬಹುದಾದ ಅಭಿವೃದ್ಧಿಪಡಿಸಿದ ನಿವೇಶನಗಳ ಪ್ರಮಾಣ ಪತ್ರವನ್ನು ನೀಡುವುದಾಗಿ ಬಿಡಿಎ ತಿಳಿಸಿದೆ.

ಹಣಕಾಸು ವಿಚಾರಕ್ಕೆ ಬಾರಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ, ಉದ್ಯಮಿ ನಾಯ್ದು ಫೈಟ್‌: ಪೊಲೀಸ್‌ ಠಾಣೆಗೆ ಪರಸ್ಪರ ದೂರು

ಐತೀರ್ಪು ಅನುಮೋದನೆಯಾದ ಪ್ರಕರಣಗಳಲ್ಲಿ ಭೂಸ್ವಾಧೀನ ಕಾಯ್ದೆಯಂತೆ ನೋಟಿಸ್‌ ನೀಡಿರುವ ಪ್ರಕರಣಗಳಲ್ಲಿ ಭೂಮಾಲೀಕರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ ವಿಶೇಷ ಭೂಸ್ವಾಧೀನಾಧಿಕಾರಿ ಅವರಿಗೆ ಮನವಿ ಸಲ್ಲಿಸಬೇಕು. ಈಗಾಗಲೇ ಕಾಳತಮ್ಮನಹಳ್ಳಿ, ಗಾಣಿಗರಹಳ್ಳಿ, ರಾಮಗೊಂಡನಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ವೀರಸಾಗರ, ದೊಡ್ಡಬೆಟ್ಟಹಳ್ಳಿ ಮತ್ತು ಬ್ಯಾಲಕೆರೆ ಗ್ರಾಮಗಳಲ್ಲಿ ಭೂಮಾಲೀಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಉಳಿದವರು ಸಹ ಜೂನ್‌ 30ರೊಳಗೆ ಅಭಿವೃದ್ಧಿಪಡಿಸಲಾದ ಭೂಮಿ ಪಡೆಯಲು ಮನವಿ ಸಲ್ಲಿಸಬಹುದು. ಇಲ್ಲವೇ ನ್ಯಾಯಾಲಯದಲ್ಲಿ ನಗದು ಪರಿಹಾರವನ್ನು ಜಮಾ ಮಾಡುವುದಾಗಿ ಬಿಡಿಎ ಹೇಳಿದೆ.

3546 ಎಕರೆಯಲ್ಲಿ ಬಡಾವಣೆ: ಡಾ. ಕೆ.ಶಿವರಾಮ ಕಾರಂತ ಬಡಾವಣೆಗೆಂದು ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3546 ಎಕರೆ ಪ್ರದೇಶದಲ್ಲಿ .2600 ಕೋಟಿ ವೆಚ್ಚದಲ್ಲಿ 18 ತಿಂಗಳಲ್ಲಿ 22 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಗುರಿಯನ್ನು ಬಿಡಿಎ ಹೊಂದಿದೆ. ಬಡಾವಣೆ ಭೂ ವಿವಾದದ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ.ಚಂದ್ರಶೇಖರ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ಬಡಾವಣೆ ನಿರ್ಮಾಣ ಮಾಡಲು ಅನುಮತಿ ನೀಡಿದೆ. ಈಗಾಗಲೇ 2800 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿಯು ನಡೆಸುತ್ತಿದೆ.

2 ಬಾರಿ ಗೆದ್ದವರನ್ನಷ್ಟೆ ಮಂತ್ರಿ ಮಾಡಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಪಕ್ಷದಲ್ಲಿ ಅಸಮಾಧಾನವಿಲ್ಲ: ಸಿದ್ದು

17 ಹಳ್ಳಿಗಳಲ್ಲಿ ಲೇಔಟ್‌ ಯೋಜನೆ: ಹಾರೋಹಳ್ಳಿ, ಅವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ಜಾರಕಬಂಡೆ ಕಾವಲ್‌, ವೀರಸಾಗರ, ದೊಡ್ಡಬೆಟ್ಟಹಳ್ಳಿ, ವಡೇರಹಳ್ಳಿ, ಬ್ಯಾಲಕೆರೆ, ಶಾಮರಾಜಪುರ, ಸೋಮಶೆಟ್ಟಿಹಳ್ಳಿ, ಕಾಳತಮ್ಮಹಳ್ಳಿ, ಗುಣಿ ಅಗ್ರಹಾರ, ಲಕ್ಷ್ಮೇಪುರ, ಕೆಂಪಾಪುರ, ಗಾಣಿಗರಹಳ್ಳಿ ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣವಾಗಲಿದೆ. ಆದರೆ, ಇನ್ನು ಕೆಲ ಭೂ ಮಾಲಿಕರು ಯೋಜನೆಗೆ ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದು, ಪರಿಹಾರದ ವಿಚಾರದಲ್ಲೂ ತಗಾದೆ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios