ತಾಲೂಕಿನ ಬಿದ್ರೆಹಳ್ಳ ಕಾವಲ್‌ನ ಎಚ್‌ಎಎಲ್‌ ಘಟಕಕ್ಕೆ ಶನಿವಾರ ಗೃಹಮಂತ್ರಿ ಡಾ. ಜಿ.ಪರಮೇಶ್ವರ್‌ ಭೇಟಿ ನೀಡಿ ಘಟಕದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಬಳಿಕ ತುಮಕೂರು ನಗರದಿಂದ ಎಚ್‌ಎಎಲ್‌ ಘಟಕಕ್ಕೆ ಪ್ರಯಾಣಿಸಲು ಸರ್ಕಾರಿ ಬಸ್‌ ಓಡಾಟಕ್ಕೆ ಹಸಿರು ನಿಶಾನೆ ತೋರಿದರು.

ಗುಬ್ಬಿ : ತಾಲೂಕಿನ ಬಿದ್ರೆಹಳ್ಳ ಕಾವಲ್‌ನ ಎಚ್‌ಎಎಲ್‌ ಘಟಕಕ್ಕೆ ಶನಿವಾರ ಗೃಹಮಂತ್ರಿ ಡಾ. ಜಿ.ಪರಮೇಶ್ವರ್‌ ಭೇಟಿ ನೀಡಿ ಘಟಕದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಬಳಿಕ ತುಮಕೂರು ನಗರದಿಂದ ಎಚ್‌ಎಎಲ್‌ ಘಟಕಕ್ಕೆ ಪ್ರಯಾಣಿಸಲು ಸರ್ಕಾರಿ ಬಸ್‌ ಓಡಾಟಕ್ಕೆ ಹಸಿರು ನಿಶಾನೆ ತೋರಿದರು.

Add Asianetnews Kannada as a Preferred SourcegooglePreferred

ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಎಚ್‌ಎಎಲ್‌ ಘಟಕದಲ್ಲಿ ಉದ್ಯೋಗಾವಕಾಶಕ್ಕೆ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡುವಂತೆ ಇಲ್ಲಿನ ಘಟಕದ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ದಿನದಲ್ಲಿ ಹೆಚ್ಚಿನ ರೀತಿಯಲ್ಲಿ ಉದ್ಯೋಗಾವಕಾಶಗಳು ಈ ಭಾಗದಲ್ಲಿ ಸಿಗಲಿದ್ದು, ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಹಾಗೂ ಇಲ್ಲಿನ ಪ್ರಗತಿಗೆ ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹ ಮುಂದಾಗಿದೆ. ಎಚ್‌ಎಎಲ್‌ ಘಟಕಕ್ಕೆ ಕಡಬ ಕೆರೆಯಿಂದ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಹೇಮಾವತಿ ಅಲೋಕಶನ್‌ ಮಾಡುವ ಮೂಲಕ ಕಡಬ ಕೆರೆಗೆ ಪ್ರತಿ ವರ್ಷ ಹೆಚ್ಚು ನದಿ ಮೂಲದ ನೀರು ತುಂಬಿಸುವ ಕೆಲಸವನ್ನು ಮಾಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಎಚ್‌ಎಎಲ್‌ ನಿರ್ಮಾಣವಾಗಿರುವುದು ನಮಗೆ ಹೆಚ್ಚಿನ ಸಂತೋಷ ತಂದಿದೆ.

ಮುಂದಿನ ದಿನದಲ್ಲಿ ಐತಿಹಾಸಿಕವಾಗಿ ಹೆಚ್ಚು ಅಭಿವೃದ್ಧಿಯತ್ತ ಸಾಗಲಿದ್ದು, ರಾಜ್ಯದಲ್ಲಿ ತುಮಕೂರು ಜಿಲ್ಲೆ ಮಾದರಿ ಮತ್ತು ಪ್ರಗತಿದತ್ತವಾಗಲಿದೆ ಎಂದರು. ಕಳೆದ ಬಾರಿ ನಾನು ಗೃಹ ಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರ ಜತೆಯಲ್ಲಿ ಗುದ್ದಲಿ ಪೂಜೆ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರದ ಮೇರೆಗೆ ಈಗ ಮತ್ತೊಮ್ಮೆ ರಾಜ್ಯದ ಗೃಹ ಮಂತ್ರಿಯಾಗಿ ಆಗುವ ಭಾಗ್ಯ ಸಿಕ್ಕಿದೆ. ಎಚ್‌ಎಎಲ್‌ ಘಟಕದ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಅತ್ಯಂತ ಖುಷಿಯ ವಿಚಾರವಾಗಿದೆ. ಈ ಭಾಗದ ಪ್ರಗತಿಗೆ ಹೆಚ್ಚು ಸಹಕಾರಿ ಮತ್ತು ಸಾವಿರಾರು ಮಂದಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ ಮುರಳೀಧರ್‌ ಹಾಲಪ್ಪ, ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಶಂಕರಾನಂದ ತಾತಯ್ಯ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌, ತಹಸೀಲ್ದಾರ್‌ ಬಿ.ಆರತಿ, ತಾಪಂ ಇಒ ಪರಮೇಶ್‌ಕುಮಾರ್‌, ಮುಖಂಡರಾದ ಪನೀಂದ್ರ, ಕುಂದರನಹಳ್ಳಿ ರವೀಶ್‌, ಶಶಿಧರ್‌ ಹಾಗೂ ಎಚ್‌ಎಎಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.