ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ 10 ಕ್ಷೇತ್ರಗಳಲ್ಲಿ ಜಯಸಾಧಿಸುವುದು ನಿಶ್ಚಿತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ 10 ಕ್ಷೇತ್ರಗಳಲ್ಲಿ ಜಯಸಾಧಿಸುವುದು ನಿಶ್ಚಿತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

Add Asianetnews Kannada as a Preferred SourcegooglePreferred

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳಗೆರೆಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್‌ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ ಜನತಾ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇ 15ಕ್ಕೆ ಎಲೆಕ್ಷನ್‌ ನಡೆಯಲಿದ್ದು 20ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಗೌರಿಶಂಕರ್‌ ಸಚಿವರಾಗುತ್ತಾರೆ ಎಂದ ಅವರು ನನ್ನ ಮಾತು ಸುಳ್ಳಾಗುವುದಿಲ್ಲ ಎಂದರು.

ಕುಮಾರಣ್ಣನ ಜನಪರ ಆಡಳಿತದಿಂದ ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಅಧಿಕಾರ ಖಚಿತ!

ಮಾಜಿ ಸಚಿವ ಚೆನ್ನಿಗಪ್ಪನ ಹಾದಿಯಲ್ಲಿ ಗೌರಿಶಂಕರ್‌ ಸಾಗುತ್ತಿದ್ದಾರೆ. ಇದಕ್ಕೆ ಇಲ್ಲಿ ಬಂದಿರುವ ಜನರೇ ಕಾರಣ. ಸಿದ್ಧಗಂಗಾ ಮಠದಲ್ಲಿ ಹೇಗೆ ಅನ್ನ ದಾಸೋಹ ನಡೆಯುತ್ತೋ ಅದೇ ರೀತಿ

ಗೌರಿಶಂಕರ್‌ ಮನೆಯಲ್ಲಿ ಅನ್ನದಾಸೋಹ ನಡೆಯುತ್ತದೆ. ಬಿಜೆಪಿ ಉಳಿಯಲ್ಲ. ಈಗಾಗಲೇ ಯಡಿಯೂರಪ್ಪ ಒಂದು ಕಡೆ, ಬೊಮ್ಮಾಯಿ ಒಂದು ಕಡೆ ಆಗಿದ್ದಾರೆ. ಇಲ್ಲಿಗೆ ಮೊನ್ನೆ ಸುರೇಶ್‌ ಗೌಡ, ಸದಾನಂದ ಗೌಡರನ್ನು ಕರೆಸಿದ್ದರು. ಸದಾನಂದಗೌಡರದ್ದು ಸಿಡಿ ಇದೆ. ಕೋರ್ಚ್‌ನಲ್ಲಿ ಸ್ಟೇ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕ ಗೌರಿಶಂಕರ್‌ ಸಂಸ್ಕಾರವಂತ ಯುವಕ, ಕೋವಿಡ್‌ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಶಾಸಕ ಮಾಡಿರದಂತಹ ಜನೋಪಯೋಗಿ ಕೆಲಸವನ್ನು ಮಾಡಿ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೌರಿಶಂಕರ್‌ ಗೆಲುವು ಕ್ಷೇತ್ರದ ಜನರ ಗೆಲುವು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಇಂದು ನಡೆದ ಸಮಾವೇಶ ಇತಿಹಾಸ ನಿರ್ಮಾಣ ಮಾಡಿದ್ದು, ಶಾಸಕ ಡಿ.ಸಿ.ಗೌರಿಶಂಕರ್‌ರ ಮೇಲಿನ ಪ್ರೀತಿ ವಿಶ್ವಾಸದ ಪ್ರತೀಕವಾಗಿ ಕ್ಷೇತ್ರದ ಮೂಲೆಮೂಲೆಯಿಂದ ಹಿರಿಯ ನಾಗರಿಕರು ಮಹಿಳೆಯರು ಹಾಗೂ ಯುವಕರು ಆಗಮಿಸಿದ್ದಾರೆ. ಮಾಜಿ ಶಾಸಕ ಬಿ. ಸುರೇಶ್‌ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕಳೆದ ಲೋಕಸಭಾ ಚುನಾವಣೆಯ ವೇಳೆ ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಡಿ.ಸಿ.ಗೌರಿಶಂಕರ್‌ ಮಾತನಾಡಿ, ತಾವು ಕ್ಷೇತ್ರದ ಶಾಸಕನಾಗಿ ಎಂದೂ ಸಹ ಕೆಲಸ ಮಾಡಿಲ್ಲ, ಬದಲಾಗಿ ಕ್ಷೇತ್ರದ ಪ್ರತಿಯೊಂದು ಮನೆಯ ಮಗನಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಅವಧಿಯಲ್ಲಿ ಹಲವಾರು ಕಾಮಗಾರಿ ಕೈಗೊಂಡಿದ್ದಾಗಿ ತಿಳಿಸಿದರು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ವೃಷಾಭಾವತಿ ನೀರನ್ನು ತಾಲೂಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಆಶೀರ್ವದಿಸಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಆಂಜಿನಪ್ಪ, ರಾಜ್ಯ ವಕ್ತಾರ ಹಾಲನೂರು ಲೇಪಾಕ್ಷ, ಡಿ.ಸಿ.ವೇಣುಗೋಪಾಲ್‌, ಜಿ.ಫಾಲನೇತ್ರಯ್ಯ, ಎನ್‌.ಆರ್‌.ಹರೀಶ್‌, ಹಿರೇಹಳ್ಳಿ ಮಹೇಶ್‌, ಹಾಲನೂರು ಅನಂತ್‌ ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯದ ರೈತರ, ಸಾಮಾನ್ಯ ಜನರ ಅಭ್ಯುದಯಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿ ಈಗಾಗಲೇ 85ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಆಶೀರ್ವಾದ ಮಾಡುವುದರ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಶಾಸಕ ಗೌರಿಶಂಕರ್‌ ಕಂದಾಯ ಮಂತ್ರಿಗಳಾಗುತ್ತಾರೆ.

ನಿಖಿಲ್‌ ಕುಮಾರಸ್ವಾಮಿ ರಾಜ್ಯ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ