ಸೂಟ್ ಕೇಸ್ ರಾಜಕಾರಣ ನಡೆಯುತ್ತಿದೆ : ರೇವಣ್ಣ ಭಾರೀ ಅಸಮಾಧಾನ
ಇಲ್ಲಿ ಸೂಟ್ ಕೇಸ್ ರಾಜಕಾರಣ ನಡೆಯುತ್ತಿರುವುದು ಸತ್ಯ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದು ವಾಗ್ದಾಳಿ ನಡೆಸಿದ್ದಾರೆ.
ಬೇಲೂರು (ಏ.09): ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ಜನರ ಹಿತದೃಷ್ಟಿಮರೆತಿದೆ, ಅಭಿವೃದ್ಧಿ ಮರೀಚಿಕೆಯಾಗಿದೆ. ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಸೂಟ್ಕೇಸ್ ರಾಜಕಾರಣದಿಂದ ಜನರು ಬೇಸತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮುಂದೆ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಹೊರವಲಯದ ಆರ್.ವಿ. ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಪ್ರತಿ ಕಾಮಗಾರಿಗಳ ಹಂಚಿಕೆ ವಿಚಾರದಲ್ಲಿ ಬಿಲ್ ಮಾಡುವಾಗ ಕಮಿಷನ್ ಏಜೆಂಟ್ರಂತೆ ಕೆಲಸ ಮಾಡುತ್ತಿದೆ ಎಂದರು.
'2023ಕ್ಕೆ 2 ಪಕ್ಷಗಳ ರಾಜಕೀಯ ನಾಟಕಕ್ಕೆ ತೆರೆ : ಜೆಡಿಎಸ್ಗೆ ಅಧಿಕಾರ' .
ರಣಘಟ್ಟಯೋಜನೆ ಈ ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಮಾಡಿದ್ದು, ಬಿಜೆಪಿ ಸರ್ಕಾರದ ಸಾಧನೆ ಏನು ಎಂದ ಅವರು ಈ ಜಿಲ್ಲೆಗೆ ಕೊಟ್ಟಸಾಧನೆ ಏನು ಎಂದು ಉತ್ತರ ನೀಡಲಿ ಎಂದು ಸವಾಲು ಹಾಕಿದರು.ಚನ್ನಪಟ್ಟಣ ಕೆರೆ ಅಂಗಳದ ಉದ್ದೇಶಿತ ವಿಹಾರಧಾಮ, ಉದ್ಯಾನವನ ಮುಂತಾದ ಕಾಮಗಾರಿಯ 144 ಕೋಟಿ ಯೋಜನೆಗೆ 2019ಲ್ಲಿ ತಾತ್ವಿಕ ಅನುಮೋದನೆ ದೊರಕಿದ್ದರೂ, ಹಾಸನ ಕ್ಷೇತ್ರದ ಶಾಸಕರ ರಾಜಕೀಯ ದ್ವೇಷದಿಂದ 35 ಕೋಟಿಗೆ ಸೀಮಿತಗೊಳಿಸಲಾಗಿದೆ. ಇಂತಹ ರಾಜಕೀಯ ದ್ವೇಷ ಹೆಚ್ಚಿನ ದಿನ ನಡೆಯುವುದಿಲ್ಲ ಎಂದರು.
ಅಭಿವೃದ್ಧಿ ದೃಷ್ಟಿಯಿಂದ 144 ಕೋಟಿ ವಿವರವಾದ ಯೋಜನಾ ಅಂದಾಜಿಗೆ ತಾತ್ವಿಕ ಅನುಮೋದನೆ ನೀಡಿ, ಆಡಳಿತಾತ್ಮಕ ಅನುಮೋದನೆ ದೊರೆತಿದ್ದ ಹಿನ್ನೆಲೆಯಲ್ಲಿ ಯೋಜನಾ ವರದಿ ತಯಾರಿಸಲು ಜೈಪುರದ ಖಾಸಗಿ ಸಂಸ್ಥೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡಿದೆ ಎಂದು ಆರೋಪಿಸಿದರು.