ಮಂಡ್ಯದಲ್ಲೊಂದು ಚುನಾವಣೆಗೆ ಜೆಡಿಎಸ್ ತಯಾರಿ : ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕು
ರಾಜ್ಯದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ಚುನಾವಣೆಗಳಿಗೆ ಸಿದ್ಧತೆಗಳು ನಡೆಯುತ್ತಿದ್ದು, ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೊಂದು ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.
ಭಾರತೀನಗರ (ಸೆ.08): ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರುಕಟ್ಟೆಸಂಘ (ಟಿಎಪಿಸಿಎಂಎಸ್)ದ ಚುನಾವಣೆ ಸೆ.30 ರಂದು ನಡೆಯಲಿದೆ. ಮುಖಂಡರು ಹಾಗೂ ಕಾರ್ಯಕರ್ತತರೇ ಒಕ್ಕೊರಲಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು.
ಕೆ.ಎಂ.ದೊಡ್ಡಿಯ ತಮ್ಮ ನಿವಾಸದಲ್ಲಿ ಮದ್ದೂರು ತಾಲೂಕಿನ ಎಲ್ಲಾ ಹೋಬಳಿಯ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ನೀವೇ ಖುದ್ದಾಗಿ ಎಲ್ಲರೂ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದರು.
ಸಿಎಂ ಬಿಎಸ್ವೈ ಮತ್ತೊಂದು ಲಂಚ್ ಮೀಟಿಂಗ್: ಈ ಬಾರಿ ಕಾಂಗ್ರೆಸ್ ಶಾಸಕರು ಭಾಗಿ..!
ಈ ಹಿಂದೆ ಆಯ್ಕೆ ಮಾಡಿದ ಅಭ್ಯರ್ಥಿಗಳು ಪಕ್ಷದಿಂದ ಗೆದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ಬರಲಿದೆ. ಎಲ್ಲರಿಗೂ ಅವಕಾಶ ಸಿಗಲಿದೆ. ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಗಟ್ಟಿಯಾಗಿದೆ. ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭಗಳು. ಆದ್ದರಿಂದ ಪಕ್ಷ ನಿಷ್ಠರನ್ನು ಒಮ್ಮತದಿಂದ ಆಯ್ಕೆ ಮಾಡಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಹಾಗೂ ಗೊಂದಲಗಳಿಗೆ ಕಿವಿಗೊಡಬೇಡಿ. ಏನೇ ಇದ್ದರೂ ನೇರವಾಗಿ ನಮ್ಮನ್ನು ಸಂಪರ್ಕಿಸುವ ಮೂಲಕ ವಾಸ್ತವ ತಿಳಿದುಕೊಳ್ಳಿ. ಸುಖಾಸುಮ್ಮನೆ ಗೊಂದಲಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಸಾಕಷ್ಟುಕಾರ್ಯಕರ್ತರು ಪಕ್ಷಕ್ಕಾಗಿ ದುಡಿದವರು ಹೆಚ್ಚು ಕಾರ್ಯಕರ್ತರಿದ್ದಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಒಗ್ಗಟ್ಟಿದ್ದರೆ ಪಕ್ಷಕ್ಕೆ ಬಲಬರುತ್ತದೆ. ಆ ನಿಟ್ಟಿನಲ್ಲಿ ಶಾಸಕರು ಅಭ್ಯರ್ಥಿಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದಾರೆ ಎಂದರು.
ಬಿಹಾರ ಜತೆ ರಾಜ್ಯದ ಎರಡು ಕ್ಷೇತ್ರಗಳಿಗೂ ಚುನಾವಣೆ .
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಮದ್ದೂರು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಮರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಕೆಸ್ತೂರು ದಾಸೇಗೌಡ, ನಗರಕೆರೆ ರಾಮಲಿಂಗಯ್ಯ, ನ.ಲಿ.ಕೃಷ್ಣ, ಎಚ್.ಎಂ.ಮರಿಮಾದೇಗೌಡ, ದೇವರನಹಳ್ಳಿ ವೆಂಕಟೇಶ್, ಕ್ಯಾತಘಟ್ಟದ ತಿಮ್ಮರಾಜು, ಸಬ್ಬನಹಳ್ಳಿ ಹೊನ್ನೇಗೌಡ, ಕೆ.ಟಿ.ಶೇಖರ್ ಸೇರಿದಂತೆ ಹಲವರು ಇದ್ದರು.