Mandya Politics: ದಳಪತಿಗಳ ಘರ್ಜನೆ! ಥಂಡಾ ಹೊಡೆದ ಸಂಸದೆ ಸುಮಲತಾ
- ಮಂಡ್ಯದಲ್ಲಿ ದಳಪತಿಗಳ ಘರ್ಜನೆ! ಥಂಡಾ ಹೊಡೆದ ಸಂಸದೆ ಸುಮಲತಾ
- ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
- ಶಾಸಕರ ಮಾತಿನ ಅಬ್ಬರಕ್ಕೆ ಥಂಡಾ ಹೊಡೆದ ಸಂಸದೆ
ಮಂಡ್ಯ (ಡಿ.28): ದಿಶಾ ಸಭೆಯಲ್ಲಿ (Disha Meeting) ಘರ್ಜಿಸಿದ ದಳಪತಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ, ಶಾಸಕರ (MLA) ಮಾತಿನ ಅಬ್ಬರಕ್ಕೆ ಬೆದರಿದ ಸಂಸದೆ, ಸಭೆಯ ಆರಂಭದಲ್ಲೇ ಅಪಸ್ವರ, ಶಾಸಕರು, ದಿಶಾ ಸದಸ್ಯರ ನಡುವೆ ಮಾತಿನ ಚಕಮಕಿ. ಇವು ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡುಬಂದ ಪ್ರಮುಖ ದೃಶ್ಯಾವಳಿಗಳು.
ಬೆಂಗಳೂರು-ಮೈಸೂರು (Bengaluru - Mysuru) ಹೆದ್ದಾರಿ ಕಾಮಗಾರಿ ಮಾಡುವುದಕ್ಕೆ ಜಿಲ್ಲೆಯ ರಸ್ತೆಗಳನ್ನು ಹಾಳು ಮಾಡಿರುವ ಕುರಿತಂತೆ ಶಾಸಕರಾದ ಸಿ.ಎಸ್.ಪುಟ್ಟರಾಜು (Puttaraju), ಕೆ.ಸುರೇಶ್ ಗೌಡ (Suresh Gowda) ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಿಮ್ಮನ್ನು ಹೇಳೋರು-ಕೇಳೋರು ಇಲ್ವಾ!: ಹೊಳಲು ಸರ್ಕಲ್ನಿಂದ ಕೆಆರ್ಎಸ್ ವರೆಗಿನ ರಸ್ತೆ (Road) ನಿರ್ಮಾಣವಾಗಿ ಎರಡು ವರ್ಷ ಕಳೆದಿಲ್ಲ. ನಿಮ್ಮ ವಾಹನಗಳ (Vehicle) ಓಡಾಟದಿಂದ ದುದ್ದ, ಚಿನಕುರಳಿ, ಕಸಬಾ ಹೋಬಳಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದಕ್ಕೆಲ್ಲಾ ಯಾರು ಹೊಣೆ. ಆ ರಸ್ತೆಗಳನ್ನು ಯಾವಾಗ ರಿಪೇರಿ ಮಾಡಿಕೊಡುತ್ತೀರಿ. ರಸ್ತೆಗಳಲ್ಲಿ ಜನರು, ವಾಹನಗಳು ಓಡಾಡುವುದಕ್ಕೆ ಆಗುತ್ತಿಲ್ಲ. ಓವರ್ಲೋಡ್ ತುಂಬಿಕೊಂಡು ಓಡಾಡುತ್ತೀರಲ್ಲ. ನಿಮ್ಮನ್ನು ಹೇಳೋರು ಕೇಳೋರು ಯಾರು ಇಲ್ಲ ಅಂತ ತಿಳ್ಕೊಂಡಿದ್ದೀರಾ ಎಂದು ಶಾಸಕ ಸಿ.ಎಸ್.ಪುಟ್ಟರಾಜು (Puttaraju) ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾಳಾಗಿರುವ ರಸ್ತೆಗಳಲ್ಲಿ ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣ ರಸ್ತೆ ಹಾಳಾಗಿದ್ದರೆ ಹೊಸದಾಗಿ ನಿರ್ಮಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದಾಗ, ಮತ್ತೆ ಉದ್ವೇಗಗೊಂಡ ಪುಟ್ಟರಾಜು, ಎಲ್ರೀ ಕೆಲಸ ಮಾಡ್ತಿದ್ದೀರಿ. ದುದ್ದ ಹೋಬಳಿ, ಚಿನಕುರಳಿ ಹೋಬಳಿಯಲ್ಲಿ ಸಮೀಕ್ಷೆ ನಡೆಸಿ ಎರಡು ತಿಂಗಳಾಗಿದೆ. ಇನ್ನೂ ರಸ್ತೆ ದುರಸ್ತಿ ಮಾಡಿಲ್ಲ. ಸಭೆಗೆ ಸುಳ್ಳು ಹೇಳಬೇಡಿ ಎಂದು ತರಾಟೆ ತೆಗೆದುಕೊಂಡರು.
ಯಾವಾಗ ರಿಪೇರಿ ಮಾಡಿಕೊಡುವಿರಿ?: ಅಧಿಕಾರಿಗಳ ಮಾತಿನಿಂದ ತೃಪ್ತರಾಗದ ಸಂಸದೆ ಸುಮಲತಾ (Sumalatha), ಹೆದ್ದಾರಿ ಕಾಮಗಾರಿಗೆ ಜಲ್ಲಿ, ಎಂ-ಸ್ಯಾಂಡ್ ಪೂರೈಕೆ ವೇಳೆ ರಸ್ತೆಗಳು ಹಾಳಾಗಿರುವ ಬಗ್ಗೆ ಬಹಳಷ್ಟುದೂರುಗಳು ಕೇಳಿಬಂದಿವೆ. ಈ ರಸ್ತೆಗಳನ್ನೆಲ್ಲಾ ಯಾವಾಗ ರಿಪೇರಿ ಮಾಡಿಕೊಡುವಿರಿ ಎಂದಾಗ, ಒಂದು ತಿಂಗಳೊಳಗೆ ರಿಪೇರಿ ಮಾಡಿಕೊಡುವುದಾಗಿ ಅಧಿಕಾರಿ ಹೇಳಿದಾಗ, ಹಿಂದಿನ ದಿಶಾ (Disha) ಮೀಟಿಂಗ್ನಲ್ಲೂ ಇದೇ ಮಾತನ್ನು ಹೇಳಿದ್ದಿರಿ. ಎರಡು ತಿಂಗಳಾದರೂ ರಸ್ತೆಗಳು ದುರಸ್ತಿಗೊಂಡಿಲ್ಲ. ಈಗ ಇನ್ನೊಂದು ತಿಂಗಳೊಳಗೆ ಸರಿಮಾಡಿಬಿಡ್ತೀರಾ. ಇದನ್ನು ನಂಬುವುದಕ್ಕಾಗುವುದೇ. ಕೆಲಸ ಮುಗಿದ ಮೇಲೆ ನಿಮ್ಮನ್ನು ಹುಡುವುದಕ್ಕೆ ಆಗುವುದೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಒಂದು ತಿಂಗಳೊಳಗೆ ಮುಗಿಸಿಕೊಡುತ್ತೇವೆ. ರಸ್ತೆ ನಿರ್ವಹಣೆಗಾಗಿ ಕಾಮಗಾರಿ ಮುಗಿದ ಬಳಿಕವೂ ಇಲ್ಲೇ ಇರುತ್ತೇವೆ ಎಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಪರವಾಗಿ ಸಭೆಗೆ ಆಗಮಿಸಿದ್ದ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ದೂರು ದಾಖಲಿಸಿ: ಹೆದ್ದಾರಿ ಕಾಮಗಾರಿ ನೆಪದಲ್ಲಿ ಲೋಕೋಪಯೋಗಿ ವ್ಯಾಪ್ತಿಯ ರಸ್ತೆಗಳನ್ನು ಹಾಳು ಮಾಡುತ್ತಿದ್ದರೆ, ನೀವೇನು ಮಾಡುತ್ತಿದ್ದೀರಿ ಎಂದು ಲೋಕೋಪಯೋಗಿ ಇಂಜಿನಿಯರ್ಗಳನ್ನು ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡರು.
ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವೇ ಅವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಬೇಕು. ಅದು ಬಿಟ್ಟು ನೀವು ಏನು ಮಾಡುತ್ತಿದ್ದೀರಿ ಎಂದಾಗ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ನಾವು ಎರಡು ತಿಂಗಳ ಹಿಂದೆಯೇ ರಸ್ತೆಗಳ ದುರಸ್ತಿ ಬಗ್ಗೆ ತಿಳಿಸಿದ್ದೇವೆ. ಈ ರಸ್ತೆಯಲ್ಲಿ ನಮ್ಮ ವಾಹನಗಳು ಓಡಾಡಿಲ್ಲ ಎಂದು ಸಬೂಬು ಹೇಳಿದ್ದರು. ಆದರೆ ಗ್ರಾಮಸ್ಥರೇ ಅವರ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ತೆರಳಿ ವೀಡಿಯೋ ಮಾಡಿಕೊಂಡು ಅವರಿಗೆ ತಲುಪಿಸಿದ್ದೇವೆ ಎಂದು ತಿಳಿಸಿದರು. ಆದರೂ ಇನ್ನೂ ದುರಸ್ತಿ ಮಾಡಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಆರಂಭದಲ್ಲೇ ಸಭೆಯಲ್ಲಿ ಗದ್ದಲ:
ದಿಶಾ ಸಭೆಗೆ ಸಮಯಕ್ಕೆ ಸರಿಯಾಗಿ ನಡೆಯದಿದ್ದಕ್ಕೆ ಶಾಸಕ ಕೆ.ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಈಗಾಗಲೇ 2 ಗಂಟೆ ತಡವಾಗಿ ಆರಂಭವಾಗಿದೆ. ಸಂಸದರ ಸಭೆಗೆ ನಾವು 2 ಗಂಟೆಗೆ ಬಂದಿದ್ದೆವು. ಜನಪ್ರತಿನಿಧಿಗಳ ಬಗ್ಗೆ ನಿಮಗೆ ಗೌರವ, ಬೆಲೆ ಇಲ್ಲ. ಒಂದು ತೊಟ್ಟು ನೀರು ಕೊಡುವುದಕ್ಕೂ ಯಾರೂ ಇಲ್ಲಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯನ್ನು ಅಜೆಂಡಾದಂತೆ ಸಂಪೂರ್ಣ ಮಾಡುವುದಿದ್ದರೆ ಮಾತ್ರ ಸಭೆ ನಡೆಸಿ. ಮಧ್ಯದಲ್ಲೇ ಬರಖಾಸ್ತು ಮಾಡುವುದಾದರೆ ಸಭೆಯನ್ನು ಮುಂದೂಡಿ ಎಂದು ಸಂಸದೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು.
ಈ ವೇಳೆ ಮಧ್ಯ ಪ್ರವೇಶ ಮಾಡಿದ ದಿಶಾ ಸಮಿತಿ ಸದಸ್ಯ ಬೇಲೂರು ಸೋಮಶೇಖರ್, ಹಿಂದಿನ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ಮಾಡಿದಿರಾ ಎಂದು ಪ್ರಶ್ನಿಸಿದಾಗ, ಶಾಸಕರಾದ ಕೆ.ಸುರೇಶ್ಗೌಡ ಹಾಗೂ ಡಾ.ಕೆ.ಅನ್ನದಾನಿ ದಿಶಾ ಸಮಿತಿ ಸದಸ್ಯನ ನಡುವೆ ಮಾತಿನ ಚಕಮಕಿ ನಡೆಯಿತು. ಏರು ದನಿಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರು.
ಸಭೆಗೆ ಅಜೆಂಡಾ ಕೂಡ ಕೊಟ್ಟಿಲ್ಲ: ಆನಂತರ ಸಭೆಯ ಅಜೆಂಡಾ ಕೊಡುವಂತೆ ಶಾಸಕರು (MLA) ಪಟ್ಟು ಹಿಡಿದರು. ಅಜೆಂಡಾ ಬದಲು ಪೋ›ಗ್ರೆಸ್ ರಿಪೋರ್ಟ್ ಕೊಟ್ಟಿದ್ದೀರಿ. ಇದನ್ನ ಅಜೆಂಡಾ ಅಂತಾ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದಾಗ, ಶಾಸಕರು ಸದನದಲ್ಲಿದ್ದ ಕಾರಣ ಪಿಎಗಳಿಗೆ ಅಜೆಂಡಾ ಕೊಟ್ಟಿದ್ದೇವೆ ಎಂದು ಸಿಇಒ ಹೇಳಿದರು. ಯಾರು ಯಾರಿಗೆ ಅಜೆಂಡಾ ಕೊಟ್ಟಿದ್ದೀರಿ, ಯಾರು ರಿಸೀವ್ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸ್ವೀಕೃತಿ ಮಾಹಿತಿ ಕೊಡಿ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಕೇಳಿದರು.
ನಾವು ತಾಪಂ ಇಒ ಮೂಲಕ ಎಲ್ಲರಿಗೂ ತಲುಪಿಸಿದ್ದೇವೆ ಎಂದಾಗ, ಮತ್ತೆ ಶಾಸಕ ಸಿ.ಎಸ್.ಪುಟ್ಟರಾಜು, ದಿಶಾ ಸಭೆ ನಡೆಯುವುದಕ್ಕೆ 7 ದಿನಗಳ ಮುಂಚೆ ಅಜೆಂಡಾ ಕಾಪಿಯನ್ನು ಕಳುಹಿಸಬೇಕಲ್ಲವೇ. ನಾವು ಸದನದಲ್ಲಿದ್ದೆವು. ನಿನ್ನೆ-ಮೊನ್ನೆ ಬಂದಿದ್ದೇವೆ. ನಾವು ಒಂದು ದಿನಕ್ಕೆ ಓದಿಕೊಂಡು ಬರಲು ಸಾಧ್ಯವೇ. ಇಲಾಖೆಗಳಿಂದ ಮಾಹಿತಿಯನ್ನು ದಿಶಾ ಸಭೆ ಕರೆಯುವ 15 ದಿನಗಳ ಮುಂಚೆ ತರಿಸಿಕೊಳ್ಳುವಂತೆ ಸಿಇಒ ಅವರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇದ್ದರು.