ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ - ಶಾಸಕ ಶ್ರೀನಿವಾಸ್ ನನ್ನನ್ನು ಮಂತ್ರಿ ಮಾಡಿ ಬಳಿಕ ಹೇಗೆ ನಡೆಸಿಕೊಂಡರು ಅನ್ನೋದು ಗೊತ್ತಿದೆ 

ತುಮಕೂರು (ಅ.27): ಕುಮಾರಸ್ವಾಮಿ (HD Kumaraswamy) ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಬಳಿಕ ಹೇಗೆ ನಡೆಸಿಕೊಂಡರು ಅನ್ನೋದು ಗೊತ್ತಿದೆ ಎಂದು ಗುಬ್ಬಿ (Gubbi) ಜೆಡಿಎಸ್‌ (JDS) ಶಾಸಕ ಎಸ್‌.ಆರ್‌.ಶ್ರೀನಿವಾಸ್‌ (SR shrinivas) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

 ಶ್ರೀನಿವಾಸರನ್ನು ಮಂತ್ರಿ ಮಾಡಿ ತಪ್ಪು ಮಾಡಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ನನ್ನನ್ನೇನೂ ಸುಮ್ಮನೆ ಮಂತ್ರಿ ಮಾಡಿಲ್ಲ. ನಾನು 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. 

ಜೆಡಿಎಸ್ ಶಾಸಕಗೆ HDK ಟಾಂಗ್ : ಪಕ್ಷ ಸೇರುತ್ತಿದ್ದಾರೆ ಮತ್ತೋರ್ವ ಮುಖಂಡ

ಕುಂಚಿಟಿಗರ ಕೋಟಾದಿಂದ ಶಿರಾದ (shira) ಅಂದಿನ ಶಾಸಕ ಸತ್ಯನಾರಾಯಣರನ್ನು (Sathyanarayana) ಮಾಡಬೇಕು ಅಂತ ದೇವೇಗೌಡರು ಹೇಳಿದ್ದರು. ಆದರೆ ಕುಮಾರಸ್ವಾಮಿಯವರೇ ಪ್ರಮಾಣವಚನದ ದಿನ ಕರೆಸಿಕೊಂಡು ಮಂತ್ರಿ ಮಾಡಿದರು. 

ಹಿಂದೆ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಶಿವನಂಜಪ್ಪನವರಿಗೆ ದೇವೇಗೌಡರು (HD Devegowda) ಜೆಡಿಎಸ್‌ ಟಿಕೆಟ್‌ ಕೊಟ್ಟರು. ಆದರೆ ಕುಮಾರಸ್ವಾಮಿ ನನ್ನನ್ನೂ ಪಕ್ಷೇತರನಾಗಿ ಸ್ಪರ್ಧಿಸುವಂತೆ ಹೇಳಿದರು. ಆಗ ನಾನು ಗೆದ್ದೆ. ಶಿವನಂಜಪ್ಪನವರ ಕತ್ತು ಕುಯ್ಯುವ ಕೆಲಸ ಮಾಡಿದ್ದು ನಾನಾ, ಇವರಾ ಎಂದು ಪ್ರಶ್ನಿಸಿದರು.

ಗೌಡರ ಸೋಲಿಗೆ ಇವರೇ ಕಾರಣ

ಲೋಕಸಭಾ ಚುನಾವಣೆಯಲ್ಲಿ (loksabha election) ದೇವೇಗೌಡರ (HD Devegowda) ಸೋಲಿಗೆ ಸ್ವಪಕ್ಷದ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ (Sr shrinivas) ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹರಿಹಾಯ್ದಿದ್ದಾರೆ.

ಗುಬ್ಬಿಯಲ್ಲಿ ತಾಪಂ. ಜಿಪಂ. ಮಾಜಿ ಸದಸ್ಯರ ಜೆಡಿಎಸ್‌ (JDS) ಸೇರ್ಪಡೆ ವೇಳೆ ಮಾತನಾಡಿದ ಎಚ್‌ಡಿಕೆ, ಗುಬ್ಬಿ (Gubbi) ಶಾಸಕರು 2 ವರ್ಷದಿಂದ ಸಂಪರ್ಕದಲ್ಲಿಲ್ಲ, ಶಿರಾ ಉಪಚುನಾವಣೆಗೆ (By Election) ಬಂದಿಲ್ಲ, ತುಮಕೂರಲ್ಲಿ (Tumakur) ದೇವೇಗೌಡರನ್ನು ಸೋಲಿಸಲು ಅವರೇ ಚಿತಾವಣೆ ಮಾಡಿದ್ದರು ಎಂದು ಕಿಡಿಕಾರಿದರು.

ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ (SR Shrinivas) ಕಳೆದ 2 ವರ್ಷಗಳಿಂದ ನನ್ನ ಸಂಪರ್ಕದಲ್ಲಿಲ್ಲ, ಅವರು ಕಾಂಗ್ರೆಸ್‌ (Congress) ನಾಯಕರ ಸಂಪರ್ಕದಲ್ಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ (Tumakur) ಸ್ಪರ್ಧಿಸಿದ ದೇವೇಗೌಡರ ಸೋಲಿಗೆ ಅವರೇ ಪ್ರಮುಖ ಕಾರಣ, ದೇವೇಗೌಡರ ಅವರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆಯ ಅವರು ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ. ಆದರೆ ನಮ್ಮನ್ನು ದೂರುವುದು ಮಾತ್ರ ಬೇಡ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಜೆಡಿಎಸ್ ಒಂದು ಕಂಪನಿ

ಜೆಡಿಎಸ್‌ (JDS) ಪಕ್ಷವೇ ಅಲ್ಲ. ಅದೊಂದು ಕಂಪನಿ ಎಂದು ಚಾಮರಾಜನಗರ (Chamarajanagar) ಸಂಸದ ವಿ. ಶ್ರೀನಿವಾಸಪ್ರಸಾದ್‌ (Shrinivas Prasad) ಕಟುವಾಗಿ ಟೀಕಿಸಿದರು.

 ಸಂಸದ ಶ್ರೀನಿವಾಸ ಪ್ರಸಾದ್ ಎಚ್‌.ಡಿ. ದೇವೇಗೌಡ (HD Devegowda), ಎಚ್‌.ಡಿ. ಕುಮಾರಸ್ವಾಮಿ (HD Kumaraswamy), ಎಚ್‌.ಡಿ. ರೇವಣ್ಣ (HD Revanna), ಅನಿತಾ, ಭವಾನಿ, ಪ್ರಜ್ವಲ್‌, ನಿಖಿಲ್‌- ಹೀಗೆ ಒಂದೇ ಕುಟುಂಬದವರು ಇರುವ ಕಂಪನಿ ಅದು ಎಂದು ಗೇಲಿ ಮಾಡಿದರು.

ದೇಶದ ಹಿರಿಯ ರಾಜಕಾರಣಿಯಾದ ಎಚ್‌.ಡಿ. ದೇವೇಗೌಡರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅತಂತ್ರ ಫಲಿತಾಂಶ ಬಯಸುತ್ತಾರೆ. ಅವರು ಯಾವಾಗ ಆ ರೀತಿಯ ಫಲಿತಾಂಶ ಬರುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡು ಕುಳಿತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.