ಅನರ್ಹರನ್ನು ಮೊದಲು ದಡ ಸೇರಿಸಿ, ಉಳಿದವರನ್ನು ನಂತರ ಕರೆಯಿರಿ : ಸಾ ರಾ ಮಹೇಶ್
ಅನರ್ಹ ಶಾಸಕರನ್ನು ಮೊದಲು ದಡ ಸೇರಿಸಲು, ಉಳಿದವರನ್ನು ನಂತರ ಆಹ್ವಾನಿಸಿ ಎಂದು ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಹೇಳಿದ್ದಾರೆ.
ಮೈಸೂರು [ಸೆ.14]: ಮಾಜಿ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಮತ್ತಷ್ಟು ಶಾಸಕರು ಬಿಜೆಪಿಗೆ ಬಂದರೂ ಸ್ವೀಕರಿಸುತ್ತೇವೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಹೇಳಿಕೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಈಗ ಗಟ್ಟಿಯಾಗಿದೆ. ಆದ್ದರಿಂದ ಬಿಜೆಪಿ ಶಾಸಕರು ಅಲುಗಾಡುತ್ತಿಲ್ಲ. ಆದ್ದರಿಂದ ಅನರ್ಹ, ಅತೃಪ್ತ ಪ್ರೇತಾತ್ಮಗಳನ್ನು ಮೊದಲು ದಡ ಸೇರಿಸಿದ ಬಳಿಕ ಮತ್ತಷ್ಟುಶಾಸಕರನ್ನು ಬರಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಲವು ಆಸೆ, ಆಮಿಷಕ್ಕೆ ಬಲಿಯಾಗಿ, ನಮ್ಮವರ ವರ್ಗಾವಣೆ ಮಾಡಿಕೊಡಲಿಲ್ಲ, ಅಧಿಕಾರ ಸಿಕ್ಕಿಲ್ಲ ಎಂಬ ನೆಪವೊಡ್ಡಿ ಅತೃಪ್ತ ಪ್ರೇತಾತ್ಮಗಳು ರಾಜೀನಾಮೆ ಕೊಟ್ಟಿವೆ. ನಮ್ಮಲ್ಲಾಗಲಿ ಅಥವಾ ಕಾಂಗ್ರೆಸ್ನಲ್ಲಿ ಯಾವ ಐಟಿ, ಇಡಿ ಇಲ್ಲ. ಬಿಜೆಪಿ ಬಳಿ ಇದೆ. ಅದಕ್ಕಾಗಿ ಅವರ ಶಾಸಕರು ಪಕ್ಷಬಿಟ್ಟು ಅಲುಗಾಡುತ್ತಿಲ್ಲ. ಅನರ್ಹ ಶಾಸಕರಿಗೆ ಮಂತ್ರಿಗಿರಿ ಕೊಡಲಿ ಮೊದಲು. ಬಿಜೆಪಿಯಲ್ಲೂ ನಾಲ್ಕು, ಐದು ಬಾರಿ ಗೆದ್ದ ಶಾಸಕರು ಇಲ್ಲವೇ ಅವರಿಗೂ ಸ್ಥಾನಮಾನ ಸಿಗೋದು ಬೇಡವೇ? ಎಂದರು.