ನನ್ನ ಸೋಲಿನ ಹಿಂದೆ ಅವರ ಕುತಂತ್ರವಿದೆ : ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ನೀಡಿದ್ದು, ಈ ವೇಳೆ ತಮ್ಮ ಚುನಾವಣಾ ಸೊಲಿನ ಬಗ್ಗೆ ಮಾತನಾಡಿದ್ದಾರೆ.
ಮಂಡ್ಯ (ಜ.23): ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಬಗ್ಗೆ ವಿಮರ್ಶೆ ಮಾಡುವುದು ಬೇಡ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯ ಯುವ ಘಟಕದ ಜವಾಬ್ದಾರಿ ವಹಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಾದ ಹೊಣೆಗಾರಿಕೆ ನನ್ನ ಮೇಲಿದ್ದು, ತಾವೆಲ್ಲರೂ ನನಗೆ ಶಕ್ತಿ ತುಂಬಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
"
ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಜೆಡಿಎಸ್ ಘಟಕದಿಂದ ಆಯೋಜಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರ 33ನೇ ಹುಟ್ಟುಹಬ್ಬದ ಸಮಾರಂಭ ಹಾಗೂ 33 ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿ, 2014 ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪುಟ್ಟರಾಜು ಅವರು 5.25 ಲಕ್ಷ ಮತಗಳಿಂದ ಜಯ ಗಳಿಸಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ ನಾನು 5.75 ಲಕ್ಷ ಮತಗಳನ್ನು ಪಡೆದು ಸೋತಿದ್ದೇನೆ. ತಾಂತ್ರಿಕವಾಗಿ ನಾನು ಸೋತಿದ್ದರೂ ಅದರ ಹಿಂದೆ ಕೆಲ ಪಕ್ಷಗಳ ಕುತಂತ್ರವೂ ಸೇರಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ಮಾಡುವುದು ಬೇಡ. ಮುಂದೆ ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆ ಇದೆ ಎಂದರು.
ಬರ್ತ್ ಡೇ ಬಾಯ್ ನಿಖಿಲ್ ಕುಮಾರಸ್ವಾಮಿಗೆ ಇವರೇ ದೊಡ್ಡ ಗಿಫ್ಟ್ ಅಂತೆ...! .
ರೈತ ಮತ್ತು ಜನಪರ ನಿಲುವನ್ನು ಹೊಂದಿರುವ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಕುಟುಂಬದಿಂದ ಬಂದಿರುವ ನನಗೆ ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯ ಜಿಲ್ಲೆಯ ಜನರು ಅತೀವ ಪ್ರೀತಿ- ವಿಶ್ವಾಸವನ್ನು ತೋರಿಸುತ್ತಿದ್ದಾರೆ. ಇದಕ್ಕೆ ಎಂದಿಗೂ ನಾನು ಚಿರಋುಣಿಯಾಗಿದ್ದೇನೆ. ಜಿಲ್ಲೆಯ ರೈತರು ಹಾಗೂ ಜನರ ಹಿತ ಕಾಪಾಡಲು ನಾನು ಸದಾ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಎಂತಹ ಸಮಯದಲ್ಲೂ ಸ್ಪಂದಿಸಲು ಸಿದ್ಧನಿದ್ದೇನೆ. ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮೃತ ರೈತರ ಕುಟುಂಬಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನೆರವಾಗಿದ್ದರು. ಅವರ ಮಾರ್ಗದರ್ಶನದಲ್ಲೇ ನಾನು ಮುನ್ನಡೆಯುತ್ತೇನೆ ಎಂದು ಭರವಸೆ ನೀಡಿದರು.
ಶಾಸಕರಾದ ಸಿ.ಎಸ್. ಪುಟ್ಟರಾಜು ಹಾಗೂ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ನನ್ನ ಹಿತವನ್ನು ಬಯಸಿ ಹಲವು ಸಲಹೆ- ಸೂಚನೆ ನೀಡುತ್ತಿರುತ್ತಾರೆ. ಪುಟ್ಟರಾಜು ಅವರು ನಿನ್ನಲ್ಲಿ ನಾಯಕತ್ವದ ಗುಣವಿದೆ. ಜನರೊಟ್ಟಿಗೆ ನೀನು ಬೆರೆಯಬೇಕು. ಅವರ ವಿಶ್ವಾಸವನ್ನು ಗಳಿಸಿದಾಗ ಜನಮಾನಸದಲ್ಲಿ ಉಳಿಯುವುದಾಗಿ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರು ರಾಜಕೀಯ ಬೆಳವಣಿಗೆ ಕುರಿತಂತೆ ದೂರವಾಣಿ ಮೂಲಕ ಹಲವು ಸಲಹೆ ಸಹಕಾರವನ್ನು ನೀಡುತ್ತಿರುತ್ತಾರೆ. ಇದೆಲ್ಲದರಿಂದ ನಾನು ಪ್ರಭಾವಿತನಾಗಿದ್ದು, ನನ್ನ ರಾಜಕೀಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ರೈತರು ಆತ್ಮಹತ್ಯೆಗೆ ಶರಣಾಗದೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸ್ವಾಭಿಮಾನದಿಂದ ಬದುಕುವ ನಿರ್ಧಾರ ಮಾಡಿ ಪರಾರಯಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಈ ದೇಶದ ಬೆನ್ನೆಲುಬಾಗಿರುವ ರೈತರು ಆತ್ಮಹತ್ಯೆಗೆ ಶರಣಾದರೆ ದೇಶದ ಅಭಿವೃದ್ಧಿ ಕುಸಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನಿಖಿಲ್ ಅವರಲ್ಲಿ ಉತ್ತಮ ನಾಯಕತ್ವ ಗುಣವಿದೆ. ಸಂಘಟನಾ ಚಾತುರ್ಯವಿದೆ. ದೇವೇಗೌಡರ ಕುಟುಂಬದ ಕುಡಿಯಾಗಿರುವ ನಿಖಿಲ್ ಪಕ್ಷಕ್ಕೆ ಹೊಸ ಶಕ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯುವಕರನ್ನು ಸೆಳೆಯುವ ಚಾತುರ್ಯವಿರುವ ಅವರಿಗೆ ಕಾರ್ಯಕರ್ತರು ಶಕ್ತಿ ತುಂಬುವಂತೆ ಮನವಿ ಮಾಡಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ರಾಜ್ಯದಲ್ಲಿ ಮುಂದೆ ಜಾ.ದಳದ ಒಂದು ದೊಡ್ಡ ಆಶಾಕಿರಣವಾಗಿ ಹೊರಹೊಮ್ಮಲಿದ್ದಾರೆ. ರಾಜ್ಯವನ್ನು ಮುನ್ನಡೆಸುವ ಹೊಣೆಗಾರಿಕೆ ಅವರ ಮೇಲಿದ್ದು, ಎಚ್.ಡಿ. ದೇವೇಗೌಡರ ಛಲ ಮತ್ತು ಶಕ್ತಿ ಹಾಗೂ ಕುಮಾರಸ್ವಾಮಿ ಅವರಂತೆ ಮಾತೃ ಹೃದಯವನ್ನು ಹೊಂದಿದ್ದು, ರಾಜ್ಯದ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಸ್ಯಾಂಡಲ್ವುಡ್ 'ಯುವರಾಜ' ನಿಖಿಲ್ ಕುಮಾರಸ್ವಾಮಿ ಹುಟ್ಟಹಬ್ಬದ ಸಂಭ್ರಮ ಹೀಗಿತ್ತು ...
ಶಾಸಕ ಸುರೇಶ್ಗೌಡ ಮಾತನಾಡಿ, ಕೆಲ ಕುತಂತ್ರಿಗಳ ಕಾರಣದಿಂದ ನೀವು ಸೋತಿರಬಹುದು. ಇಂತಹ ಷಡ್ಯಂತ್ರಗಳಿಗೆ ಕುಗ್ಗದೆ ಜಿಲ್ಲೆ ಮತ್ತು ರಾಜ್ಯವನ್ನು ಮುನ್ನಡೆಸಬೇಕು. ಜಿಲ್ಲೆಯ ಜನತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನಿಖಿಲ್ ಅವರು ಚಲನಚಿತ್ರರಂಗದಲ್ಲಿ ಹೇಗೆ ಜಾಗ್ವಾರ್ ಮತ್ತು ರೈಡರ್ ಆಗಿದ್ದಾರೋ ನಿಜ ಜೀವನದಲ್ಲೂ ಸಹ ಜಾಗ್ವಾರ್ ಮತ್ತು ರೈಡರ್ ಆಗಿ ರಾಜ್ಯವನ್ನು ಮುನ್ನಡೆಸಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಜಿಲ್ಲೆಯ 33 ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್, ಸದಸ್ಯರಾದ ಕಂಸಾಗರ ರವಿ, ಎಚ್.ಎನ್.ಯೋಗೇಶ್, ಬಿ.ಎಲ್. ದೇವರಾಜು, ಮನ್ಮುಲ್ ನಿರ್ದೇಶಕ ಎಚ್.ಎಸ್.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನೆಲ್ಲೀಗೆರೆ ಬಾಲು, ಬೇಲೂರು ಶಶಿಧರ ಸೇರಿದಂತೆ ಇತರರಿದ್ದರು.