ಸಿದ್ದು ಇರುವುದರಿಂದ ಕಾಂಗ್ರೆಸ್ ಉಳಿದಿದೆ: ಎಚ್.ಡಿ.ರೇವಣ್ಣ
* ದೇವೇಗೌಡರನ್ನು ಪಧಾನಿ ಹುದ್ದೆಯಿಂದ ಕೆಳಗಿಳಿಸಿದ ಶಾಪ ಕಾಂಗ್ರೆಸ್ಗೆ ತಟ್ಟುತ್ತೆ
* ಸಿದ್ದರಾಮಯ್ಯ ಇರೋದಕ್ಕೆ ಕಾಂಗ್ರೆಸ್ಗೆ 70 ಸೀಟು ಬಂದಿದೆ
* ಸಿದ್ದು ಬಿಟ್ಟರೆ ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯಕ್ಕೆ ಇಳಿಯುತ್ತದೆ
ಹಾಸನ(ಜೂ.18): ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮತ್ತೊಮ್ಮೆ ತಮ್ಮ ಪ್ರೀತಿ ಪ್ರಕಟಿಸಿದ್ದಾರೆ. ಸಿದ್ದರಾಮಯ್ಯ ಅವರು ಇರುವುದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಉಳಿದಿದೆ ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಗೌಡರನ್ನು ಪಧಾನಿ ಹುದ್ದೆಯಿಂದ ಕೆಳಗಿಳಿಸಿದ ಶಾಪ ಆ ಪಕ್ಷಕ್ಕೆ ತಟ್ಟುತ್ತದೆ. ಆ ಶಾಪದಿಂದಾಗಿಯೇ ಕಾಂಗ್ರೆಸ್ ಇಂದು ಈ ಸ್ಥಿತಿಗೆ ಬಂದಿದೆ. ಆದರೆ, ಇಂತಹ ಪಕ್ಷದಲ್ಲಿ ಸಿದ್ದರಾಮಯ್ಯರಂಥವರು ಇರುವುದರಿಂದಲೇ ಪಕ್ಷ ಇನ್ನೂ ಉಳಿದಿದೆ’ ಎಂದರು.
ಗುಸುಗುಸು ಬೆನ್ನಲ್ಲೇ ರೇವಣ್ಣ ಭೇಟಿ : ಕುತೂಹಲ ಮೂಡಿಸಿದ ರಾಜಕೀಯ
ಅವರೇನಾದರೂ ಕೈಬಿಟ್ಟರೆ ಆ ಪಕ್ಷವನ್ನು ಯಾರೂ ಮುಳುಗಿಸಬೇಕಾಗಿಲ್ಲ. ತಾನಾಗಿಯೇ ಮುಳುಗಿಹೋಗುತ್ತದೆ. ನಾನು ಇದ್ದುದನ್ನು ಇದ್ದಂತೆ ಹೇಳುತ್ತೇನೆ. ಎಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಮುಗಿಸಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಇರೋದಕ್ಕೆ ಕಾಂಗ್ರೆಸ್ಗೆ 70 ಸೀಟು ಬಂದಿದೆ. ಸಿದ್ದರಾಮಯ್ಯರನ್ನು ಬಿಟ್ಟರೆ ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯಕ್ಕೆ ಇಳಿಯುತ್ತದೆ ಎಂದರು.