'ಶಾಸಕ ಬೆಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ'
* ತಮ್ಮ ಕ್ಷೇತ್ರ ಸುಧಾರಿಸದ ಬೆಲ್ಲದ ರಾಜ್ಯ ಹೇಗೆ ನಿಭಾಯಿಸುತ್ತಾರೆ ?
* ಸುಳ್ಳು ಹೇಳಿ ದೆಹಲಿಗೆ ಹೋಗಿದ್ಯಾಕೆ: ಜೆಡಿಎಸ್ ಮುಖಂಡ ಹುಣಸೀಮರದ ಟೀಕೆ
* ರಾಜಕೀಯಕ್ಕೆ ಬಂದು ಹೇಗೆ 700 ಕೋಟಿ ಆಸ್ತಿ ಮಾಡಿದರು?
ಧಾರವಾಡ(ಜೂ.16): ವಿಧಾನಸೌಧದ ನಾಲ್ಕು ಮೂಲೆಗಳ ಬಗ್ಗೆ ಮಾಹಿತಿ ಇಲ್ಲದ, ವ್ಯಾಪಾರಿ ರಾಜಕಾರಣಿಯಾಗಿರುವ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಟೀಕಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹುಬ್ಬಳ್ಳಿ-ಧಾರಾವಾಡ ಪಶ್ಚಿಮ ಕ್ಷೇತ್ರವು ಕೋವಿಡ್ನಿಂದ ಬಳಲುತ್ತಿದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆಂದು ದೆಹಲಿಗೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾವು ಸಂಬಂಧಿಕರ ಭೇಟಿಗೆ ಹೋಗಿದ್ದು ಯಾವುದೇ ರಾಜಕೀಯ ನಾಯಕ ಭೇಟಿಗಲ್ಲ ಎಂದು ಸ್ವತಃ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಬೆಲ್ಲದ ಅವರ ಸಂಬಂಧಿಕರು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣಸಿಂಗ್ ಹಾಗೂ ಬಿ.ಎಲ್. ಸಂತೋಷ ಅವರ ಮನೆಯಲ್ಲಿದ್ದಾರೆಯೇ ? ಎಂದು ಹುಣಸೀಮರದ ಪ್ರಶ್ನಿಸಿದರು.
ಒಂದೂ ದಿನ ಪಕ್ಷಕ್ಕಾಗಿ, ಕ್ಷೇತ್ರದ ಜನರಿಗೆ ಹಾಗೂ ಸಮಾಜದ ಜನರಿಗೆ ದುಡಿಯದ ಬೆಲ್ಲದ ಈಗ ಮುಖ್ಯಮಂತ್ರಿ ಆಗಲು ಹೊರಟಿರುವುದು ಹಾಸ್ಯಾಸ್ಪದ. ಸ್ವಯಂ ಘೋಷಿತ ಮುಖ್ಯಮಂತ್ರಿ. ಇದರಿಂದ ಕ್ಷೇತ್ರದ ಅಭಿವೃದ್ಧಿಗೂ ಕಂಟಕ ಎಂದು ಕಟುವಾಗಿ ಟೀಕಿಸಿದರು.
BJP VS BJP : ಇಬ್ಬರು ಸಚಿವರ ನಡುವೆ ಪರಸ್ಪರ ವಾಕ್ಪ್ರಹಾರ
ಕೋವಿಡ್ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ತತ್ತರಿಸಿದ್ದಾರೆ. ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ. ಒಂದೂ ಆಸ್ಪತ್ರೆಗೆ ಇವರು ಭೇಟಿ ನೀಡಿ ವೈದ್ಯರ ಕಾರ್ಯವೈಖರ ಪರಿಶೀಲಿಸಿಲ್ಲ. ಹು-ಧಾ ಇನ್ನೂ ಸ್ಮಾರ್ಟ್ಸಿಟಿ ಆಗಿಲ್ಲ. ಶೈಕ್ಷಣಿಕ ಅಭಿವೃದ್ಧಿ ಇಲ್ಲ. ತಾವೊಬ್ಬ ಕೈಗಾರಿಕೋದ್ಯಮಿ ಎನ್ನುವ ಬೆಲ್ಲದ ಒಂದೂ ಕಂಪನಿ ತಂದಿಲ್ಲ. ಒಬ್ಬರಿಗೂ ಉದ್ಯೋಗ ಕೊಡಿಸಿಲ್ಲ. ತಮ್ಮ ಮನೆಯ ಎದುರಿನ ಟೆಂಡರ್ ಶ್ಯೂರ್ ರಸ್ತೆ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಟೆಂಡರ್ ಇಲ್ಲ, ತಮ್ಮ ಕ್ಷೇತ್ರದ ಅಭಿವೃದ್ಧಿಯೇ ಗೊತ್ತಿಲ್ಲದ ಶಾಸಕನನ್ನು ಮುಖ್ಯಮಂತ್ರಿ ಮಾಡಿದರೆ ರಾಜ್ಯದ ಗತಿ ಏನು? ಎಂದು ಹುಣಸೀಮರದ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹಿರಿಯರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ಇದ್ದಾರೆ. ಅವರನ್ನು ಮೀರಿ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿರುವುದು ಸರಿಯಲ್ಲ ಎಂದರು. ಅರವಿಂದ ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಮಾರುಕಟ್ಟೆಯಲ್ಲಿ ಬಳ್ಳೊಳ್ಳಿ, ಈರುಳ್ಳಿ ಮಾರಾಟ ಮಾಡುವ ವ್ಯಾಪಾರಿಗಳು ಎಂದು ಅವರ ಸಮಾನ ವಯಸ್ಕರು ಹೇಳುತ್ತಿದ್ದಾರೆ. ರಾಜಕೀಯಕ್ಕೆ ಬಂದು ಹೇಗೆ 700 ಕೋಟಿ ಆಸ್ತಿ ಮಾಡಿದರು ಎಂಬ ಪ್ರಶ್ನೆ ಎದ್ದಿದೆ. ಅರವಿಂದ ಬೆಲ್ಲದ ಅವರಿಗೆ ವಿಧಾನಸೌಧಧ ನಾಲ್ಕು ಮೂಲೆಗಳ ಬಗ್ಗೆಯೇ ಮಾಹಿತಿ ಇಲ್ಲ. ಅವರೊಬ್ಬ ವ್ಯಾಪಾರಿ ರಾಜಕಾರಣಿ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹರಲ್ಲ ಎಂದು ಹುಣಸೀರಮದ ಪುನರುಚ್ಚಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜು ಅಂಬೋರೆ, ರಮಾನಾಥ ಶಣೈ, ಈರಣ್ಣ ಬಾರಕೇರ, ಶಾಂತವೀರ ಬೆಟಗೇರಿ ಇದ್ದರು.