ನಾಡಪ್ರಭು ಕೆಂಪೇಗೌಡರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಎಚ್‌.ಡಿ. ದೇವೇಗೌಡರನ್ನು ಆಹ್ವಾನಿಸಬೇಕೆಂಬ ಕನಿಷ್ಠ ಸೌಜನ್ಯವಾದರೂ ಸರ್ಕಾರಕ್ಕೆ ಇರಲಿಲ್ಲವೆ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಪ್ರಶ್ನಿಸಿದರು.

 ಕೋಲಾರ (ನ.13): ನಾಡಪ್ರಭು ಕೆಂಪೇಗೌಡರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಎಚ್‌.ಡಿ. ದೇವೇಗೌಡರನ್ನು ಆಹ್ವಾನಿಸಬೇಕೆಂಬ ಕನಿಷ್ಠ ಸೌಜನ್ಯವಾದರೂ ಸರ್ಕಾರಕ್ಕೆ ಇರಲಿಲ್ಲವೆ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಪ್ರಶ್ನಿಸಿದರು.

ನಗರದ ಪತ್ರ ಕರ್ತರ ಭವನದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ನಾಡಪ್ರಭು ಕೆಂಪೇ ಗೌಡರ (Kempegowda) ಪುತ್ಥಳಿಕೆ ಅನಾವರಣ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯರಾದ ತಮಗೂ ಆಹ್ವಾನ ನೀಡದೆ ಬಿಜೆಪಿ (BJP) ಕಾರ್ಯಕ್ರಮದಂತೆ ಮಾಡುವ ಮೂಲಕ ಸರ್ಕಾರದ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ

ರಾಜ್ಯದ 224 ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸ ಬೇಕಾಗಿರುವುದು ಮತ್ತು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಬೇಕಾಗಿರುವುದು ಸರ್ಕಾರದ ಶಿಷ್ಟಾ ಚಾರವಾಗಿದ್ದು, ಸರ್ಕಾರ ಇದನ್ನು ಉಲ್ಲಂಘಿಸಿದೆ. ದೇವೇ ಗೌಡರ ಮನೆಗೆ ಹೋಗಿ ಅವರನ್ನು ಆಹ್ವಾನಿಸಬೇಕಾಗಿತ್ತು. ಕೆಂಪೇ ಗೌಡರ ಬಳಿಕ ಬೆಂಗಳೂರನ್ನು ಅಭಿವೃದ್ಧಿಪಡಿಸಿದ ಕೀರ್ತಿ ದೇವೇ ಗೌಡರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯನವರಲ್ಲ ಯಾರೇ ಬಂದರೂ ಜೆ ಡಿ ಎಸ್‌ ಅಭ್ಯರ್ಥಿ ಸ್ವರ್ಧಿಸುವುದು ಖಚಿತ. ಅಭ್ಯರ್ಥಿಗಳ ಆಯ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಿರ್ಧಾರ ಅಂತಿಮ ಎಂದರು.

ಪಂಚರತ್ನಯಾತ್ರೆ ಮತ್ತೆ ಮುಂದಕ್ಕೆ

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಜೆಡಿಎಸ್‌ ಪಕ್ಷದ ಪಂಚರತ್ನ ಯಾತ್ರೆ ಜಿಲ್ಲೆಯಲ್ಲಿ 14ರಂದು ನಿಗದಿಪಡಿಸಲಾಗಿತ್ತು. ಆದರೆ ಪ್ರಕೃತಿಯ ಬದಲಾವಣೆಯಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ತಾತ್ಕಾಲಿಕವಾಗಿ ಮುಂದೂಡಬೇಕಾಗಿರುವುದು ಅನಿವಾರ್ಯ. ಮುಂದಿನ ದಿನಾಂಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ವರ್ಧಿಸಿದಲ್ಲಿ ನೀವುಗಳು ಕುಮಾರಸ್ವಾಮಿ ಅವರನ್ನು ಪತ್ರಿಸ್ಪರ್ಧಿಯಾಗಿ ಚುನಾವಣಾ ಕಣಕ್ಕೆ ಇಳಿಸುವಿರಾ ಎಂಬ ಪ್ರಶ್ನೆಗೆ, ಕುಮಾರಸ್ವಾಮಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಕೋಲಾರಕ್ಕೆ ಯಾರೇ ಬಂದರೂ ನಾವು ಅಡ್ಡಿಪಡಿಸಲ್ಲ. ಯಾರೇ ಬಂದರೂ ಜೆಡಿಎಸ್‌ ಸ್ವರ್ಧೆ ಖಚಿತ. ನಾವೆಲ್ಲಾರೂ ಹೈಕಮಾಂಡ್‌ ನಿರ್ಧಾರಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

2023ರಲ್ಲಿ ಜೆಡಿಎಸ್‌ ಅಧಿಕಾರಕ್ಕೆ

ಜೆಡಿಎಸ್‌ ಪಕ್ಷವು ರೂಪಿಸಿರುವ ಪಂಚರತ್ನ ಯೋಜನೆಯಂತ ಜನಪರ ಚಿಂತನೆಗಳು ಇತರೆ ಪಕ್ಷಗಳಿಗೆ ಇಲ್ಲವಾಗಿದೆ. ಅವರುಗಳಿಗೆ ಅಧಿಕಾರ ಬೇಕೆ ಹೊರರು ರಾಜ್ಯದ ಹಿತ, ರಾಜ್ಯದ ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲ. ನಮ್ಮ ರಾಜ್ಯದ ಅಭಿವೃದ್ದಿ ಏನಿದ್ದರೂ ಕುಮಾರಸ್ವಾಮಿರಿಂದ ಮಾತ್ರ ಸಾಧ್ಯ. ಮುಂದಿನ 2023ರ ಚುನಾವಣೆಯಲ್ಲಿ ಜೆಡಿಎಸ್‌ ಜನರ ಆಶೀರ್ವಾದದಿಂದ ಬಹುಮತ ಪಡೆದು ಕುಮಾರಸ್ವಾಮಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಘೋಷಿಸಿದರು,

ನಗರಸಭೆ ಮಾಜಿ ಉಪಾಧ್ಯಕ್ಷ ಎಲ್‌.ಖಲೀಲ್‌ ಮಾತನಾಡಿ, ಶ್ರೀನಿವಾಸಪುರ ಶಾಸಕ ರಮೇಶ್‌ ಕುಮಾರ್‌ ಅವರು ಕೆ.ಎಚ್‌.ಮುನಿಯಪ್ಪರನ್ನು ಮುಗಿಸಿದ್ದು ಆಗಿದೆ. ಈಗ ಸಿದ್ದರಾಮಯ್ಯರನ್ನು ಕರೆತಂದು ಮುಗಿಸಲು ಹುನ್ನಾರ ಮಾಡಿದ್ದಾರೆಎಂದು ವ್ಯಂಗವಾಡಿದರು.

ಈಗಾಗಲೇ ಅಲ್ಪಸಂಖ್ಯಾತರು ಜೆ.ಡಿ.ಎಸ್‌. ಸಮಾವೇಶ ಯಶಸ್ವಿಗೊಳಿಸಿದ್ದಾರೆ. ಸಿ.ಎಂ.ಇಬ್ರಾಹಿಂ ಅವರ ವಿಶ್ವಾಸದ ಮೇರೆಗೆ ಅಲ್ಪಸಂಖ್ಯಾತರು ಜಾತ್ಯಾತೀತಿ ಪಕ್ಷದ ತತ್ವ ಸಿದ್ದಾಂತಗಳ ಮೇಲೆ ವಿಶ್ವಾಸವಿರಿಸಿ ಈ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಜೆ.ಡಿ.ಎಸ್‌. ಪಕ್ಷವನ್ನು ಬೆಂಬಲಿಸಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷೆ ರಾಜೇಶ್ವರಿ, ಟಿಕೆಟ್‌ ಅಕಾಂಕ್ಷಿಗಳಾದ ಕೋಲಾರದ ಸಿ.ಎಂ.ಆರ್‌.ಶ್ರೀನಾಥ್‌, ಬಂಗಾರಪೇಟೆ ಮಲ್ಲೇಶ್‌ ಬಾಬು, ಮಾಲೂರು ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್‌, ವಡಗೂರು ರಾಮು ಇದ್ದರು.