*  ರಾಜ್ಯದಲ್ಲಿ 1.25 ಕೋಟಿ ಜನಸಂಖ್ಯೆ ಹೊಂದಿದ್ದೇವೆ*  ಸಮಾಜದ ಬಡವರಿಗಾಗಿ ಯಾವುದೇ ಯೋಜನೆಗಳು ಲಭ್ಯವಿಲ್ಲದಂತಾಗಿದೆ*  ವಿಶ್ವಾಸವಿಟ್ಟು ಪ್ರತಿಭಟನೆ ಹಿಂದಕ್ಕೆ

ಬ್ಯಾಡಗಿ(ಜೂ.29): ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ವಿಧಾನಸೌಧದ ಒಳಗೂ ನಮ್ಮ ಶಕ್ತಿಯನ್ನು ಪ್ರದರ್ಶಿಸುವುದಾಗಿ ಪಂಚಮಸಾಲಿ ಪೀಠದ ಜ. ಜಯಬಸವ ಮೃತ್ಯುಂಜಯ ಶ್ರೀಗಳು ಹೇಳಿದರು.

Add Asianetnews Kannada as a Preferred SourcegooglePreferred

ಪಟ್ಟಣದಲ್ಲಿ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1.25 ಕೋಟಿ ಜನಸಂಖ್ಯೆ ಹೊಂದಿದ್ದೇವೆ, ಇದರಲ್ಲಿ ಬಹುತೇಕರು ಕೃಷಿಕರು ಮತ್ತು ಕೂಲಿ ಕಾರ್ಮಿಕರಿದ್ದಾರೆ. ಸಮಾಜದ ಬಡವರಿಗಾಗಿ ಯಾವುದೇ ಯೋಜನೆಗಳು ಲಭ್ಯವಿಲ್ಲದಂತಾಗಿದ್ದು ಅವರ ಶ್ರೇಯೋಭಿವೃದ್ಧಿಗೆ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ ಎಂದರು.

'ಯಡಿಯೂರಪ್ಪಗೆ ತಿರುಗೇಟು ಕೊಡಲು ಮಾಡಿದ ಹೋರಾಟ ಅಲ್ಲ'

ರಾಜ್ಯ ವಿಧಾನಸಭೆ ಶೇ. 25 ರಷ್ಟುಶಾಸಕರು ಪಂಚಮಸಾಲಿಗಳಿದ್ದಾರೆ. ಅದರೆ, ಈವರೆಗೂ ಅವರೆಲ್ಲರೂ ತಾಳ್ಮೆಯಿಂದ ಸರ್ಕಾರದ ನಿರ್ಧಾರಗಳಿಗೆ ತಲೆದೂಗಿದ್ದಾರೆ. ಆದರೆ, ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. 2ಎ ಮೀಸಲಾತಿ ನಿರ್ಣಾಯಕ ಹಂತ ತಲುಪಿದ್ದು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎನ್ನದೇ ಸಮಾಜದ ಎಲ್ಲ ಶಾಸಕರು 2ಎ ಮೀಸಲಾತಿಗೆ ವಿಧಾನಸೌಧದ ಒಳಗೆ ಹೋರಾಟ ನಡೆಸಲಿದ್ಧಾರೆ ಎಂದರು.
ಈ ವೇಳೆ ರಾಜ್ಯ ಪಂಚಮಸಾಲಿ ಘಟಕದ ಕಾರ್ಯದರ್ಶಿ ಸಿ.ಆರ್‌. ಬಳ್ಳಾರಿ, ಶಿವಯೋಗಿ ಗಡಾದ, ಎಂ.ಸಿ. ಹೆಡಿಯಾಲ, ಮಂಜುನಾಥ ಬಾಳಿಕಾಯಿ, ಜ್ಯೋತಿ ಕುದರಿಹಾಳ, ಮಂಜುನಾಥ ಪೂಜಾರ, ಶಕುಂತಲ ಧನ್ನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಶ್ವಾಸವಿಟ್ಟು ಪ್ರತಿಭಟನೆ ಹಿಂದಕ್ಕೆ:

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಿಂದುಳಿದ ಆಯೋಗದ ವರದಿ ವಿಳಂಬವಾದ ಹಿನ್ನೆಲೆಯಲ್ಲಿ ಮೀಸಲಾತಿ ಘೋಷಣೆ ಕಷ್ಟಸಾಧ್ಯ, ಕೇವಲ 2 ತಿಂಗಳಲ್ಲಿ ವರದಿ ಸಿದ್ಧಪಡಿಸಿ 2ಎ ಮೀಸಲಾತಿ ಘೋಷಿಸುವುದಾಗಿ ಮುಖ್ಯಮಂತ್ರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಮೇಲಿನ ವಿಶ್ವಾಸಕ್ಕೆ ಹೋರಾಟ ಹಿಂಪಡೆಯಲಾಗಿದೆ ಎಂದರು.