Asianet Suvarna News Asianet Suvarna News

ಕೊಡಗು: ರೋಗಿಗಳ ಊಟದ ಹೆಸರಲ್ಲೂ ನಡೆಯಿತಾ ಗೋಲ್ಮಾಲ್?

ಟೆಂಡರ್ ಸಂದರ್ಭ ಕಡಿಮೆ ಮೊತ್ತದ ಟೆಂಡರ್ ದಾರರಿಗೆ ಟೆಂಡರ್ ನೀಡುವ ಬದಲು, ಹೆಚ್ಚು ಮೊತ್ತದ ಟೆಂಡರ್ ಸಲ್ಲಿಸಿದವರಿಗೆ ಟೆಂಡರ್ ನೀಡಲಾಗಿದೆ. ವೈದ್ಯಕೀಯ ಇಲಾಖೆಯ ಮಾರ್ಗ ಸೂಚಿಯನ್ನು ಅನುಸರಿಸದೆ ಸ್ಥಳೀಯವಾಗಿ ಒಂದು ನಿಯಮ ಸೇರಿಸಿ ಟೆಂಡರ್ ಮಾಡುವ ಮೂಲಕ ಅವ್ಯವಹಾರ ನಡೆಸುವುದಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

Is Scandal in the name of Patients  Food at Government Hospital in Kodagu grg
Author
First Published Mar 17, 2024, 3:00 AM IST

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಮಾ.17): ಆಸ್ಪತ್ರೆಯ ಒಳರೋಗಿಗಳಿಗೆ ಕೊಡುವ ಊಟದ ಹೆಸರಿನಲ್ಲೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಗೋಲ್ಮಾಲ್ ನಡೆಸಿತಾ ಎನ್ನುವ ಅನುಮಾನ ಮೂಡಿದೆ. ಹೌದು, ಇದು ಕೊಡಗು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್ ನಡೆಸಲಾಗಿದ್ದು ಅದರಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. 

ಟೆಂಡರ್ ಸಂದರ್ಭ ಕಡಿಮೆ ಮೊತ್ತದ ಟೆಂಡರ್ ದಾರರಿಗೆ ಟೆಂಡರ್ ನೀಡುವ ಬದಲು, ಹೆಚ್ಚು ಮೊತ್ತದ ಟೆಂಡರ್ ಸಲ್ಲಿಸಿದವರಿಗೆ ಟೆಂಡರ್ ನೀಡಲಾಗಿದೆ. ವೈದ್ಯಕೀಯ ಇಲಾಖೆಯ ಮಾರ್ಗ ಸೂಚಿಯನ್ನು ಅನುಸರಿಸದೆ ಸ್ಥಳೀಯವಾಗಿ ಒಂದು ನಿಯಮ ಸೇರಿಸಿ ಟೆಂಡರ್ ಮಾಡುವ ಮೂಲಕ ಅವ್ಯವಹಾರ ನಡೆಸುವುದಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧೀನದಲ್ಲಿರುವ ಭೋಧಕ ಆಸ್ಪತ್ರೆಯ ಒಳರೋಗಿಗಳಿಗೆ ಸಿದ್ಧಪಡಿಸಿದ ಪಥ್ಯಾಹಾರ ಸರಬರಾಜು ಸೇವೆ ನಿರ್ವಹಿಸುವುದಕ್ಕೆ ದ್ವಿಲಕೋಟೆ ಪದ್ಧತಿಯಲ್ಲಿ ಇ ಪ್ರಕ್ಯೂರ್ ಮೆಂಟ್ ಟೆಂಡರ್ ಆಹ್ವಾನಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಜವಾಬ್ದಾರಿ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೈಚಳಕ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಗುತ್ತಿಗೆಯಿಂದ ವಂಚಿತರಾದ ಟೆಂಡರ್ ದಾರರು ಆಗ್ರಹಿಸಿದ್ದಾರೆ. 

ಕೊಡಗು: ಯುವಜನತೆ ನಾಯಕತ್ವ ಗುಣ ಬೆಳಸಿಕೊಳ್ಳುವಂತೆ ಪ್ರೊ.ರಾಘವ ಕರೆ

ಆಸ್ಪತ್ರೆಯ ಅಡುಗೆ ಮನೆಯಲ್ಲಿ ಸಿದ್ದಪಡಿಸಿದ ಆಹಾರ ತಯಾರಿಸಿ, ತೃಪ್ತಿಕರವಾಗಿ ಒದಗಿಸಿರುವ ಬಗ್ಗೆ ಸಂಬಂಧಿಸಿದ ಸಂಸ್ಥೆಗಳಿಂದ ಅನುಭವದ ಪ್ರಮಾಣ ಪತ್ರ ಲಗತ್ತಿಸಬೇಕೆಂದು ಷರತ್ತು ಸೇರಿಸಲಾಗಿತ್ತು. ಆದರೆ ಈ ನಿಯಮ ಅನಗತ್ಯ, ಏಕೆಂದರೆ ಕೋವಿಡ್ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ನಾವು ಸಿಬ್ಬಂದಿ ಇಲ್ಲದಿದ್ದರೂ ಪಿಪಿಇ ಕಿಟ್ ಧರಿಸಿ ಒಳರೋಗಿಗಳಿಗೆ ಊಟ ಪೂರೈಸಿದ್ದೇವೆ. ಆದರೆ ಟೆಂಡರ್ ಸಲ್ಲಿಸುವ ಸಂದರ್ಭ ನಮಗೆ ಈ ನಿಮಯವನ್ನೇ ಹೇಳದೆ, ನಂತರ ಈ ನಿಯಮವನ್ನು ಸೇರಿ ನಮಗೆ ಟೆಂಡರ್ ದೊರೆಯದಂತೆ ಮಾಡಲಾಗಿದೆ. ಅದಕ್ಕಿಂತ ಮುಖ್ಯವಾಗಿ ಈ ನಿಯಮವನ್ನು ಸೇರಿಸುವ ಮೂಲಕ ನಾವು ನಿತ್ಯ ಊಟಕ್ಕೆ 114 ರೂಪಾಯಿಗೆ ಟೆಂಡರ್ ಸಲ್ಲಿಸಿದ್ದರೂ ನಮಗೆ ನೀಡದೆ, 135 ರೂಪಾಯಿಗೆ ಟೆಂಡರ್ ಸಲ್ಲಿಸಿರುವ ಅಕಲಗೂಡಿನ ಗುತ್ತಿಗೆದಾರರೊಬ್ಬರಿಗೆ ಟೆಂಡರ್ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ ನಿತ್ಯ 21 ರೂಪಾಯಿ ಪ್ರತೀ ಊಟಕ್ಕೆ ನಷ್ಟವಾಗುತ್ತಿದೆ. ಅಂದರೆ 400 ಹಾಸಿಗೆಗಳಿರುವ ಈ ಆಸ್ಪತ್ರೆಯಲ್ಲಿ ನಿತ್ಯ ಒಟ್ಟು 8400 ರೂಪಾಯಿ ನಷ್ಟ ಉಂಟಾಗುವಂತೆ ಮಾಡಲಾಗಿದೆ. ಇದು ತಮಗೆ ಇಷ್ಟ ಬಂದವರಿಗೆ ಟೆಂಡರ್ ನೀಡುವುದಕ್ಕಾಯಿಯೇ 13 ನೇ ನಿಯಮವನ್ನು ಸೇರಿಸಲಾಗಿದೆ ಎಂದು ಗುತ್ತಿಗೆಯಿಂದ ವಂಚಿತರಾಗಿರುವ ಶರಿನ್ ಆರೋಪಿಸಿದ್ದಾರೆ. 

ನಮಗೆ ಟೆಂಡರ್ ದೊರೆಯದೇ ಇರುವುದಕ್ಕೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಾವು ಈ ಕುರಿತು ಪ್ರಶ್ನಿಸಿದರೂ ನಮಗೆ ಕರೆದು ಚರ್ಚಿಸದೆ ಅವರಿಗಿಷ್ಟದ ವ್ಯಕ್ತಿಗೆ ಟೆಂಡರ್ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಶರಿನ್ ಅವರು ವೈದ್ಯಕೀಯ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದ್ದು, ಇದಕ್ಕೂ ನ್ಯಾಯ ದೊರೆಯದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಶರಿನ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. 

ಒಟ್ಟಿನಲ್ಲಿ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಊಟ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿರುವ ಟೆಂಡರ್ ನಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕಾಗಿದೆ.

Follow Us:
Download App:
  • android
  • ios