Asianet Suvarna News Asianet Suvarna News

ಮೂಲ ಆರೆಸ್ಸಿಸ್ಸಿಗರು ಮೂಲೆಗೆ, ವಲಸಿಗರು ಬಯಲಿಗೆ..!

* ಯಾದಗಿರಿ ಜಿಲ್ಲೆಯಲ್ಲಿ ಹರಿದು ಹಂಚಿದ ಬಿಜೆಪಿ
* ನಾಯಕರಾಗುವವರೇ ಎಲ್ಲ, ಕಾರ್ಯಕರ್ತರೇ ಇಲ್ಲ !
* ಸಾಮಾನ್ಯ ಕಾರ್ಯಕರ್ತನ ಪಾಡು ಪಕ್ಷದಲ್ಲಿ ಹೀನಾಯ ಸ್ಥಿತಿಯಲ್ಲಿದೆ

Internal Strife in Yadgir District BJP Unit grg
Author
Bengaluru, First Published Aug 8, 2021, 12:52 PM IST

ಆನಂದ್ ಎಂ. ಸೌದಿ

ಯಾದಗಿರಿ(ಆ.08): ಆಂತರಿಕ ಕಲಹ ಜಿಲ್ಲಾ ಬಿಜೆಪಿಯನ್ನು ಛಿದ್ರಗೊಳಿಸುತ್ತ ಸಾಗಿದಂತಿದೆ. ಮುಖಂಡರುಗಳ ನಡುವಿನ ಮುಸುಕಿನ ಗುದ್ದಾಟ ಇತ್ತೀಚಿನ ದಿನಗಳಲ್ಲಿ ಮತ್ತಷ್ಟೂ ಕಾಣಿಸಿಕೊಳ್ಳುತ್ತಿದ್ದು, ಕಮಲ ಪಕ್ಷದ ವಿರುದ್ಧ ಕಾಂಗ್ರೆಸ್-ಜೆಡಿಎಸ್‌ಗಿಂತಲೂ ಹೆಚ್ಚಾಗಿ ಅದೇ ಪಕ್ಷದಲ್ಲಿನ ಕಿತ್ತಾಟವೇ ಮುಂದೊಂದು ದಿನ ಬಿಜೆಪಿ ಸೊರಗುವಿಕೆಗೆ ಕಾರಣವಾಗಬಹುದು ಅನ್ನೋದು ಪಕ್ಷದ ಸಾಮಾನ್ಯ ಕಾರ್ಯಕರ್ತರ ಅಂಬೋಣ.

ಜಿಲ್ಲಾಧ್ಯಕ್ಷರ ಒಂದು ಬಣ, ಶಾಸಕರುಗಳ ಬಣ, ಮಾಜಿ ಶಾಸಕರ ಬಣ, ಮಾಜಿ ಅಧ್ಯಕ್ಷರ ಬಣ, ಅವರ ಬಣ, ಇವರ ಬಣ.. ಹೀಗೆಯೇ ವಿವಿಧ ಬಣಗಳು ಬಿಜೆಪಿ ಪಕ್ಷವನ್ನು ಬಲಪಡಿಸುವದಕ್ಕಿಂತ ಹೆಚ್ಚಾಗಿ, ಅವರವರನ್ನೇ ಬಲಪಡಿಸುವಲ್ಲಿ ಮುಂದಾಗಿದ್ದಾರೆ. ಇಲ್ಲಿ ಎಲ್ಲರೂ ಮುಖಂಡರಾಗುವುದಕ್ಕೆ ಹೊರಟಿಂತಿದ್ದು, ಸಾಮಾನ್ಯ ಕಾರ್ಯಕರ್ತನ ಪಾಡು ಪಕ್ಷದಲ್ಲಿ ಹೀನಾಯ ಸ್ಥಿತಿಯಲ್ಲಿದೆ.

ಹಾಗೆ ನೋಡಿದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲದವರಿಂದ ಆರಂಭಗೊಂಡ ಇಲ್ಲಿ ನಂತರದ ದಿನಗಳಲ್ಲಿ ವಿವಿಧ ಪಕ್ಷಗಳಿಂದ ಬಂದ ವಲಸಿಗರೇ ಬಿಜೆಪಿ ಆಯಕಟ್ಟಿನ ಜಾಗೆಗಳಲ್ಲಿ ಸ್ಥಾನ ಭರ್ತಿ ಮಾಡಿಕೊಂಡಿದ್ದರಿಂದ ಮೂಲ ಆರೆಸ್ಸಿಸ್ಸಿಗರು ಈಗಿಲ್ಲಿನ್ನೂ ಮೂಲೆಗೆ ಸೇರಿದಂತಿದೆ. ಹಿಂದೊಮ್ಮೆ ಗಣವೇಷಧಾರಿಗಳಿಂದ ಕಂಗೊಳಿಸುತ್ತಿದ್ದ ಪಕ್ಷದಲ್ಲೀಗ ಸಂಘ ‘ವೇಷಧಾರಿಗಳ‘ದ್ದೇ ಕಾರುಬಾರು. ಸಂಘದ ಮೂಲ ಕಾರ್ಯಕರ್ತರು ಹಾಗೂ ಮುಖಂಡರ ಮೂಲೆಗುಂಪು ಮಾಡಿದಂತಿದೆ. ಪಕ್ಷದ ರಾಷ್ಟ್ರೀಯ ಅಥವಾ ರಾಜ್ಯ ನಾಯಕರುಗಳು ಬಂದಾಗ ಮುನ್ನೆಲೆಗೆ ಬರುವ ವಲಸಿಗರು, ಮೂಲ ಆರೆಸ್ಸಿಗರನ್ನು ಮರೆ ಮಾಚುತ್ತಿರುವುದು ಸಂಘದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಬಿಜೆಪಿ ನನಗೆ ಮೋಸ ಮಾಡಿಲ್ಲ: ಶಾಸಕ ರಾಜೂಗೌಡ

* ಹಿಂದುತ್ವದ ಹೋರಾಟ: ಅಮಾಯಕರ ವಿರುದ್ಧ ಪ್ರಕರಣ :

ಬಿಜೆಪಿ ಆಡಳಿತದಲ್ಲಿ ಇಲ್ಲಿನ ಉಸ್ತುವಾರಿ ವಹಿಸಿಕೊಂಡಿದ್ದ ಅನ್ಯ ಜಿಲ್ಲೆಗಳ ಸಚಿವರ ಬಗ್ಗೆ ಕೆಲವು ಬಿಜೆಪಿ ಮುಖಂಡರೇ ವ್ಯಕ್ತಪಡಿಸುತ್ತಿದ್ದ ತಾತ್ಸಾರ ಮನೋಭಾವ ಗುಂಪುಗಾರಿಕೆಗೆ ಮತ್ತಷ್ಟೂ ಇಂಬು ನೀಡುವಂತಿತ್ತು. ಸದ್ಯಕ್ಕೆನ್ನುವಂತೆ, ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆಂದು ಸಚಿವ ನಾಗೇಶ್ ಆಗಮಿಸಿದ್ದಾರೆ. ಉಸ್ತುವಾರಿ ಘೋಷಣೆಯಾಗಿಲ್ಲ. ಸಂಘದ ಕಟ್ಟಾ ಕಟ್ಟಾಳು ಆಗಿರುವ ನಾಗೇಶ್ ಅವರಿಗೆ ಜಿಲ್ಲೆಯ ಪಕ್ಷದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲು ಸಂಘದ ಇಲ್ಲಿನ ಕೆಲವು ಕಟ್ಟಾಳುಗಳು ತುದಿಗಾಲಲ್ಲಿ ನಿಂತಂತಿದೆ. ಹಿಂದುತ್ವದ ಕಾರ್ಯಚಟುವಟಿಕೆಗಳು ಹಾಗೂ ಕೆಲವೊಂದು ಹೋರಾಟದ ಸಂದರ್ಭಗಳಲ್ಲಿ ಸ್ವಯಂಸೇವಕರ ಮೇಲೆ ದಾಖಲಾದ ಪ್ರಕರಣಗಳ ಬಗ್ಗೆ ತುಟಿಪಿಟಕ್ಕೆನ್ನದ ಬಿಜೆಪಿ ಮುಖಂಡರುಗಳ ಅಸಡ್ಡತನ ಸಂಘದವರ ಕೆಂಗಣ್ಣಿಗೆ ಕಾರಣವಾಗಿದೆಯಾದರೂ, ರಾಜ್ಯಮಟ್ಟದಲ್ಲಿ ಅದನ್ನು ಬಗೆಹರಿಸುವ ಗೋಜಿಗೆ ಅವರ್‍ಯಾರೂ ಹೋಗದಿರುವುದು ಬೇಸರಕ್ಕೆ ಕಾರಣವಾಗಿದೆ.

8 ವರ್ಷಗಳ ಹಿಂದೆ ಯಾದಗಿರಿ ನಗರದ ಕೋಟೆಯಲ್ಲಿ ಭಗವಾಧ್ವಜ ಪ್ರಕರಣಕ್ಕೆ ಸಂಬಂಽಸಿದಂತೆ ದಾಖಲಾದ ಪ್ರಕರಣದಲ್ಲಿ ಇದಕ್ಕೆ ಸಂಬಂಧವೇ ಇರದ ಕೆಲವು ಅಮಾಯಕರ ಹೆಸರುಗಳಿವೆ. ನಡೆಯಲೂ ಬಾರದಷ್ಟು ಅಸಹಾಯಕರಾಗಿರುಗ ಸಂಘದ ಹಿರೀಕರ ಹೆಸರುಗಳೂ ಸೇರಿವೆ. ತುತ್ತು ಊಟಕ್ಕಾಗಿ ಪರದಾಡುತ್ತಿರುವ ಅಮಾಯಕರ ಭವಿಷ್ಯಕ್ಕೆ ಮುಳ್ಳಾಗುವ ಇಂತಹ ಪ್ರಕರಣದ ಬಗ್ಗೆ ತಮ್ಮದೇ ಸರ್ಕಾರದ ಗಮನಕ್ಕೆ ತರುವಲ್ಲಿ ಸ್ಥಳೀಯ ಮುಖಂಡರುಗಳ ನಿರ್ಲಕ್ಷ್ಯ ಹಿಂದುತ್ವ ಹೋರಾಟಗಾರರಲ್ಲಿ ಆಕ್ರೋಶ ಮನೆ ಮಾಡಿಸಿದೆ.
 

Follow Us:
Download App:
  • android
  • ios