Asianet Suvarna News Asianet Suvarna News

Mahadayi water dispute: ಮಹದಾಯಿ ಹೋರಾಟಗಾರರಿಗೆ ತಪ್ಪದ ಕೋರ್ಟ್ ಅಲೆದಾಟ

ರೈತರ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ಸರ್ಕಾರ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಹೇಳುತ್ತಿದೆ. ಆದರೆ, ಈ 10 ಹೋರಾಟಗಾರರು ಕೋರ್ಟಿಗೆ ಅಲೆದಾಡುತ್ತಿದ್ದಾರೆ.

Intelligence police case against Mahadai fighters navalgunda dharwad rav
Author
First Published Dec 10, 2022, 11:07 AM IST | Last Updated Dec 10, 2022, 11:07 AM IST

ಎಸ್‌.ಜಿ. ತೆಗ್ಗಿನಮನಿ

 ನರಗುಂದ ಡಿ.10) : 2017ರಲ್ಲಿ ಮಹದಾಯಿ ಹೋರಾಟಗಾರರು ತಮ್ಮ ಪಾಲಿನ ನೀರು ಪಡೆದುಕೊಳ್ಳುವ ಸಂಬಂಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸಭೆ ಮಾಡುತ್ತಿದ್ದರು. ಈ ಸಭೆಯಲ್ಲಿ ಗುಪ್ತಚರ ಪೊಲೀಸ್‌ ಸಿಬ್ಬಂದಿ ಮತ್ತು ಹೋರಾಟಗಾರರ ಮಧ್ಯೆ ಗಲಾಟೆಯಾಗಿ 10 ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ರೈತರೂ ಈಗಲೂ ಕೋರ್ಚ್‌ಗೆ ಅಲೆದಾಡುವ ಸ್ಥಿತಿ ಒದಗಿದೆ.

ರೈತ ಚಳವಳಿಗೆ ಹೆಸರಾದ ಬಂಡಾಯ ನೆಲದಲ್ಲಿ 2017ರಲ್ಲಿ ಮಹದಾಯಿ ಹೋರಾಟಗಾರರ ಹೋರಾಟದ ಕಾವು ಜೋರಾಗಿತ್ತು. ಹೋರಾಟ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. 25 ಟಿಎಂಸಿ ನೀರು ತಂದು ಮಲಪ್ರಭೆ ಜಲಾಶಯಕ್ಕೆ ಜೋಡಣೆ ಮಾಡಿದರೆ 4 ಜಿಲ್ಲೆಯ 9 ತಾಲೂಕುಗಳ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಈ ಭಾಗದ ರೈತರು ಕಳೆದ 20 ವರ್ಷದಿಂದ ಹೋರಾಟ ಮಾಡುತ್ತಿದ್ದರು. 2015ರ ಜೂನ್‌ 16ರಂದು ರೈತ ಸೇನಾ ರಾಜ್ಯ ಅಧ್ಯಕ್ಷ ವೀರೇಶ ಸೊಬರದಮಠ ಅವರ ನೇತೃತ್ವದಲ್ಲಿ ಬಂಡಾಯ ನೆಲದಲ್ಲಿ ಮಹದಾಯಿ, ಕಳಸಾ, ಬಂಡೂರಿ, ನಾಲಾ ಯೋಜನೆ ಜಾರಿಯಾಗುವರಿಗೆ ನಿರಂತರ ಹೋರಾಟ ಪ್ರಾರಂಭವಾಗಿತ್ತು. ಈ ವಿಚಾರವಾಗಿ 2017ರಲ್ಲಿ ಗೋದಾಮು ಒಂದರಲ್ಲಿ ಹೋರಾಟಗಾರರು ಸಭೆ ನಡೆ​ಸಿದ್ದರು. ಈ ಸಮಯದಲ್ಲಿ ಪೊಲೀಸ್‌ ಇಲಾಖೆಯ ಗುಪ್ತಚರ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿರುವುದನ್ನು ತಿಳಿದು ಗುಪ್ತಚರ ಸಿಬ್ಬಂದಿ ಮತ್ತು ರೈತರ ಮಧ್ಯೆ ಗಲಾಟೆ ನಡೆಯಿತು.

ಬದಲಾದ ಕಳಸಾ-ಬಂಡೂರಿ ಯೋಜನೆ; ಹೊಸ ಡಿಪಿಆರ್ ಪರ-ವಿರೋಧ

ಈ ಸಿಬ್ಬಂದಿ ಹೋರಾಟಗಾರರಾದ ಶಂಕ್ರಣ್ಣ ಅಂಬಲಿ, ವೀರಬಸಪ್ಪ ಹೂಗಾರ, ಏಕನಾಥ ಹೆಬಸೂರ, ಪರಶುರಾಮ ಜಂಬಗಿ, ಎ.ಪಿ. ಪಾಟೀಲ, ಬಸವರಾಜ ಸಾಬಳೆ, ವಿಠಲ ಜಾಧವ, ಹರೀಶ ಕಾಲವಾಡ, ಕಾಡಪ್ಪ ಕಾಕನೂರ, ಪ್ರಕಾಶ ವಡ್ಡರ, ಜಿನ್ನಪ್ಪ ಮುತ್ತಿನವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ರೈತರು ಕೋರ್ಚ್‌ಗೆ ಅಲೆದಾಡುವಂತಾಗಿದೆ.

ವಾಪಸ್‌ ಪಡೆಯಲಿ:

ರೈತರ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ಸರ್ಕಾರ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಹೇಳುತ್ತಿದೆ. ಆದರೆ, ಈ 10 ಹೋರಾಟಗಾರರು ಕೋರ್ಟಿಗೆ ಅಲೆದಾಡುತ್ತಿರುವುದು ತಿಳಿದಿಲ್ಲವೆ ಎಂದು ಪ್ರಶ್ನಿಸುತ್ತಾರೆ ರೈತರು. ಶೀಘ್ರ ಈ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್‌ ಪಡೆಯಲಿ ಎಂದು ಆಗ್ರಹಿಸುತ್ತಾರೆ ಮಹದಾಯಿ ಹೋರಾಟಗಾರರು. 

ಮಹದಾಯಿ ಹೋರಾಟಕ್ಕೆ ದೊಡ್ಡ ಶಕ್ತಿ ಮಲ್ಲಣ್ಣದ್ದು!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯದಿರು​ವು​ದ​ನ್ನು ನೋಡಿದರೆ ಈ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಎಷ್ಟಿದೆ ತಿಳಿಯುತ್ತದೆ. ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯದಿದ್ದರೆ ರೈತರು ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುವರು.

ಬಿ.ಆರ್‌. ಯಾವಗಲ್ಲ ಮಾಜಿ ಸಚಿವರು

ಸರ್ಕಾರ ಸೇರಿದಂತೆ ಈ ಭಾಗದ ಸಚಿವರು, ಶಾಸಕರಿಗೆ ಮಹದಾಯಿ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯಬೇಕು ಎಂದು ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ಮೇಲಿನ ಪ್ರಕರಣ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬಂಡಾಯ ನೆಲದ ರೈತರು ಆಳುವ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ.

ಶಂಕ್ರಣ್ಣ ಅಂಬಲಿ, ಕರ್ನಾಟಕ ರೈತ ಸೇನೆ ಅಧ್ಯಕ್ಷರು

Latest Videos
Follow Us:
Download App:
  • android
  • ios