ಹೆದ್ದಾರಿ ಗುಂಡಿಗಳಿಗೆ ಡಾಂಬರ್‌ ಬದಲು ಕಲ್ಲುಮಣ್ಣಿನ ಪ್ಯಾಚ್‌ ವರ್ಕ್! ಪಿಡಬ್ಲ್ಯುಡಿ ಅಧಿಕಾರಿಗಳಿಂದ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ರೋಶ

ರಿಪ್ಪನ್‌ಪೇಟೆ (ಅ.24) : ಭಾರಿ ಮಳೆಯಿಂದಾಗಿ ಶಿವಮೊಗ್ಗ -ಕೊಲ್ಲೂರು ಬೈಂದೂರು ಕುಂದಾಪುರ ಉಡುಪಿ ರಾಜ್ಯ ಹೆದ್ದಾರಿಗಳಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿವೆ. ಈ ಅವ್ಯವಸ್ಥೆ ಸರಿಪಡಿಸಲು ಪ್ರಯಾಣಿಕರು ಎಷ್ಟುಬಾರಿ ದೂರು ನೀಡಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಈಗ ಸಚಿವರನ್ನು ಸ್ವಾಗತಿಸುವ ಉದ್ದೇಶದಿಂದ ಹೊಸನಗರ ತಾಲೂಕಿನ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಹೊಂಡಗುಂಡಿ ಮುಚ್ಚಲು ಕಲ್ಲುಮಣ್ಣಿನ ಪ್ಯಾಚ್‌ ವರ್ಕ್ ನಡೆಸುತ್ತಿದ್ದಾರೆ. ಇಲಾಖೆಯ ಈ ನಡೆ ಈಗ ಸಾರ್ವಜನಿಕರಿಂದ ಆಕ್ರೋಶ ಹಾಗೂ ಅಪಹಾಸ್ಯಕ್ಕೂ ಗುರಿಯಾಗಿದೆ.

Add Asianetnews Kannada as a Preferred SourcegooglePreferred

ಶಿವಮೊಗ್ಗ: ಫುಟ್‌ಪಾತ್‌ ಕೆಳಗೆ ವಿಚಿತ್ರ ಶಬ್ದ, ಹೊಗೆ! ಏನಿರಬಹುದು?

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಅಳ ಉದ್ದದ ಹೊಂಡಗುಂಡಿಗಳು ಬಿದ್ದಿವೆ. ನಿತ್ಯ ದೂರದರ್ಶನಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಿತ್ಯ ಸುದ್ದಿಯಾಗಿ ಸರ್ಕಾರಕ್ಕೆ ಎಚ್ಚರಿಸಲಾಗುತ್ತಿದೆ. ಈ ರಸ್ತೆ ಅವ್ಯವಸ್ಥೆ ಸಾಗರ- ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೂ ಕಾಡಿದೆ. ಹರಿದು ಹಂಚಿರುವ ಹೊಸನಗರ ತಾಲೂಕು ವ್ಯಾಪ್ತಿಯ ಒಂದು ಕಡೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಾಗರ ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ಅವರ ಸ್ವಕ್ಷೇತ್ರ ಹೊಸನಗರ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ಭಾರಿ ಮಳೆಯಿಂದಾಗಿ ಹೊಂಡ ಗುಂಡಿಗಳು ಬಿದ್ದಿವೆ. ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಪ್ರಯಾಣಿಕರು ನೆಮ್ಮದಿಯಿಂದ ಸಂಚರಿಸಲು ಅಸಾಧ್ಯವಾಗಿದೆ. ಈಗ ಸಚಿವರ ಸ್ವಾಗತಕ್ಕಾಗಿ ಹೊಂಡ ಗುಂಡಿಗಳಿಗೆ ಕಲ್ಲುಮಣ್ಣು ಹಾಕಿ, ಅವ್ಯವಸ್ಥೆಗೆ ಕಣ್ಣುಕಟ್ಟುವ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಮತ್ತು ಪ್ರಯಾಣಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ರಾಜ್ಯ ಸರ್ಕಾರ ಎಚ್ಚತ್ತು ಇಂತಹ ಕಲ್ಲುಮಣ್ಣಿನ ಪ್ಯಾಚ್‌ ಹಾಕುವ ಬದಲು ಡಾಂಬರೀಕರಣದ ಪ್ಯಾಚ್‌ ಹಾಕುವುದರೊಂದಿಗೆ ಸರ್ಕಾರದ ಹಣವನ್ನು ಉಳಿತಾಯ ಮಾಡುವರೇ ಎಂಬುವುದನ್ನು ಕಾದುನೋಡಬೇಕಾಗಿದೆ.

ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

ಇಲಾಖೆ ಅಧಿಕಾರಿಗಳು ಕಿತ್ತುಹೋದ ರಸ್ತೆಗೆ ಕಲ್ಲುಮಣ್ಣಿನ ಲೇಪನ ಮಾಡಿ ಗಂಟು ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆಂದು ಕೋಡೂರು ಮಹಾಬಲೇಶ್ವರ. ಸುಬ್ಬನಾಯಕ್‌, ಚಂದ್ರು, ನಾಗರಾಜ್‌, ದೇವೇಂದ್ರ, ಈಶ್ವರಪ್ಪ, ಸುಬ್ರಹ್ಮಣ್ಯ, ತೀರ್ಥೇಶ್‌ ಬೆಳಲಮಕ್ಕಿ, ಹಾನಂಬಿ ಸ್ವಾಮಿ, ಗಜೇಂದ್ರ ಮಳಲಗುಡ್ಡೆ ಇನ್ನಿತರರು ಆಗ್ರಹಿಸಿದರು.