Asianet Suvarna News Asianet Suvarna News

Udupi ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ

* ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ
* ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಬಹಳ ಇತಿಹಾಸ ಪ್ರಸಿದ್ಧ ಸ್ಥಳ
* ವಿಜಯನಗರ, ಆಳುಪ,ಕೆಳದಿ ಸಂಸ್ಥಾನಗಳು  ಆಳ್ವಿಕೆ ನಡೆಸಿದ ಇತಿಹಾಸ ಕೂಡಾ ಇದೆ

inscription found in Basrur village Temple at udupi rbj
Author
Bengaluru, First Published Jun 23, 2022, 3:18 PM IST

ಉಡುಪಿ, (ಜೂನ್.23): ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಬಹಳ ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ವಿಜಯನಗರ, ಆಳುಪ,ಕೆಳದಿ ಸಂಸ್ಥಾನಗಳು  ಆಳ್ವಿಕೆ ನಡೆಸಿದ ಇತಿಹಾಸ ಕೂಡಾ ಇದೆ.

ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವರ್ಷಗಳಷ್ಟು  ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಕಂಡು‌ಬಂದಿದೆ.

ಶಾಸನದ ಪಠ್ಯದಲ್ಲಿ ಏನಿದೆ? 
ಶಾಸನದ ಸಾಲುಗಳಲ್ಲಿ ಕ್ರಮವಾಗಿ ವಿನಾಯಕ ದೆವರ!-ಕಂಚಿನ ಕಂಬ ೧ಕ್ಕೆ!- ನಗ ೪೪ ಕೇ ಅಶಲು!- ೪.೯೨ ರಕ್ಕೂ ೪  ಎಂದು ನಮೂದಾಗಿದೆ.ಒಂದು ಕಂಚಿನ ಕಂಬ ನಗ (ಹಣ) 44 ಅಸಲು ನೊಂದಿಗೆ 92 ಸೇರು ಅಂದರೆ 85.84 ಕೆ.ಜಿ ಕಂಚುಗಳನ್ನು ಬಳಕೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.

Udupi; 15ನೇ ಶತಮಾನದ ವಿಜಯನಗರ ಕಾಲದ ಶಾಸನ ಪತ್ತೆ

ಶಿಲ್ಪಕಲೆಯಲ್ಲಿ ಬಹಳ ವಿಶೇಷತೆಯಿಂದ ಕೂಡಿರುವ ಬಸ್ರೂರಿನ ದೇವಾಲಯ, ಕಂಚಿನ ಕಂಬದಲ್ಲೂ ಸಹ ಬಹಳ ವಿಶೇಷತೆಯಿಂದ ಹೆಸರುಪಡೆದಿದೆ.ಕಂಬದ ಮೊದಲ ಪಟ್ಟಿಕೆ ಅಂದರೆ ಕೆಳಭಾಗದಲ್ಲಿ ಕೂರ್ಮವತಾರದ ಕೆತ್ತನೆ ಇದೆ. ಕೂರ್ಮ ಅವತಾರದ ಮೇಲು ಭಾಗದ ಶಾಸನ ನಾಲ್ಕು ಸಾಲಿನಲ್ಲಿ(ಬರವಣಿಗೆ) ಪತ್ತೆಯಾಗಿದ್ದು, ಆಮೆಯ ಮೇಲ್ಭಾಗದಲ್ಲಿ ಗಜ (ಆನೆ)ಹೊತ್ತುಕೊಂಡ ಸನ್ನಿವೇಷ ಕಂಡು ಬಂದಿದ್ದು ಬಹಳ‌ ವಿಶೇಷತೆಯಿಂದ ಕೂಡಿದೆ.

ಎರಡನೇ ಪಟ್ಟಿಕೆಯಲ್ಲಿ ಗಜ (ಆನೆ) ಪೂರ್ವ ದಿಕ್ಕಿನಲ್ಲಿ ಯೋಧನಂತೆ ಚಿತ್ರಿಸಲಾಗಿದೆ. ಕೈಯಲ್ಲಿ ಕೊಡಲಿ ಇರುವುದನ್ನು ನಾವು ನೋಡ ಬಹುದಾಗಿದೆ. ಯೋಧ‌ ಆನೆಯ‌ ಹಿಂಭಾಗದಲ್ಲಿ‌ ಕುಳಿತಿರುವುದು ನಾವು‌ ತಿಳಿಯಬಹುದಾಗಿದೆ.

ಕೂರ್ಮಾವತಾರದ ಮೇಲ್ಭಾಗದಲ್ಲಿ ಏಕ ನಾಗಶಿಲ್ಪ, ತ್ರಿವಳಿ ನಾಗ ಶಿಲ್ಪ,ಆನೆ ,ಆನೆಯ ಸೊಂಡಿಲಲ್ಲಿ ಪುಷ್ಪಗಳಿರುವುದು ನೋಡಬಹುದಾಗಿದೆ.ಕಂಚಿನ ಕಂಬದ ಮೂರನೇ ಪಟ್ಟಿಕೆಯ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವರ ಗರ್ಭ ಗುಡಿಯ ಮುಖವಾಗಿ ಮೂಡು ಗಣಪತಿ ಕ್ರಿ.ಶ 15-16ನೇ ಶತಮಾನದ್ದೆಂದು ಇತಿಹಾಸ ಸಂಶೋಧಕರು ಆಗಿರುವ  ಡಾ.ಪಿ.ಗುರುರಾಜ್ ಭಟ್ ಇವರು ತಮ್ಮ ಅಧ್ಯಯನದ ಲೇಖನದಲ್ಲಿ‌‌ ಶಿಲ್ಪ ಕಲೆಯ ಬಗ್ಗೆ ವರದಿ ಮಾಡಿದ್ದಾರೆ.

ಮೂರನೇ ಪಟ್ಟಿಕೆಯ ಉತ್ತರ ಹಾಗೂ ದಕ್ಷಿಣ ದಲ್ಲಿ ಕಮಲ
ಹೂವಿನ ಅಂದರೆ ಪುಷ್ಪ ಶಿಲ್ಪ ಕಲೆಯನ್ನು ನಾವು ನೋಡಬಹುದಾಗಿದೆ.ಮೂರನೇ ಪಟ್ಟಿಕೆಯ ನಾಲ್ಕನೇ ಭಾಗದಲ್ಲಿ ನಮಸ್ಕಾರ ಶಿಲ್ಪದೊಂದಿಗೆ ವ್ಯಕ್ತಿಯ ಶಿಲ್ಪಕಲೆಯನ್ನು ನೋಡಬಹುದಾಗಿದೆ.

ಇದೇ ರೀತಿ ಬಸ್ರೂರು ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದ ಹೊರ ಪೌಳಿಯಲ್ಲಿ ವೈಷ್ಣವ ಪಂಥದ ಕಂಚಿನ ಕಂಬದ ನಾಲ್ಕು ಮುಖದಲ್ಲಿ ನಾಲ್ಕು ಶಿಲ್ಪಕಲೆ ಇದ್ದು, ಮೂರು ದಿಕ್ಕಿನ ಶಿಲ್ಪಕಲೆಯಲ್ಲಿ ಗರುಡ,ಆಂಜನೇಯ ಶಿಲ್ಪಗಳು ಬಹಳ ವಿಶೇಷತೆಯಿಂದ ಕೂಡಿದೆ. ಈ ಮೂರು ಶಿಲ್ಪಕಲೆ ನಮಸ್ಕಾರ ರೀತಿಯಲ್ಲಿ ಕಂಡು ಬಂದಿದೆ. ಈ ನಮಸ್ಕಾರ ಮಾಡಿದ ದಿಕ್ಕಿನಲ್ಲಿ ಮೂರು ಕಡೆಯಲ್ಲಿ ದೇವರು ಇರುವುದನ್ನು ನಾವು ನೋಡ ಬಹುದಾಗಿದೆ.ಇದೇ ರೀತಿಯಲ್ಲಿ ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಎದುರು ಭಾಗದಲ್ಲಿ ಇರುವ ಈ ಕಂಚಿನ ಕಂಬದಲ್ಲಿ ನಮಸ್ಕಾರ ಶಿಲ್ಪವನ್ನು ಹೊಂದಿದ ವ್ಯಕ್ತಿಯ ಶಿಲ್ಪವಿದೆ.

ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೊರ ಪ್ರಾಂಗಣದ (ಉಲ್ಲೇಖಿತ ದಾಖಲೆ) ಶಕವರುಷ 1322ನೆಯ ವಿಕ್ರಮ ಸಂವತ್ಸರ ಶ್ರಾವಣ ಬ 6 ಸೌಮ್ಯವಾರ( ಕ್ರಿ.ಶ 1400 ಆಗಸ್ಟ್ 11 ಬುಧವಾರದ) ವಿಜಯನಗರ ಕಾಲದ ಇಮ್ಮಡಿ ಹರಿಹರ ಮಹಾರಾಯರ ಕಾಲದ ಶಾಸನದ ಉಲ್ಲೇಖದಂತೆ ಬಸರೂರು ಸೆಟ್ಟಿಕಾರ ಸೆಟ್ಟಿಯ ಭೂದಾನದ ಉತ್ಪತ್ತಿಯಂತೆ ದಿನ ಒಂದಕ್ಕೆ ಒಂದು ಹಾನೆಯಂತೆ ವಷ೯ಕ್ಕೆ ಒಂಭತ್ತು ಮುಡಿ ಅಕ್ಕಿಯನ್ನು ನಖರೇಶ್ವರ ದೇವರ ಮುಂದಣ ನಂದಿಕೇಶ್ವರ ದೇವರ ನೈವೇದ್ಯಕ್ಕೆ ಕೊಡುವ ವಿಚಾರ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಈ ಮೂಲಕ ದೇವರಿಗೆ‌ ನಮಸ್ಕಾರ ಶಿಲ್ಪ ಕಲೆಯನ್ನು ಸಮರ್ಪಿಸಲಾಗಿದೆ.ಕಂಬದ ನಾಲ್ಕನೇ ಪಟ್ಟಿಕೆಯ ಮೇಲ್ಭಾಗದಲ್ಲಿ ಸಂಪೂರ್ಣ ದೀಪ ಹಚ್ಚಲು ಆರತಿಗೆ ವ್ಯವಸ್ಥೆಯನ್ನು ಮಾಡಿರುವ ಕಂಚಿನ ದೀಪಸ್ಥಂಭವನ್ನು ನಾವು ನೋಡಬಹುದಾಗಿದೆ.

ಕಂಚಿನ ಕಂಬದ ಶಾಸನವನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ವಿಭಾಗದ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿರುತ್ತಾರೆ,  ಇವರಿಗೆ ಅಜಯ್ ಕುಮಾರ್ ಶರ್ಮ ಶಿವಮೊಗ್ಗ, ಡಾ.ರವಿ ಕುಮಾರ್ ನವಲಗುಂದ , ಮಹೇಶ್ ಕಿಣಿ ಬಸ್ರೂರು, ಮಧುಸೂಧನ್ ಭಟ್ , ಶಶಿಕಾಂತ್ ಎಸ್ ಕೆ ಇವರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಸಹಕಾರ ನೀಡಿದ್ದಾರೆ.

Follow Us:
Download App:
  • android
  • ios