‘ಒಂದು ದೇಶ ಒಂದು ಸಂವಿಧಾನ’ ರಾಷ್ಟ್ರೀಯ ಐಕ್ಯತಾ ಅಭಿಯಾನದಲ್ಲಿ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ| ಭಯೋತ್ಪಾದಕರು ಹಾಗೂ ಪ್ರತ್ಯೇಕತಾವಾದಿಗಳಿಂದ ನಲುಗಿದ್ದ ಜಮ್ಮು-ಕಾಶ್ಮೀರದ ಜನರಿಗೆ 7 ದಶಕಗಳ ಬಳಿಕ ಸ್ವಾತಂತ್ರ್ಯ ಕೊಡಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ| ಡಾ. ಅಂಬೇಡ್ಕರ್‌ ಮೂಲಕ ಕಾಂಗ್ರೆಸ್‌ ಪಕ್ಷವು ಒತ್ತಡದಿಂದ ಆರ್ಟಿಕಲ್‌ 370ನ್ನು ಹೇರಿತ್ತು| ಇದೀಗ ರದ್ದು ಮಾಡಿರುವುದನ್ನು ಅಂತಾರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೊರಟ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ| 

ಬ್ಯಾಡಗಿ(ಸೆ.27) ಭಯೋತ್ಪಾದಕರು ಹಾಗೂ ಪ್ರತ್ಯೇಕತಾವಾದಿಗಳಿಂದ ನಲುಗಿದ್ದ ಜಮ್ಮು-ಕಾಶ್ಮೀರದ ಜನರಿಗೆ 7 ದಶಕಗಳ ಬಳಿಕ ಸ್ವಾತಂತ್ರ್ಯ ಕೊಡಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಡಾ. ಅಂಬೇಡ್ಕರ್‌ ಮೂಲಕ ಕಾಂಗ್ರೆಸ್‌ ಪಕ್ಷವು ಒತ್ತಡದಿಂದ ಆರ್ಟಿಕಲ್‌ 370ನ್ನು ಹೇರಿತ್ತು, ಇದೀಗ ರದ್ದು ಮಾಡಿರುವುದನ್ನು ಅಂತಾರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೊರಟ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು, ಕೆಲವೇ ದಿನಗಳಲ್ಲಿ ಪಿಓಕೆ ಸಹ ನಮ್ಮದಾಗಲಿದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶಗೌಡ ಹೇಳಿದರು.

Add Asianetnews Kannada as a Preferred SourcegooglePreferred

ಗುರುವಾರ ಬಿಜೆಪಿ ತಾಲೂಕು ಘಟಕ ಆಯೋಜಿಸಿದ್ದ ‘ಒಂದು ದೇಶ ಒಂದು ಸಂವಿಧಾನ’ ರಾಷ್ಟ್ರೀಯ ಐಕ್ಯತಾ ಅಭಿಯಾನ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 

ಆರ್ಟಿಕಲ್‌ 370 ರದ್ದತಿಯಿಂದ ವಿಶ್ವದೆಲ್ಲೆಡೆ ದೇಶದ ಕೀರ್ತಿ ಹರಡಿದೆ, ಒಂದು ದೇಶಕ್ಕೆ ಒಂದು ಸಂವಿಧಾನವಿರಬೇಕೆಂಬ ಉದ್ದೇಶದಿಂದ ಸತತ 5 ವರ್ಷಗಳ ಕಾಲ ಪ್ರಯತ್ನದಿಂದ ರದ್ದು ಮಾಡಲಾಗಿದೆ. ಪಾಕಿಸ್ತಾನ ಮಾತ್ರ ಭಾರತವೇನೋ ದೊಡ್ಡ ತಪ್ಪು ಮಾಡಿದೆ ಎನ್ನುವ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಹೊರಟಿದ್ದು ದೇಶದ ಆಂತರಿಕ ವಿಚಾರದಲ್ಲಿ ಕೈಹಾಕುತ್ತಿದೆ ಎಂದು ಆರೋಪಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಟ್ಟ-ಗುಡ್ಡಗಳ ಸರಣಿಗಳನ್ನು ಹೊಂದಿರುವ ಜಮ್ಮು-ಕಾಶ್ಮೀರ ನಿಜಕ್ಕೂ ಪ್ರತ್ಯಕ್ಷ ಸ್ವರ್ಗವೇ ಸರಿ, ಆದರೆ ನೀರು, ರಸ್ತೆ, ವಿದ್ಯುತ್‌ ಇನ್ನಿತರ ಮೂಲ ಸೌಕರ‍್ಯಗಳಿಲ್ಲದೇ ಸದಾ ಗುಂಡಿನ ಸದ್ದುಗಳಿಗೆ ನಲುಗಿದ್ದು ಅಲ್ಲಿನ ಜನರು ಅಕ್ಷರಶಃ ನರಕ ಸದೃಶ ಬದುಕು ನಡೆಸುತ್ತಿದ್ದಾರೆ. ಇತ್ತೀಚೆಗೆ ಪಿಓಕೆ ಸ್ಥಳಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಧಿಕ್ಕಾರ ಕೂಗುವ ಮೂಲಕ ತಮ್ಮ ಭಾವನೆಗಳನ್ನು ಹೊರ ಹಾಕಿದ್ದು ಇನ್ನಾದರೂ ಬುದ್ಧಿ ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ. 

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಕೇವಲ ಭಾಷಣಗಳಲ್ಲಿ ಹೇಳುತ್ತಿದ್ದ ಕಾಂಗ್ರೆಸ್‌ ಮುಖಂಡರು ಆರ್ಟಿಕಲ್‌ 370 ಹೇರುವ ಮೂಲಕ ಅಲ್ಲಿನ ಜನರ ಸ್ವಾತಂತ್ರ್ಯ ಕಸಿದುಕೊಂಡಿದ್ದರು, ಆದರೆ ಬಿಜೆಪಿ ಇದೀಗ ಅಲ್ಲಿನ ಜನರಿಗೆ ನಿಜ ಸ್ವಾತಂತ್ರ್ಯ ಕೊಡಿಸಿದ್ದು ಮುಸ್ಲಿಂ ವಿರೋಧಿಯಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ. 

ಮಾಹಿತಿ ನೀಡದ ಆಯೋಜಕರು

ತೇಜಸ್ವಿನಿ ಭಾಷಣವೆಂದರೆ ಜನ ಸೇರುವುದು ಸಹಜ, ಆದರೆ ಕಾರ್ಯಕ್ರಮ ಆಯೋಜನೆ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು (ಭಾಷಣ ಸ್ಪರ್ಧೆಗೆ ಪಾಲ್ಗೊಳ್ಳಲು ಬಂದವರು) ಹೊರತುಪಡಿಸಿ ಉಳಿದವರಾರ‍ಯರೂ ಇರಲಿಲ್ಲ, ಬಹಿರಂಗ ವೇದಿಕೆಯಲ್ಲಿ ಚರ್ಚೆಯಾಗಬೇಕಾಗಿದ್ದ ವಿಷಯ ಸಣ್ಣ ಹಾಲ್‌ನಲ್ಲಿ ಆಯೋಜಿಸಲಾಗಿತ್ತು, ಇದರಿಂದ ಕೋಪಗೊಂಡ ತೇಜಸ್ವಿನಿ ಭಾಷಣ ಮೊಟಕುಗೊಳಿಸಿ ಮುಖಂಡರೊಬ್ಬರ ಮುಖಕ್ಕೆ ಜಾಡಿಸಿ ತೆರಳಿದ ಘಟನೆ ನಡೆದಿದೆ.