* ಪಿಎಂ ಕೇರ್‌ ಮುಖಾಂತರ ಡಬ್ಬಾ ವೆಂಟಿಲೇಟರ್‌ ಖರೀದಿ * ಕಳಪೆ ವೆಂಟಿಲೇಟರ್‌ ನೀಡಿ ಜನರ ಜೀವ ತೆಗೆಯುತ್ತಿರುವುದು ಅಮಾನವೀಯ ಘಟನೆ* ಕಳಪೆ ವೆಂಟಿಲೇಟರ್‌ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು

ಗದಗ(ಮೇ.17): ಪಿಎಂ ಕೇರ್‌ ವಿಭಾಗದಲ್ಲಿ ಪೂರೈಕೆಯಾಗಿರುವ ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಶಾಸಕ ಎಚ್‌.ಕೆ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರಲ್ಲಿಯೂ ಗದಗ ಜಿಲ್ಲೆಗೆ ಪೂರೈಕೆ ಮಾಡಿರುವ ವೆಂಟಿಲೇಟರ್‌ಗಳು ಡಬ್ಬಾ ಆಗಿವೆ. ಇದರಿಂದ ಸಾವಿನ ಪ್ರಮಾಣ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಇವುಗಳಲ್ಲಿ ಅಗತ್ಯ ಸಾಮಗ್ರಿಗಳೇ ಇಲ್ಲ. ಜಿಲ್ಲೆಗೆ ವೆಂಟಿಲೇಟರ್‌ ಬಂದು ವಾರ ಕಳೆದರೂ ಸೇವೆಗೆ ಸಿಗುತ್ತಿಲ್ಲ. ಕನೆಕ್ಟರ್‌ ಇಲ್ಲ. ಆಕ್ಸಿಜನ್‌ ಸೆನ್ಸಾರ್‌ ಇಲ್ಲ. ಹೀಗಾಗಿ ಡಬ್ಬಾ ವೆಂಟಿಲೇಟರ್‌ ಹಾಗೇ ಬಿದ್ದಿವೆ. ಇತ್ತ ವೆಂಟಿಲೇಟರ್‌ ಇಲ್ಲದೇ ಸೋಂಕಿತರು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಅತ್ಯಂತ ಕಳಪೆ ಮಟ್ಟದ ವೆಂಟಿಲೇಟರ್‌ಗಳ ಪೂರೈಕೆ ಕೇವಲ ಗದಗ ಜಿಲ್ಲೆಗೆ ಮಾತ್ರವಲ್ಲ ಈಡೀ ರಾಜ್ಯಾದ್ಯಂತ ಇದೇ ಮಾದರಿಯ ವೆಂಟಿಲೇಟರ್‌ಗಳ ಪೂರೈಕೆ ಮಾಡಲಾಗಿದ್ದು ಇದರಿಂದ ರಾಜ್ಯದಲ್ಲಿ ನೂರಾರು ಜನ ಸಾಯಿಯುತ್ತಿದ್ದಾರೆ ಎಂದರು.

ಬ್ಯಾಡಗಿ ಆಸ್ಪತ್ರೆಗೆ 36 ಆಕ್ಸಿಜನ್‌ ಸಿಲಿಂಡರ್‌ ನೀಡಲು ನೆರವಾದ ಸಿರಿಗೆರೆ ಶ್ರೀ

ಪಿಎಂ ಕೇರ್‌ ಮುಖಾಂತರ ಡಬ್ಬಾ ವೆಂಟಿಲೇಟರ್‌ ಖರೀದಿ ಮಾಡಲಾಗಿದೆ ಎನ್ನುವುದು ನನ್ನ ನೇರ ಆರೋಪವಾಗಿದೆ, ಇಂಥ ಕಳಪೆ ವೆಂಟಿಲೇಟರ್‌ ನೀಡಿ ಜನರ ಜೀವ ತೆಗೆಯುತ್ತಿರುವುದು ಇದೊಂದು ಅಮಾನವೀಯ ಘಟನೆ, ತಮ್ಮ ಭ್ರಷ್ಟಾಚಾರಕ್ಕಾಗಿ ಜನರ ಜೀವ ತೆಗೆಯುತ್ತಿದ್ದಾರೆ. ಕಳಪೆ ವೆಂಟಿಲೇಟರ್‌ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ದೇಶ ವ್ಯಾಪ್ತಿ ಭ್ರಷ್ಟಾಚಾರ ಆಗಿರೋದರಿಂದ ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಎಂದು ಶಾಸಕ ಎಚ್‌.ಕೆ. ಪಾಟೀಲ್‌ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರು ಹಾಜರಿದ್ದರು.