* ಕೊರೋನಾ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ರಾಘವೇಂದ್ರ ಹಿಟ್ನಾಳ್‌* ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಪ್ರಮಾಣ ಏರಿಕೆ* ಕೋವಿಡ್‌ ಕೇರ್‌ ಸೆಂಟರ್‌ನಿಂದ 42 ಹಳ್ಳಿಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲ

ಮುನಿರಾಬಾದ್‌(ಮೇ.09): ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರು ಶನಿವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ನ್ನು ಉದ್ಘಾಟಿಸಿದರು.

ಕೋವಿಡ್‌ ಕೇರ್‌ ಸೆಂಟರ್‌ ಉದ್ಘಾಟನೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರು, ಮುನಿರಾಬಾದ್‌ನಲ್ಲಿ ಆರಂಭಗೊಂಡ ಕೋವಿಡ್‌ ಕೇರ್‌ ಸೆಂಟರ್‌ ರಾಜ್ಯದ ಮೊದಲ ಗ್ರಾಮೀಣ ಕೋವಿಡ್‌ ಕೇಂದ್ರವಾಗಿದೆ ಎಂದರು.

"

ಕೊಪ್ಪಳದಲ್ಲಿ ವೈರಸ್‌ ಅಟ್ಟಹಾಸ: ಕೊರೋನಾ ಸಂಕಷ್ಟಕ್ಕೆ ಮಿಡಿದ ಗವಿಸಿದ್ಧೇಶ್ವರ ಶ್ರೀ

ಕೊರೋನಾ ಮಾಹಮಾರಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಸಕರು ಆರೋಪಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಪ್ರಮಾಣ ಅಧಿಕವಾಗುತ್ತಿದ್ದು, ಸೋಂಕಿತರಿಗೆ ಅಗತ್ಯ ಬೆಡ್‌, ಆಕ್ಸಿಜನ್‌ ಹಾಗೂ ವೆಂಟಿಲೀಟರ್‌ಗಳು ಇಲ್ಲದೆ ಸೋಂಕಿತರ ಸಾವಿನ ಸಂಖ್ಯೆ ಅಧಿಕಗೊಳ್ಳುತ್ತಿದೆ. ಇದರಿಂದ ಮನನೊಂದ ತಾವು ಕೊರೋನಾ ಸೋಂಕಿತ ಜನರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ತಮ್ಮ ವಿಧಾನಸಭೆಯ ಕ್ಷೇತ್ರದ ವ್ಯಾಪ್ತಿಯ ಮುನಿರಾಬಾದ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕವಾಗಿ 30 ಹಾಸಿಗೆಯ ಆಕ್ಸಿಜನ್‌, ವೆಂಟಿಲೀಟರ್‌ ಹಾಗೂ ಬೆಡ್‌ಗಳುಳ್ಳ ಕೋವಿಡ್‌ ಕೇರ್‌ ಸೆಂಟರ್‌ನ್ನು ಇಂದು ಪ್ರಾರಂಭಿಸಿರುವುದಾಗಿ ತಿಳಿಸಿದರು. ಈ ಕೋವಿಡ್‌ ಕೇರ್‌ ಸೆಂಟರ್‌ನಿಂದ ಮುನಿರಾಬಾದ್‌ನ ಸುತ್ತಮುತ್ತ ಇರುವ ನಲವತ್ತೆರಡು ಹಳ್ಳಿಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಲಿಂಗರಾಜ್‌, ವೈದ್ಯಾಧಿಕಾರಿ ಡಾ. ತೊಗರಿ, ತಾಪಂ ಅಧ್ಯಕ್ಷ ಬಾಲಚಂದ್ರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona