Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿಂದು ಆದಿಯೋಗಿ ಪ್ರತಿಮೆ ಉದ್ಘಾಟನೆ

ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಈಶ ಫೌಂಡೇಶನ್‌ ವತಿಯಿಂದ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ ನಿರ್ಮಾನ. ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ಲೋಕಾರ್ಪಣೆಗೊಳಿಸಲಿದ್ದಾರೆ. 

Inauguration of Adiyogi statue on Jan 15h in Chikkaballapura grg
Author
First Published Jan 15, 2023, 7:02 AM IST

ಬೆಂಗಳೂರು(ಜ.15):  ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬೃಹತ್‌ ಆದಿಯೋಗಿ ಪ್ರತಿಮೆಯಂತೆ ಚಿಕ್ಕಬಳ್ಳಾಪುರದಲ್ಲಿರುವ ಸದ್ಗುರು ಸನ್ನಿಧಿಯಲ್ಲಿ ಯೋಗದ ಮೂಲ ಆದಿಯೋಗಿಯ ಅಪ್ರತಿಮ ಮುಖ ಪ್ರತಿಮೆಯ ಅನಾವರಣ ಇಂದು(ಭಾನುವಾರ) ಸಂಜೆ 6ಕ್ಕೆ ನೆರವೇರಲಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಈಶ ಫೌಂಡೇಶನ್‌ ವತಿಯಿಂದ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆ ಲೋಕಾರ್ಪಣೆಗೊಳಿಸಲಿದ್ದಾರೆ.

ವಿಜೃಂಭಣೆಯಿಂದ ನಡೆಯಲಿರುವ ಆದಿಯೋಗಿ ಪ್ರತಿಮೆ ಲೋಕಾರ್ಪಣೆಯಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಆದಿಯೋಗಿಯನ್ನು ಕರ್ನಾಟಕಕ್ಕೆ ಸ್ವಾಗತಿಸುವ ಸಲುವಾಗಿ ವಿಜೃಂಭಣೆಯ ಮಕರ ಸಂಕ್ರಾಂತಿ ಆಚರಣೆ, ಆದಿಯೋಗಿ ದಿವ್ಯ ದರ್ಶನ ಮತ್ತು ಯೋಗೇಶ್ವರ ಲಿಂಗದ ಪ್ರತಿಷ್ಠಾಪನೆ ನಡೆಯಲಿದೆ.

ಚಿಕ್ಕಬಳ್ಳಾಪುರದಲ್ಲಿ ನಾಳೆ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಕೋರ್ಟ್‌ ಅಸ್ತು

ಮಾನವ ವ್ಯವಸ್ಥೆಯಲ್ಲಿನ ಐದು ಚಕ್ರಗಳ ದ್ಯೋತಕವಾಗಿ ಸದ್ಗುರು ಅವರು ಯೋಗೇಶ್ವರ ಲಿಂಗವನ್ನು ಆದಿಯೋಗಿಯ ಬಳಿ ಪ್ರತಿಷ್ಠಾಪಿಸಲಿದ್ದಾರೆ. ಯೋಗೇಶ್ವರಲಿಂಗದ ಉಪಸ್ಥಿತಿಯೊಂದಿಗೆ, ಆದಿಯೋಗಿಗೆ ಜೀವಂತ ಕಳೆ ಬರಲಿದೆ. ಸದ್ಗುರು ಸನ್ನಿಧಿಯಲ್ಲಿ ಯೋಗೇಶ್ವರ ಲಿಂಗವು ಎರಡನೇ ಪ್ರತಿಷ್ಠಾಪನೆಯಾಗಲಿದೆ. ಮೊದಲನೆಯದಾಗಿ ಅಕ್ಟೋಬರ್‌ 9, 2022 ರಂದು ಸದ್ಗುರುಗಳು ನಾಗ ಪ್ರತಿಷ್ಠೆಯನ್ನು ನಡೆಸಿದ್ದರು. ನಾಗಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗದ ಜೊತೆಗೆ, ಸದ್ಗುರು ಸನ್ನಿಧಿಯಲ್ಲಿ ಲಿಂಗ ಭೈರವಿ ದೇವಾಲಯ ಮತ್ತುಎರಡು ತೀರ್ಥಕುಂಡಗಳು ಮುಂಬರುವ ದಿನಗಳಲ್ಲಿ ಬರಲಿದೆ ಎಂದು ಈಶ ಫೌಂಡೇಶನ್‌ ತಿಳಿಸಿದೆ.

ಸದ್ಗುರು ಸನ್ನಿಧಿ ಒಂದು ಶಕ್ತಿಯುತವಾಗಿ ಪ್ರತಿಷ್ಠಾಪನೆಗೊಂಡ ಸ್ಥಳವಾಗಿದ್ದು, ಮಾನವರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತುಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು ಮನಸ್ಸು, ದೇಹ, ಭಾವನೆ ಮತ್ತು ಶಕ್ತಿಗಳ ಸಾಮರಸ್ಯವನ್ನು ತರಲು ಶಾಸ್ತ್ರೀಯ ಯೋಗ ವಿಜ್ಞಾನದಿಂದ ಹಲವಾರು ಸಾಧನ ಮತ್ತು ತಂತ್ರಜ್ಞಾನಗಳನ್ನು ನೀಡುತ್ತದೆ. ಇದರ ಉದ್ದೇಶವು ಆಂತರಿಕ ಯೋಗಕ್ಷೇಮವನ್ನು ಹೆಚ್ಚಿಸಿ, ಎಲ್ಲಾ ಅನ್ವೇಷಕರಿಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವಕಾಶವನ್ನು ನೀಡುವುದಾಗಿದೆ.

ಆದಿಯೋಗಿ ದಿವ್ಯದರ್ಶನಂ:

ಆ ನಂತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿಯಂದು ಸದ್ಗುರು ಸನ್ನಿಧಾನದಲ್ಲಿ ನಡೆಯುವ ಮೊದಲ ಆಚರಣೆ ಆದಿಯೋಗಿ ದಿವ್ಯದರ್ಶನಂ. 112 ಅಡಿ ಆದಿಯೋಗಿಯ ಪ್ರತಿಮೆ ಮೇಲೆ 14 ನಿಮಿಷಗಳ ವಿಶಿಷ್ಟಬೆಳಕು ಮತ್ತು ಧ್ವನಿ ಪ್ರದರ್ಶನ ನಡೆಯಲಿದೆ. ಬೆಳಕು ಮತ್ತು ಧ್ವನಿಯ ಆದಿಯೋಗಿ ದಿವ್ಯ ದರ್ಶನ ಜ.15ರಿಂದ ಪ್ರತಿ ದಿನ ಸಂಜೆ ನಡೆಯಲಿದೆ. ಜೊತೆಗೆ ಇಶ ಸಂಸ್ಕೃತಿ ವಿದ್ಯಾರ್ಥಿಗಳಿಂದ ಮೋಡಿ ಮಾಡುವ ಪ್ರದರ್ಶನಗಳು ಮತ್ತು ಸೌಂಡ್ಸ್‌ ಆಫ್‌ ಈಶ ಕಾರ್ಯಕ್ರಮದ ಭಾಗವಾಗಲಿದೆ.

ಆದಿಯೋಗಿ ರಥಯಾತ್ರೆ:

ಮೊದಲ ಯೋಗಿಯಾದ, ಆದಿಯೋಗಿಯ 112 ಅಡಿಗಳ ಪ್ರತಿಮೆಯನ್ನು ಸ್ವಾಗತಿಸಲು, ವೈಭವವಾಗಿ ಅಲಂಕರಿಸಿದ ಆದಿಯೋಗಿ ರಥವನ್ನು 21 ದಿನಗಳ ಕಾಲ ಚಿಕ್ಕಬಳ್ಳಾಪುರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಭಕ್ತರು ಮೆರವಣಿಗೆ ಮೂಲಕ ಕೊಂಡೊಯ್ದಿದ್ದರು. ಇದು ಶನಿವಾರ ಸದ್ಗುರುಗಳ ಸನ್ನಿಧಿಯಲ್ಲಿ ನಾಗಮಂಟಪದಲ್ಲಿ ಸಮಾರ್ಪಣೆಗೊಂಡಿತು. ಆದಿಯೋಗಿ ರಥಯಾತ್ರೆಯು ಡಿಸೆಂಬರ್‌ 24, 2022 ರಂದು ಪ್ರಾರಂಭವಾಗಿ, ಶನಿವಾರ ಶಿವನಿಗೆ ಡೋಲು ಮತ್ತು ಮಂತ್ರಗಳ ಅರ್ಪಣೆಯಾದ ಕೈಲಾಯ ವಾದ್ಯದೊಂದಿಗೆ ಸಮಾಪಣೆಗೊಂಡಿತು.

ರಥವು ತನ್ನ 21 ದಿನಗಳ ಯಾತ್ರೆಯ ಅವಧಿಯಲ್ಲಿ, ಚಿಕ್ಕಬಳ್ಳಾಪುರದ ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತಿ, ಭಾವ ಪರವಶ ನೃತ್ಯ ಮತ್ತು ಪ್ರಾರ್ಥನೆಗಳಿಗೆ ಸಾಕ್ಷಿಯಾಯಿತು. ಮಹಿಳೆಯರು, ಮಕ್ಕಳು, ಕಿರಿಯರು, ಹಿರಿಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ರಥ ಎಳೆದು, ಆದಿಯೋಗಿಗೆ ನಮನ ಸಲ್ಲಿಸಿದರು.

ನೇರ ಪ್ರಸಾರ

ಆದಿಯೋಗಿ ಪ್ರತಿಮೆ ಅನಾವರಣ ರಾಜ್ಯದ ಎಲ್ಲಾ ಕೇಬಲ್‌ ನೆಟ್‌ವರ್ಕ್ಗಳು ಮತ್ತು ಟೀವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಜೊತೆಗೆ ಸದ್ಗುರು ಅಪ್ಲಿಕೇಶನ್‌, ಸದ್ಗುರುಗಳ ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ನಲ್ಲೂ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಚಿಕ್ಕಬಳ್ಳಾಪುರ: ಆದಿಯೋಗಿ ಪ್ರತಿಮೆ ಸ್ಥಳ, ಯಥಾಸ್ಥಿತಿಗೆ ಹೈಕೋರ್ಟ್‌ ಆದೇಶ

ಸಾವಿರಾರು ಜನರು ಭಾಗಿ

ಈಶ ಫೌಂಡೇಶನ್‌ ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸಿರುವ ಆದಿಯೋಗಿ ಮುಖಪ್ರತಿಮೆ ಅನಾವರಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಆದಿಯೋಗಿ ರಥ ಯಾತ್ರೆಯು ಕಳೆದ 21 ದಿನಗಳಿಂದ ಚಿಕ್ಕಬಳ್ಳಾಪುರದ ಸುತ್ತಮುತ್ತಲ ಹಳ್ಳಿಗಳಲ್ಲಿ ಸಂಚರಿಸಿರುವ ಪರಿಣಾಮ ಸಾಕಷ್ಟುಪ್ರಚಾರ ದೊರೆತಿದ್ದು ಆದಿಯೋಗಿ ಪ್ರತಿಮೆ ಲೋಕಾರ್ಪಣೆ ಉತ್ಸವದಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳು, ಗ್ರಾಮಗಳಿಂದ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಈಶ ಫೌಂಡೇಶನ್‌ ಮಾಹಿತಿ ನೀಡಿದೆ.

ಉಪರಾಷ್ಟ್ರಪತಿ ಗೈರು:

ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಗೈರು ಹಾಜರಾಗಲಿದ್ದಾರೆ. ಈ ಹಿಂದೆ ಉಪರಾಷ್ಟ್ರಪತಿಯವರೇ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಎಂದು ಈಶ ಫೌಂಡೇಶನ್‌ ತಿಳಿಸಿತ್ತು. ಆದರೂ ಉಪರಾಷ್ಟ್ರಪತಿಯವರ ಗೈರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಿಯೋಗಿ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಫೌಂಡೇಶನ್‌ ಮಾಹಿತಿ ನೀಡಿದೆ.

Follow Us:
Download App:
  • android
  • ios