Asianet Suvarna News Asianet Suvarna News

Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!

ವರ್ಷದ 6 ತಿಂಗಳ ಕಾಲ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಈ ವರ್ಷ ಎರಡು ತಿಂಗಳ ಕಾಲವಷ್ಟೇ ಆಗೊಮ್ಮೆ, ಈಗೊಮ್ಮೆ ಮಳೆ ಸುರಿದಿತ್ತು. ಪರಿಣಾಮ ಈಗ ಜಲಾಶಯಗಳೇ ಬಹುತೇಕ ಭತ್ತಿಹೋಗುತ್ತಿವೆ. ನಾಲ್ಕು ದಶಕಗಳ ಹಿಂದೆ ಜಲಾಶಯವೊಂದರಲ್ಲಿ ಮುಳುಗಿದ್ದ ದೇವಾಲಯವೊಂದು ಈ ಬಾರಿ ಪತ್ತೆಯಾಗಿದೆ. 
 

In Kodagu a temple of Lord Shiva submerged in a reservoir 40 years ago was found gvd
Author
First Published Dec 6, 2023, 8:02 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.06): ವರ್ಷದ 6 ತಿಂಗಳ ಕಾಲ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಈ ವರ್ಷ ಎರಡು ತಿಂಗಳ ಕಾಲವಷ್ಟೇ ಆಗೊಮ್ಮೆ, ಈಗೊಮ್ಮೆ ಮಳೆ ಸುರಿದಿತ್ತು. ಪರಿಣಾಮ ಈಗ ಜಲಾಶಯಗಳೇ ಬಹುತೇಕ ಭತ್ತಿಹೋಗುತ್ತಿವೆ. ನಾಲ್ಕು ದಶಕಗಳ ಹಿಂದೆ ಜಲಾಶಯವೊಂದರಲ್ಲಿ ಮುಳುಗಿದ್ದ ದೇವಾಲಯವೊಂದು ಈ ಬಾರಿ ಪತ್ತೆಯಾಗಿದೆ. ಯಾವುದು ಆ ದೇವಾಲಯ ನೀವೆ ನೋಡಿ. ಜಲಾಶಯದ ಮಧ್ಯಭಾಗದ ತಳದಲ್ಲಿ ಸ್ವಲ್ಪವೇ ಉಳಿದಿರುವ ನೀರು. ಈಗ ಮುಗಿಲೆತ್ತರಕ್ಕೆ ಕಾಣುತ್ತಿವೆ ನೀರಿನಲ್ಲಿ ಮುಳುಗಡೆಯಾಗಿದ್ದ ಬಹುತೇಕ ಮರಗಳು, ಎಲ್ಲೆಡೆ ಬಿರುಕುಬಿಟ್ಟು ಬರಗಾಲವನ್ನು ಸೂಚಿಸುತ್ತಿರುವ ಜಲಾಶಯ. 

ಇದರ ಮಧ್ಯದಲ್ಲೇ ಎದ್ದು ನಿಂತಿದೆ ಶಿವನ ದೇವಾಲಯ. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನಲ್ಲಿರುವ ಚಿಕ್ಲಿಹೊಳೆ ಜಲಾಶಯದ ನೀರು ಬಹುತೇಕ ಖಾಲಿಯಾಗಿದ್ದು ಜಲಾಶಯದಲ್ಲಿ 40 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಶಿವನ ದೇವಾಲಯ ಎದ್ದು ನಿಂತಿದೆ. ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1983 ರಲ್ಲಿ 0.18 ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯವನ್ನು ನಿರ್ಮಿಸಲಾಗಿತ್ತು. ಆದರೆ ಜಲಾಶಯ ಭಾಗದಲ್ಲಿ ಜಲಾಶಯ ನಿರ್ಮಾಣಕ್ಕೂ 100 ವರ್ಷಗಳಿಗೂ ಮೊದಲೇ ಮ್ಯಾಕ್ ಡೋರ್ ಫ್ಯಾಮಿಲಿಯಿಂದ ನಿರ್ಮಿಸಲಾಗಿದ್ದ ಶಿವನ ದೇವಾಲಯ ಮುಳುಗಡೆಯಾಗಿತ್ತು. 

ವೃದ್ಧ ದಂಪತಿಯಿಂದ ಮನೆಯಂಗಳದಲ್ಲೇ ಬೆಳೆಯುತ್ತವೆ ತರಕಾರಿಗಳು: ಮಡಹಾಗಲಕ್ಕೆ ಕೃತಕ ಪರಾಗಸ್ಪರ್ಶ

ಈಗ ಜಲಾಶಯದ ನೀರು ಬಹುತೇಕ ಖಾಲಿಯಾಗಿರುವುದರಿಂದ ದೇವಾಲಯ, ಜೊತೆಗೆ ದೇವಾಲಯಕ್ಕೆ ಅಂದು ಬಳಸುತ್ತಿದ್ದ ಬಾವಿ, ದೇವಾಲಯಕ್ಕೆ ಬರುತ್ತಿದ್ದ ಭಕ್ತರು ಬಳಸುತ್ತಿದ್ದ ಬಾವಿಗಳು ಪತ್ತೆಯಾಗಿವೆ. ನಾಲ್ಕು ದಶಕಗಳ ಕಾಲ ಜಲಾಶಯದೊಳಗೆ ದೇವಾಲಯ ಮುಳುಗಡೆಯಾಗಿದ್ದರಿಂದ ನೀರಿನ ಅಲೆಗಳ ಒಡೆತಕ್ಕೆ, ನೀರಿನ ಒತ್ತಡಕ್ಕೆ ದೇವಾಲಯ ಸಂಪೂರ್ಣ ಕುಸಿದು ಬಿದ್ದಿದ್ದೆ. ಗರ್ಭಗುಡಿ ಮತ್ತು ನಂದಿ ಮಂಟಗಳು ಮಾತ್ರ ಇಂದಿಗೂ ಏನೂ ಆಗಿಲ್ಲ. ಜಲಾಶಯದ ನೀರು ಖಾಲಿಯಾಗಿರುವುದರಿಂದ ಅದೆಲ್ಲವೂ ಈಗ ಕಾಣಿಸುತ್ತಿದೆ. ಚಿಕ್ಲಿಹೊಳೆ ಜಲಾಶಯದ ನಿರ್ಮಾಣಕ್ಕೂ ಮೊದಲು ಈ ದೇವಾಲಯದ ಜಾತ್ರೆ ತುಂಬಾ ಅದ್ಧೂರಿಯಾಗಿ ನಡೆಯುತಿತ್ತು. 

ಇಡೀ ಜಿಲ್ಲೆಯಲ್ಲೇ ದೊಡ್ಡ ಜಾತ್ರೆ ಇರುತಿತ್ತು. ನೂರಾರು ಅಂಗಡಿ ಮುಂಗಟ್ಟುಗಳು ಸೇರುತಿದ್ದವು. ಯಾವಾಗ ಜಲಾಶಯ ನಿರ್ಮಾಣವಾಯಿತೋ ಆಗ ದೇವಾಲಯದಲ್ಲಿದ್ದ ಶಿವನ ಲಿಂಗವನ್ನು ಸ್ಥಳಾಂತರ ಮಾಡಿ ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ಮುಳುಗಡೆಯಾಗಿರುವ ಈ ದೇವಾಲಯ ಇದುವರೆಗೆ ಕಾಣಿಸುತ್ತಿರಲಿಲ್ಲ. ಸಾಮಾನ್ಯವಾಗಿ ಮಾರ್ಚಿ ತಿಂಗಳಲ್ಲಿ ದೇವಾಲಯದ ಗೋಪುರ ಮಾತ್ರವೇ ಸ್ಪಲ್ಪ ಕಾಣುತಿತ್ತು. ಉಳಿದಂತೆ ದೇವಾಲಯ ಅಷ್ಟೇ ಅಲ್ಲ ಎತ್ತರವಾದ ಮರಗಳು ಮುಳುಗಿ ಅವುಗಳ ಮೇಲೆ 4 ಅಡಿಯಷ್ಟು ನೀರು ಇರುತ್ತಿತ್ತು. 

ಅಭಿವೃದ್ಧಿ ನಿಗಮದ ಅನುದಾನಕ್ಕಾಗಿ ಕೆಸರೆರೆಚಾಟ: ಶಾಸಕ ಪೊನ್ನಣ್ಣ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ

ಆದರೆ ಈ ಬಾರಿ ಚಳಿಗಾಲದ ಆರಂಭದಲ್ಲಿಯೇ ಜಲಾಶಯ ಇಷ್ಟೊಂದು ಖಾಲಿಯಾಗಿದ್ದು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಹುತೇಕ ಒಣಗಿ ಹೋಗಲಿದೆ ಎನ್ನುವ ಆತಂಕವನ್ನು ಮ್ಯಾಕ್ ಡೋರ್ ಕುಟುಂಬಸ್ಥರ ದೂರದ ಸಂಬಂಧಿಯೂ ಆಗಿರುವ ಸ್ಥಳೀಯರಾದ ಮೋಹನ್ ಅವರು ವ್ಯಕ್ತಪಡಿಸುತಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಎಲ್ಲಾ ವರ್ಷಗಳಿಗಿಂತ ಈ ವರ್ಷ ತೀವ್ರ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಚಿಕ್ಲಿಹೊಳೆ ಜಲಾಶಯದ ನೀರು ಪೂರ್ಣ ಖಾಲಿಯಾಗಿದೆ. ಹೀಗಾಗಿ 4 ದಶಕಗಳ ಹಿಂದೆ ಜಲಾಶಯದೊಳಗೆ ಮುಳುಗಡೆಯಾಗಿದ್ದ ದೇವಾಲಯ ಈ ವರ್ಷ ಪ್ರತ್ಯಕ್ಷವಾಗಿರುವುದು ಎಲ್ಲರನ್ನೂ ಅಚ್ಚರಿ ಮೂಡಿಸಿದೆ. 

Follow Us:
Download App:
  • android
  • ios