Asianet Suvarna News Asianet Suvarna News

ಚಿಕ್ಕಮಗಳೂರು: ಆಟಿ ಅಮಾವಾಸೈ: ಮದ್ದಾಲೆ ಮರದೌಷಧ ಸೇವನೆ

ಚಿಕ್ಕಮಗಳೂರಿನಲ್ಲಿ ಆಟಿ ಅಮವಾಸ್ಯೆಯನ್ನು ಆಚರಿಸಲಾಯಿತು. ಆಷಾಢಮಾಸದ ಅಮಾವಾಸೈ (ಆಟಿ) ಅಂಗವಾಗಿ ಹೋಬಳಿಯ ವಿವಿಧೆಡೆಗಳ ಜನರು ರೋಗನಿರೋಧಕ ಶಕ್ತಿ ಹೊಂದಿರುವ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆಯ ಔಷಧ (ಕಷಾಯ)ವನ್ನು ಶುಕ್ರವಾರ ಮುಂಜಾನೆ ಸೇವಿಸಿದರು.

In Chikkamagaluru people celebrates Aati Amavasya
Author
Bangalore, First Published Aug 2, 2019, 12:18 PM IST

ಚಿಕ್ಕಮಗಳೂರು(ಆ.02): ಬಾಳೆಹೊನ್ನೂರಿನಲ್ಲಿ ಆಷಾಢಮಾಸದ ಅಮಾವಾಸೈ (ಆಟಿ) ಅಂಗವಾಗಿ ಹೋಬಳಿಯ ಜನರು ರೋಗನಿರೋಧಕ ಶಕ್ತಿ ಹೊಂದಿರುವ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆಯ ಔಷಧ (ಕಷಾಯ)ವನ್ನು ಶುಕ್ರವಾರ ಮುಂಜಾನೆ ಸೇವಿಸಿದರು.

ಈ ಹಿಂದಿನ ಕಾಲದಿಂದಲೂ ಮದ್ದಾಲೆ ಮರದ ತೊಗಟೆಯನ್ನು ಕೆತ್ತಿ ಕಷಾಯ ತಯಾರಿಸಿ ಕುಡಿಯುವ ಪದ್ಧತಿಯಿದ್ದರೂ, ಆಷಾಢದ ಅಮಾವಾಸ್ಯೆ ದಿನ ಇದನ್ನು ಉಪಯೋಗಿಸುವುದರಿಂದ ಹಲವು ರೋಗ ನಿವಾರಣೆಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಕಲ್ಲಿನಿಂದ ಕೆತ್ತಿ ತೊಗಟೆ ತೆಗೆಯುತ್ತಾರೆ:

ಅಮಾವಾಸ್ಯೆಯ ದಿನ ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮೀ ಮೂಹೂರ್ತದಲ್ಲಿ, ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಮದ್ದಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತಂದು ಮನೆಯಲ್ಲಿ ಔಷಧವನ್ನು ತಯಾರಿಸಬೇಕು ಎಂಬ ಬಗ್ಗೆ ಹಲವು ಪುಸ್ತಕಗಳಲ್ಲಿಯೂ ಉಲ್ಲೇಖವಿದೆ.

ರೋಗ ನಿರೋಧಕ ಶಕ್ತಿ:

ಮದ್ದಾಲೆ ಮರದ ಎಲೆಗೆ ಸಂಸ್ಕೃತದಲ್ಲಿ ಸಪ್ತವರ್ಣ (ಸಪ್ತಪರ್ಣ) ಎನ್ನುತ್ತಾರೆ. ಮದ್ದಾಲೆ ಮರದಲ್ಲಿ ಕಾಯಿಲೆಗಳನ್ನು ನಿವಾರಿಸುವ ಗುಣ, ವೈರಾಣು ನಿರೋಧಕ, ಕ್ಯಾನ್ಸರ್‌ ನಿರೋಧಕ ಮತ್ತು ಕ್ಯಾನ್ಸರ್‌ ಗಡ್ಡೆಯ ಗಾತ್ರ ಕಡಿಮೆ ಮಾಡುವ ಗುಣ, ಯಕೃತ್‌ ರಕ್ಷಿಸುವ ಗುಣ, ಅತಿಸಾರ ನಿರೋಧಕ, ಜ್ವರ ಕಡಿಮೆ ಮಾಡುವ ಗುಣ ಹೊಂದಿದೆ. ಆಟಿ ಅಮಾವಾಸೈಯ ಆಚರಣೆ ದೇಶಾದ್ಯಂತ ಇದೆ. ಆದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಈ ರೀತಿ ಔಷಧ ಸ್ವೀಕರಿಸುವ ಮೂಲಕ ಆಟಿ ಆಚರಣೆ ವಿಶೇಷವಾಗಿದೆ.

ಮದ್ದಾಲೆ ಮರದ ತೊಗಟೆಯನ್ನು ಕೆತ್ತಿ ತಂದ ಬಳಿಕ ಅದನ್ನು ಜಜ್ಜಿ ಅದಕ್ಕೆ ಕೆಲವು ಔಷಧೀಯ ಮಸಾಲೆ ಪದಾರ್ಥದ ವಸ್ತುಗಳನ್ನು ಸೇರಿಸಿ ರಸ ತೆಗೆಯುತ್ತಾರೆ. ಹೀಗೆ ತೆಗೆದ ರಸವನ್ನು ಓರ್ವ ವ್ಯಕ್ತಿ 24 ಮಿ.ಲೀ. ಸೇವಿಸಬಹುದು. ಕುದಿಸಿ ಕಷಾಯ ಮಾಡಿದರೆ 50 ಮಿ.ಲಿ.ಯಷ್ಟುಸೇವನೆ ಮಾಡಬಹುದು.

ಕ್ಯಾಂಟೀನ್‌ನಲ್ಲಿ ಔಷಧ ವಿತರಣೆ:

ಪಟ್ಟಣದ ಬಸ್‌ ನಿಲ್ದಾಣ ಸಮೀಪದಲ್ಲಿ ಮೊಬೈಲ್‌ ಕ್ಯಾಂಟೀನ್‌ ನಡೆಸುವ ವಾಟುಕೊಡಿಗೆಯ ಕೃಷ್ಣಮೂರ್ತಿ ಅವರು ಆಟಿ ಅಮಾವಾಸ್ಯೆಯ ದಿನವಾದ ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ತಮ್ಮ ಸ್ಕಂದ ಕ್ಯಾಂಟೀನ್‌ಗೆ ಬಂದ 100ಕ್ಕೂ ಅಧಿಕ ಗ್ರಾಹಕರಿಗೆ ಉಚಿತವಾಗಿ ಆಟಿ ಔಷಧ ವಿತರಿಸಿ ಗಮನಸೆಳೆದರು. ಪ್ರಮುಖವಾಗಿ ಬಸ್‌ ಚಾಲಕರು, ನಿರ್ವಾಹಕರು, ಆಟೋ ಚಾಲಕರು ಸೇರಿದಂತೆ ವಿವಿಧ ಗ್ರಾಹಕರು ಸಹ ಬೆಳ್ಳಂಬೆಳಗ್ಗೆಯೇ ಖುಷಿ ಖುಷಿಯಿಂದ ಔಷಧ ಸ್ವೀಕರಿಸಿ ಆಟಿ ಅಮಾವಾಸೈಯ ಸ್ವೀಕರಿಸಿ, ಉಪಾಹಾರ ತೆಗೆದುಕೊಂಡು ತೆರಳಿದರು. ಕೃಷ್ಣಮೂರ್ತಿ 5 ವರ್ಷಗಳಿಂದ ನಿರಂತರವಾಗಿ ಹೀಗೆ ಔಷಧವನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

Follow Us:
Download App:
  • android
  • ios