ಅಸಮಾನತೆ, ಜಾತೀಯತೆ ಜೀವಂತವಾಗಿರುವ ದೇಶದಲ್ಲಿ ದಲಿತರು ಬೌದ್ಧ ಧರ್ಮೀಯರಾಗಲೇಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ ತಿಳಿಸಿದರು.

ಮೈಸೂರು : ಅಸಮಾನತೆ, ಜಾತೀಯತೆ ಜೀವಂತವಾಗಿರುವ ದೇಶದಲ್ಲಿ ದಲಿತರು ಬೌದ್ಧ ಧರ್ಮೀಯರಾಗಲೇಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯು (ಬುದ್ಧವಾದ) ಶನಿವಾರ ಆಯೋಜಿಸಿದ್ದ ದಲಿತರ ನಡೆ– ಬೌದ್ಧ ಧರ್ಮದ ಕಡೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಆತ್ಮವಂಚನೆ ಮಾಡಿಕೊಳ್ಳದೇ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅನುಸರಿಸಬೇಕು ಎಂದರು.

ಡಾ.ಅಂಬೇಡ್ಕರ್ ಅವರು ಜೀವನದುದ್ದಕ್ಕೂ ದಲಿತರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಎರಡು ಸಾವಿರ ವರ್ಷಗಳಿಂದ ವೇದ, ಪುರಾಣ ಹಾಗೂ ದೇವರ ಮೂಲಕ ಕತ್ತಲಲ್ಲಿ ರೌರವ ನರಕ ಯಾತನೆ ಅನುಭವಿಸಿದ್ದ ಶೋಷಿತ ಸಮುದಾಯವನ್ನು ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪಾರು ಮಾಡಿದರು ಎಂದರು.

ದಬ್ಬಾಳಿಕೆ, ಯುದ್ಧವನ್ನು ಬುದ್ಧ ಎಂದಿಗೂ ವಿರೋಧಿಸಿದರು. ಶಾಂತಿ, ನೆಮ್ಮದಿ, ನ್ಯಾಯದಿಂದ ನಡೆದುಕೊಳ್ಳುವ ರಾಜ್ಯಗಳು ಕಲ್ಯಾಣ ರಾಜ್ಯಗಳಾಗಿವೆ. ಸುಜ್ಞಾನದ ಮಾರ್ಗವನ್ನು ಅನುಸರಿಸಬೇಕು. ವೈಚಾರಿಕ ಚಿಂತನೆಗಳನ್ನೊಳಗೊಂಡ ಬುದ್ಧ ಮಾರ್ಗವನ್ನು ಅನುಸರಿಸಬೇಕು ಎಂದರು.

ಪುರಾಣಗಳ ಮೂಲಕ ಅಸ್ಪೃಶ್ಯತೆ, ಅಸಮಾನತೆ, ಮೌಢ್ಯದಿಂದ ಸಮಾಜವನ್ನು ಸೃಷ್ಟಿಸಲಾಗಿದೆ. ಮೌಢ್ಯವೇ ಬಡವರು, ದಲಿತರನ್ನು ಬಡತನದಲ್ಲಿಟ್ಟಿದೆ. ಹೀಗಾಗಿಯೇ, ದಲಿತರ ಮೇಲೆ ದೌರ್ಜನ್ಯಗಳು ದೇಶದಲ್ಲಿ ಮುಂದುವರಿದಿವೆ. ಬೌದ್ಧ ಧರ್ಮ ಎಲ್ಲಾ ಧರ್ಮವನ್ನು ಪ್ರೀತಿಯಿಂದ ಗೌರವಿಸುತ್ತದೆ. ಬುದ್ಧನ ಪಂಚಶೀಲ, ಅಷ್ಟಾಂಗ ಮಾರ್ಗವನ್ನು ಅನುಸರಿಸಿದರೇ ಸಮ ಸಮಾಜ ನಿರ್ಮಾಣವಾಗುತ್ತದೆ. ಬುದ್ಧ– ಬಾಬಾ ಸಾಹೇಬರ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ಬುದ್ಧ ಧರ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪ ವಿಚಾರ ಮಂಡಿಸಿದರು. ದಸಂಸ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಸಂಘಟನಾ ಸಂಚಾಲಕ ಕೆ. ನಂಜಪ್ಪ ಬಸವನಗುಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಸಂಸ ಮುಖಂಡರಾದ ಎಚ್.ಬಿ. ದಿವಾಕರ್, ಉಮಾ ಮಹದೇವ್, ಬಸವಲಿಂಗಯ್ಯ, ಎನ್. ಮಾರ, ಸಿ.ಎಸ್. ಜಗದೀಶ್, ಸತ್ಯಪ್ಪ, ಡಿ. ಕುಮಾರ್, ತಟ್ಟೆಕೆರೆ ನಾಗರಾಜ, ಕೃಷ್ಣ ಮೊದಲಾದವರು ಇದ್ದರು.