ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಗೆ ಸಜ್ಜು ಮಹೇಶ್ ಸೇರ್ಪಡೆಯಿಂದ ನನಗೆ ಯಾವ ಅನಾನುಕೂಲ ಇಲ್ಲ ಮಾಜಿ ಶಾಸಕಗೆ ಶುರುವಾಗಿದೆಯಾ ಟಿಕೆಟ್ ಆತಂಕ?

ಕೊಳ್ಳೆಗಾಲ (ಆ.02): ಶಾಸಕ ಮಹೇಶ್ ಅವರು ಅನುಕೂಲ ಸಿಂಧು ರಾಜಕಾರಣಕ್ಕಾಗಿ ಬಿಜೆಪಿ ಸೇರ್ಪಡೆಯಾದರೆ ಪಕ್ಷ ಅದನ್ನು ಸಹಿಸಲ್ಲ. ಅವರು ಯಾವುದೇ ಷರತ್ತಿಲ್ಲದೇ ಪಕ್ಷ ಸೇರ್ಪಡೆ ಎಂದಿದ್ದಾರೆ. ಹಾಗಾಗಿ ಪಕ್ಷ ಸೇರ್ಪಡೆ ಬಳಿಕ ಯಾವುದೇ ತಂಟೆ ತಕರಾರು ಉಂಟು ಮಾಡಿದರೆ ಪಕ್ಷ ನಿಜಕ್ಕೂ ಸಹಿಸುವುದಿಲ್ಲ. ಅವರ ಸೇರ್ಪಡೆಯಿಂದ ನನಗೆ ಯಾವುದೇ ಅನಾನುಕೂಲತೆ ಆಗಲ್ಲ ಹಿನ್ನಡೆಯೂ ಆಗಲ್ಲ ಎಂದು ಮಾಜಿ ಶಾಸಕ ನಂಜುಂಡಸ್ವಾಮಿ ಹೇಳಿದರು. 

Add Asianetnews Kannada as a Preferred SourcegooglePreferred

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಮಹೇಶ್ ಅವರು ಪಕ್ಷ ಸೇರಿ ಬಿಜೆಪಿ ಟಿಕೆಟ್ ಪಡೆದು ಎಂಎಲ್‌ಎ ಆಗುವೆ ಎನ್ನುವ ಅಸೆ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂಬ ವಿಶ್ವಾಸವಿದೆ. ಅವರು ಪಕ್ಷ ಸೇರಿದರೂ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ ಜೊತೆಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯೂ ಇದೆ ಎಂದರು. 

ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..!

ನಾನು 30 ವರ್ಷಗಳಿಂದ ಪ್ರಮಾಣಿಕವಾಗಿ ರಾಜಕಾರಣ ಮಾಡಿಕೊಂಡು ಬಂದವನು. ಅಂದು ಕಾಂಗ್ರೆಸ್‌ನಲ್ಲಿದ್ದಾಗಲೂ ನನ್ನ ವಿರುದ್ಧ ಅನೇಕ ಟಿಕೆಟ್ ಅಕಾಂಕ್ಷಿಗಳಿದ್ದರು. ಇಂದು ಬಿಜೆಪಿಯಲ್ಲೂ ಇರಬಹುದು. ಆದರೆ ನನ್ನ ಪಕ್ಷ ನಿಷ್ಟೆಗೆ ಖಂಡಿತಾ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವಿದೆ ಎಂದರು. 

ಆಗಸ್ಟ್ 5 ರಂದು ಅಧಿಕೃತವಾಗಿ ಶಾಸಕ ಮಹೇಶ್ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಬಿಎಸ್‌ಪಿಯಲ್ಲಿದ್ದ ಅವರನ್ನು ಅಲ್ಲಿಂದ ಉಚ್ಛಾಟನೆ ಮಾಡಲಾಗಿತ್ತು. ಬಳಿಕ ತಟಸ್ಥರಾಗಿ ಮುಂದುವರಿದಿದ್ದು ಇದೀಗ ಕಮಲ ಪಾಳಯ ಸೇರಲು ಸಜ್ಜಾಗಿದ್ದಾರೆ.