ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರಾ ಅಥವಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರಾ ಅಥವಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಹೇಳಿದ್ದಾರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ

ಹಾವೇರಿ(ಡಿ.04): ‘ನಾನು ಇನ್ನು ಒಂದೂವರೆ ವರ್ಷಕ್ಕೆ ನಿವೃತ್ತಿಯಾಗುತ್ತೇನೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಅವರು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರಾ ಅಥವಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರಾ ಅಥವಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಹೇಳಿದ್ದಾರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಶನಿವಾರ ಇಲ್ಲಿ ನಡೆದ ಬ್ಯಾಂಕರ್ಸ್‌ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಬ್ಯಾಂಕರ್ಸ್‌ಗಳ ಕಳಪೆ ಸಾಧನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಿಮಗೆ ಹೇಳಿ, ಹೇಳಿ ಸಾಕಾಗಿದೆ. ಮುಂದಿನ ತ್ರೈಮಾಸಿಕದೊಳಗಾಗಿ 10 ಗ್ರಾಮೀಣ ಶಾಖೆ ಆರಂಭಿಸುವ ಸವಾಲು ಸ್ವೀಕರಿಸಿ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು. 

Karnataka Politics: ಕಾಂಗ್ರೆಸ್‌ ಸರ್ಕಾರ ಮಾಡಿದ ಸಾಲ ಮೋದಿ ಸರ್ಕಾರ ತೀರಿಸುತ್ತಿದೆ: ಉದಾಸಿ

ಇದೇ ಸಂದರ್ಭದಲ್ಲಿ, ನಿಮ್ಮ ನಿವೃತ್ತಿಗೆ ಎಷ್ಟು ವರ್ಷವಿದೆ ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಮೂರು ವರ್ಷವಿದೆ ಎಂದರು. ‘ನನ್ನ ನಿವೃತ್ತಿಗೆ ಇನ್ನು ಒಂದೂವರೆ ವರ್ಷವಿದೆ. ಪ್ರತಿ ಸಭೆಯಲ್ಲಿ ಹೇಳಿದ್ದನ್ನೇ ಹೇಳಿ ಸಾಕಾಗಿದೆ’ ಎಂದು ಉದಾಸಿ ಹೇಳಿದರು.