ಕಳೆದ 5 ವರ್ಷಗಳ ಅವಧಿಯಲ್ಲಿ ಜನಸೇವೆ ಮತ್ತು ರಾಜಕಾರಣ ಮಾಡಲು . 25 ಕೋಟಿ ಸಾಲ ಮಾಡಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್‌ ಭಾವುಕರಾಗಿ ನುಡಿದರು.

 ಕೆ.ಆರ್‌. ನಗರ : ಕಳೆದ 5 ವರ್ಷಗಳ ಅವಧಿಯಲ್ಲಿ ಜನಸೇವೆ ಮತ್ತು ರಾಜಕಾರಣ ಮಾಡಲು . 25 ಕೋಟಿ ಸಾಲ ಮಾಡಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್‌ ಭಾವುಕರಾಗಿ ನುಡಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈವರೆಗೆ ನಾನು ಮತ್ತು ನನ್ನ ಪತ್ನಿ ಸಾಲಗಾರರಾಗಿದ್ದೆವು ಈಗ ಮಕ್ಕಳನ್ನು ಸಾಲಗಾರರ್ನನಾಗಿಸಿದ್ದೇವೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ನಂತರ ಯಾವುದೇ ಗುತ್ತಿಗೆದಾರ ಮತ್ತು ಅಧಿಕಾರಿಯಿಂದ ನಯಾಪೈಸೆ ಹಣ ಪಡೆದಿಲ್ಲ. ಈ ವಿಚಾರದಲ್ಲಿ ಜನರೆ ತಮ್ಮ ಅಭಿಪ್ರಾಯ ಹೇಳಲಿದ್ದಾರೆ ಎಂದು ತಿಳಿಸಿದರು. ನನ್ನ ವಿರುದ್ಧ ಇತರ ರಾಜಕಾರಣಿಗಳು ಮತ್ತು ವಿರೋಧ ಪಕ್ಷದವರು ಮಾತನಾಡಲು ವಿಚಾರಗಳಿಲ್ಲ. ಇದಕ್ಕೆ ಸಾಕ್ಷಿ ಕಳೆದ ಎರಡು ದಿನಗಳ ಹಿಂದೆ ಸಾಲಿಗ್ರಾಮಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಯಾವುದೇ ಟೀಕೆ ಮಾಡದಿರುವುದು ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ

 ಕೆ.ಆರ್‌. ನಗರ (ನ.20): ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ನಾನೆಂದೂ ಜಾತಿ ಮತ್ತು ಪಕ್ಷ ರಾಜಕೀಯ ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯ (Road) ಎಡಭಾಗದ ಪ್ರಮುಖ ರಸ್ತೆಗಳಿಗೆ ಸುಮಾರು 1.75 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಶಿಕ್ಷಣ, ರಸ್ತೆ, ವಿದ್ಯುತ್‌, ಮನೆ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲಾಗಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರಬೇಕಾಗಿದ್ದ ಅನುದಾನ ಸಮರ್ಪಕವಾಗಿ ಬಾರದ ಕಾರಣ ಆ ಸಂಧರ್ಭದಲ್ಲಿ ಅಭಿವೃದ್ದಿ ಕಾರ್ಯಗಳು ಸ್ವಲ್ಪ ಕುಂಠಿತವಾಗುವಂತಾಯಿತು ಆದರೆ ನಂತರದಲ್ಲಿ ಸರ್ಲಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಿ ಹಂತ ಹಂತವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಆದ್ಯತೆ ಮೇಲೆ ಕೆಲಸ ಕೊಡಿ

 ಕೆ.ಆರ್‌.ನಗರ : ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆಸದೆ ಆದ್ಯತೆಯ ಮೇಲೆ ಅವರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜನ ಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಈ ವಿಚಾರದಲ್ಲಿ ದೂರುಗಳು ಕೇಳಿ ಬಂದರೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ (Village) ರಸ್ತೆ (Road) ನಿರ್ಮಾಣ ಮಾಡುವಾಗ ಒತ್ತುವರಿಯಾಗಿ ಜಾಗ ಕಳೆದುಕೊಂಡಿರುವವರ ಪಟ್ಟಿ ಮಾಡಿ ಎಂದು ಪಿಡಿಒ (PDO) ರವಿ ಅವರಿಗೆ ಆದೇಶಿಸಿದ ಅವರು, ಮುಂದೆ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿ ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಅವರನ್ನು ಗುರುತಿಸಿ ಅನುಕೂಲ ಮಾಡಿಕೊಡಬೇಕು ಹಾಗೂ ಇಂದಿನ ಸಭೆಯಲ್ಲಿ ಬಂದಿರುವ ಕುಂದು ಕೊರತೆ ಅರ್ಜಿಗಳಿಗೆ ವಾರದಲ್ಲಿ ಪರಿಹಾರ ಸೂಚಿಸಬೇಕೆಂದರು.

ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದರ ಜತೆಗೆ ಪರಿಶೀಲನೆ ನಡೆಸಿ ಕೆಲಸಗಳು ನಡೆಯುವಂತೆ ಕ್ರಮ ಕೈಗೊಂಡು ಯಾವುದೆ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದರು.

ಆ ನಂತರ ಅವರು ಚಂದಗಾಲು ಗ್ರಾಮದಿಂದ ಅರ್ಕೇಶ್ವರ ಗ್ರಾಮದ ದೇವಾಲಯದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಕಾಟ್ನಾಳು ಮತ್ತು ಚಂದಗಾಲು ಗ್ರಾಮಗಳಿಗೆ ತೆರಳಿ ಜನ ಸ್ಪಂದನಾ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದರು.

ಚಂದಗಾಲು ಗ್ರಾಪಂ ಅಧ್ಯಕ್ಷ ಸುರೇಶ್‌, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಭಾಗ್ಯಕೃಷ್ಣ, ಪ್ರಕಾಶ್‌, ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷಿ ್ಮೕ, ತಹಸೀಲ್ದಾರ್‌ ಎಂ.ಎಸ್‌.ಯದುಗಿರೀಶ್‌, ತಾಪಂ ಇಒ ಎಚ್‌.ಕೆ. ಸತೀಶ್‌, ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್‌, ಬಿಇಒ ಟಿ.ಎನ್‌. ಗಾಯತ್ರಿ, ಡಿಪೋ ವ್ಯವಸ್ಥಾಪಕ ಮಹೇಶ್‌, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌. ಮಹೇಂದ್ರಪ್ಪ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜೆ.ಮಹೇಶ್‌, ಸಮಾಜ ಕಲ್ಯಾಣಾಧಿಕಾರಿ ಅಶೋಕ್‌, ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಜಿ.ಜೆ. ಈರಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಅರ್ಕೇಶ್‌ಮೂರ್ತಿ, ರಾಜಾರಾಂ ವೈಲಾಯ, ವಿಜಯಕುಮಾರ್‌, ಗುರುರಾಜು, ಕಿರಿಯ ಎಂಜಿನಿಯರ್‌ ಜಿ. ಸಿದ್ದೇಶ್‌ಪ್ರಸಾದ್‌, ಪಿಎಸ್‌ಐ ಎಲ್‌. ಚಂದ್ರಹಾಸ ಇದ್ದರು.