ನಾನೊಮ್ಮೆ ಕಾಂಗ್ರೆಸ್‌ ತೊರೆದುು ಬಿಜೆಪಿ ಸೇರಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆಯೆ ಹೊರತು ಕಾಂಗ್ರೆಸ್‌ ಪಕ್ಷಕ್ಕೆ ಸೇರಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 

ಹೊಸಕೋಟೆ (ಅ.12) : ನಾನೊಮ್ಮೆ ಕಾಂಗ್ರೆಸ್‌ ತೊರೆದುು ಬಿಜೆಪಿ ಸೇರಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆಯೆ ಹೊರತು ಕಾಂಗ್ರೆಸ್‌ ಪಕ್ಷಕ್ಕೆ ಸೇರಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ವಾಗಟ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಎಂಟಿಬಿ ನಾಗರಾಜ್‌ (MTB Nagaraj) ಮರಳಿ ಕಾಂಗ್ರೆಸ್‌ಗೆ (Congress) ಹೋಗ್ತಾರೆ ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ (JDS) -ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದ ವೇಳೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಪ್ರಮಾಣದ ಅನುದಾನ ನೀಡದ ಪರಿಣಾಮ ನಾನು ಶಾಸಕ ಸ್ಥಾನ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣನಾದೆ. ಉಪ ಚುನಾವಣೆಯಲ್ಲಿ ನಾನು ಸೋತರೂ ಬಿಜೆಪಿ ನನ್ನನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನವನ್ನೂ ಕೊಟ್ಟಿದೆ. ಅಲ್ಲದೆ ಪಕ್ಷ ಹಾಗೂ ಅಲ್ಲಿನ ಹಿರಿಯ ಕಾರ್ಯಕರ್ತರು ಕೂಡ ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಪಕ್ಷ ಸಂಘಟನೆ ಮಾಡುವಲ್ಲಿ ನಿರತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆದರೆ ಕೆಲವು ಮಾಧ್ಯಮಗಳಲ್ಲಿ ಎಂಟಿಬಿ ನಾಗರಾಜ್‌ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗ್ತಾರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂಟಿಬಿ ಪುತ್ರ ಎಂಟಿಬಿ ನಿತೀಶ್‌ ಪುರುಷೋತ್ತಮ್‌ ಅವರಿಗೆ ಪಕ್ಷಕ್ಕೆ ಬರಲು ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಪ್ರಸಾರದ ಜೊತೆಗೆ ಕ್ಷೇತ್ರದಲ್ಲೂ ಕೂಡ ವ್ಯಾಪಕವಾಗಿ ಸುದ್ದಿ ಹರಿಡಿದೆ. ಆದರೆ ನಾನು ಅ​ಧಿಕಾರಕ್ಕಾಗಿ ಪದೇಪದೆ ಪಕ್ಷ ಬದಲಾವಣೆ ಮಾಡುವ ವ್ಯಕ್ತಿಯಲ್ಲ. ನನ್ನ ರಾಜಕೀಯ ಜೀವನ ಏನಿದ್ದರೂ ಬಿಜೆಪಿ ಪಕ್ಷದಲ್ಲೆ ಮುಂದುವರೆಯುತ್ತೆ, ಕಾರ್ಯಕರ್ತರು ಯಾರೂ ಗೊಂದಲ ಸೃಷ್ಟಿಸಿಕೊಳ್ಳುವುದು ಬೇಡ ಎಂದು ಸ್ಪಷ್ಟಪಡಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜ್‌, ಮುಖಂಡರಾದ ವಾಗಟ ಸುರೇಶ್‌ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಸಿದ್ದರಾಮಯ್ಯ ಫೋನ್‌ ಮಾಡ್ತಾರೆ, ರಾಜಕೀಯವಾಗಿ ಮಾತನಾಡಲ್ಲ

ನಾನು ಬಿಜೆಪಿ ಸರ್ಕಾರದಲ್ಲಿ ಪೌರಾಡಳಿತ ಹಾಗೂ ಸಣ್ಣ ಉದ್ದಿಮೆಗಳ ಖಾತೆ ಸಚಿವನಾಗಿರುವೆ. ಆದಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನಗೆ ದೂರವಾಣಿ ಕರೆ ಮಾಡಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ರಾಜಕೀಯವಾಗಿ ಎಂದಿಗೂ ಮಾತನಾಡಿಲ್ಲ. ಆದ್ದರಿಂದ ಕೇವಲ ರಾಜಕೀಯವಾಗಿ ನಮ್ಮ ಕಾರ್ಯಕರ್ತರನ್ನು ​ಧಿಕ್ಕು ತಪ್ಪಿಸುವ ಕೆಲಸ ಯಾರೊಬ್ಬರಿಂದಲೂ ಆಗಬಾರದು ಎಂದು ಸಚಿವ ಎಂಟಿಬಿ ನಾಗರಾಜ್‌ ಸ್ಪಷ್ಟನೆ ನೀಡಿದ್ದಾರೆ.

 ಹೊರಗುತ್ತಿಗೆ ಕಾರ್ಮಿಕರಿಗೆ ಆದ್ಯತೆ: ಪೌರಾಡಳಿತ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಕ್ಷೇತ್ರಗಳಲ್ಲಿ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೇರ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ ಅವರು, ದೇಶಕ್ಕೆ ರೈತ ಬೆನ್ನೆಲುಬಾಗಿರುವ ರೀತಿ ನಗರಕ್ಕೆ ಪೌರಕಾರ್ಮಿಕರೆ ಬೆನ್ನೆಲುಬು. ಹಲವಾರು ಸಮಸ್ಯೆಗಳ ನಡುವೆ ಪೌರ ಕಾರ್ಮಿಕರು ಪ್ರತಿ ದಿನ ನಗರವನ್ನು ಸ್ವಚ್ಛ ಮಾಡುತ್ತಾ ಜನರ ಆರೋಗ್ಯ ಕಾಪಾಡುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ವೇತನ ತಾರತಮ್ಯ ಸಮಸ್ಯೆ ಎದುರಿಸುತ್ತಿದ್ದ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಬಿಜೆಪಿ ಸರ್ಕಾರ ದಿಟ್ಟಕ್ರಮ ಕೈಗೊಂಡಿದೆ. 11,500 ಪೌರ ಕಾರ್ಮಿಕರನ್ನು ಕಾಯಂಗೊಳಿಸಿದೆ. ನನ್ನ ಅವ​ಧಿಯಲ್ಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಿರುವ ಸಂತಸ ಹಾಗೂ ತೃಪ್ತಿ ನನಗಿದೆ ಎಂದರು.

ನೇರ ಗುತ್ತಿಗೆಗೆ ಆದ್ಯತೆ:

ವಾಲ್‌ಮ್ಯಾನ್‌, ವಾಟರ್‌ ಮ್ಯಾನ್‌, ಕಂಪ್ಯೂಟರ್‌ ಆಪರೇಟರ್‌, ಲೋಡರ್‌, ಚಾಲಕರು ಈಗ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಗುತ್ತಿಗೆದಾರರು ಕಮಿಷನ್‌ ಹಿಡಿದುಕೊಂಡು ವೇತನ ಪಾವತಿಸುತ್ತಿದ್ದಾರೆ. ನೇರ ಗುತ್ತಿಗೆಯಲ್ಲಿ ಅವರ ಸೇವೆ ಕಾಯಂಗೊಳಿಸಿದರೆ ಅವರಿಗೆ ಐದಾರು ಸಾವಿರ ವೇತನ ಹೆಚ್ಚಾಗಲಿದದೆ. ಈ ಕುರಿತು ಈಗಾಗಲೆ ಸಿಎಂ ಹಾಗೂ ಅಧಿ​ಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ತ್ವರಿತವಾಗಿ ಅನುಷ್ಠಾನ ಮಾಡುತ್ತೇನೆ ಎಂದು ಹೇಳಿದರು.

ಗುಂಪು ಮನೆಗಳ ನಿರ್ಮಾಣ:

ನಗರದ ವಿವೇಕಾನಂದ ಶಾಲೆ ಹಿಂಭಾಗದಲ್ಲಿರುವ ಒಂದೂವರೆ ಎಕರೆ ಜಾಗ ಸ್ಲಂ ಬೋರ್ಡ್‌ಗೆ ಸೇರಿದ್ದು ಗುಂಪು ಮನೆಗಳನ್ನು ನಿರ್ಮಿಸಿ ಹಕ್ಕುಪತ್ರ ನೀಡಲಾಗುವುದು. ಈ ಬಗ್ಗೆ ಇಲಾಖೆ ಅ​ಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಆರಂಭಿಸಲಾಗುವುದು. ಉಳಿದಂತೆ ಪ್ರಗತಿಯಲ್ಲಿರುವ ನಗರಸಭೆ ಕಟ್ಟಡ, ಕಲ್ಲಹಳ್ಳಿ ಬಳಿಯ ಕಸ ವಿಲೇವಾರಿ ಘಟಕದ ಕಾಮಗಾರಿಗೆ ವೇಗ ನೀಡಲು ಸಚಿವ ಎಂಟಿಬಿ ನಾಗರಾಜ್‌ ಸೂಚಿಸಿದರು.

ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್‌, ಪೌರಾಯುಕ್ತ ಪ್ರಸಾದ್‌, ನಗರಸಭೆ ಸದಸ್ಯರಾದ ರಾಮಾಂಜಿನಿ, ಸಿಪಿಎನ್‌ ನವೀನ್‌, ಟೌನ್‌ ಬ್ಯಾಂಕ್‌ ನಿರ್ದೇಶಕ ರಾಜಶೇಖರ್‌, ಜಿಟಿ ಕೇಬಲ್‌ ಮೋಹನ್‌ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.